ಉ.ಪ್ರ: ಎಟಿಎಸ್ನಿಂದ ಮೂವರು ಶಂಕಿತ ಭಯೋತ್ಪಾದಕರ ಸೆರೆ

ಲಕ್ನೋ,ಎ.20: ದೇಶದ ವಿವಿಧೆಡೆಗಳಲ್ಲಿ ಭಯೋತ್ಪಾದಕ ದಾಳಿಗಳಿಗೆ ಸಂಚು ನಡೆಸುತ್ತಿದ್ದರೆಂದು ಶಂಕಿಸಲಾಗಿರುವ ಮೂವರು ವ್ಯಕ್ತಿಗಳನ್ನು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಗುರುವಾರ ಬಂಧಿಸಿದೆ.
ದಿಲ್ಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಬಿಹಾರ ಪೊಲೀಸರ ಸಹಕಾರದೊಂದಿಗೆ ಈ ಬಂಧನ ಕಾರ್ಯಾಚರಣೆ ನಡೆದಿದೆ.
ಆರೋಪಿಗಳನ್ನು ಮುಂಬೈ, ಪಂಜಾಬ್ನ ಜಲಂಧರ್ ಮತ್ತು ಉತ್ತರ ಪ್ರದೇಶದ ಬಿಜ್ನೋರ್ಗಳಿಂದ ಬಂಧಿಸಲಾಗಿದೆ. ಇತರ ಆರು ಜನರನ್ನು ವಿಚಾರಣೆಗೊಳಪಡಿಸ ಲಾಗಿದೆ. ಸಾಕ್ಷಾಧಾರಗಳನ್ನು ಆಧರಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ಉ.ಪ್ರ.ಎಟಿಎಸ್ ಹೇಳಿಕೆಯಲ್ಲಿ ತಿಳಿಸಿದೆ.
ಮುಂಬೈ, ಪಂಜಾಬ್ನ ಲುಧಿಯಾನಾ, ಬಿಹಾರದ ನರ್ಕತಿಗಂಜ್, ಬಿಜ್ನೋರ್ ಮತ್ತು ಉ.ಪ್ರದೇಶದ ಮುಝಫರ್ನಗರಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.
ಬಂಧಿತ ವ್ಯಕ್ತಿಗಳ ವಿವರಗಳನ್ನು ಶೀಘ್ರವೇ ಬಹಿರಂಗಗೊಳಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಶಂಕಿತರು ಭಯೋತ್ಪಾದಕ ದಾಳಿಗಳನ್ನು ನಡೆಸಲು ಹೊಸ ಸಂಘಟನೆಯೊಂದನ್ನು ರೂಪಿಸುತ್ತಿದ್ದ ಗುಂಪೊಂದರ ಭಾಗವಾಗಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಗುಂಪು ಹೊಸದಾಗಿ ಜನರನ್ನು ಸೇರಿಸಿಕೊಳ್ಳುತ್ತಿತ್ತು ಎನ್ನಲಾಗಿದೆ.