ಮಧ್ಯಕಾಲೀನ ಕನಾಟಕದ ಜಲವಾಸ್ತುಶಿಲ್ಪ: ರಾಷ್ಟ್ರೀಯ ವಿಚಾರ ಸಂಕಿರಣ
ದಾವಣಗೆರೆ, ಎ.20: ಭಾರತದಲ್ಲಿನ ಕೆರೆ, ಬಾವಿಗಳ ಕೋಡಿ, ತೂಬು, ವಿನ್ಯಾಸಗಳನ್ನು ನೋಡಿಯೇ ಬ್ರಿಟಿಷರು ಡ್ಯಾಂಗಳನ್ನು ನಿರ್ಮಿಸಿದರು ಎಂದು ಕುವೆಂಪು ವಿವಿಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ. ರಾಜಾರಾವ್ ಹೆಗ್ಡೆ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಇತಿಹಾಸ ಅಧ್ಯಾಪಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಧ್ಯಕಾಲೀನ ಕನಾಟಕದ ಜಲವಾಸ್ತುಶಿಲ್ಪ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಭಾರತಕ್ಕೆ ಮೊದಲ ಬಾರಿಗೆ ಬಂದ ಬ್ರಿಟಿಷರು ಇಲ್ಲಿನ ಕೆರೆ, ಬಾವಿ, ಪುಷ್ಕರಣಿಗಳು ಹಾಗೂ ಅವುಗಳನ್ನು ನಿರ್ಮಿಸುವಲ್ಲಿ ತೋರಿರುವ ಜಾಣ್ಮೆಗೆ ಮನಸೋತು, ನಮ್ಮ ಜಲಸಂಸ್ಕೃತಿ, ವಿನ್ಯಾಸಗಳನ್ನೇ ಬಳಸಿ ಅವರು ಡ್ಯಾಂಗಳನ್ನು ನಿರ್ಮಿಸಿದರು ಎಂದರು. ಭಾರತೀಯ ಜಲವಾಸ್ತು ವೈವಿಧ್ಯಪೂರ್ಣವಾಗಿದ್ದು, ನಾವು ನೀರನ್ನು ಕೇವಲ ವಸ್ತುವಾಗಿ ಕಾಣದೇ ದೇವರ ರೂಪದಲ್ಲಿ ಕಂಡವರು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧಾರವಾಡ ವಿವಿ ಇತಿಹಾಸ ಮತ್ತು ಪುರಾತತ್ವ ವಿಭಾಗ ಪ್ರಾಧ್ಯಾಪಕ ಡಾ. ಈರಣ್ಣ ಕೆ. ಪತ್ತಾರ್, ಇಂದು ಜಲಮಟ್ಟ ದಿನೇ ದಿನೇ ಕುಸಿಯುತ್ತಿರುವುದಕ್ಕೆ ನಾವೇ ಕಾರಣ. ಗ್ರಾಮೀಣ ಭಾಗದಲ್ಲಿ ಕೆರೆಗಳನ್ನು ನಾಶ ಮಾಡಿ ಕೃಷಿಗೆ ಬಳಸಿಕೊಂಡರೆ, ನಗರಪ್ರದೇಶಗಳಲ್ಲಿ ಕಟ್ಟಡ, ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ, ಪ್ರತಿ ವರ್ಷ ಲಕ್ಷಾಂತರ ಮರಗಳ ಮಾರಣಹೋಮ ನಡೆಯುತ್ತಿದೆ. ಇದರಿಂದ ಜಲಮಟ್ಟ ಕುಸಿದು ಆಹಾಕಾರ ಎದುರಿಸುವಂತಾಗಿದೆ ಎಂದರು.
ಚಿತ್ರನಟ ಯಶ್ ಕಳೆದ ವರ್ಷ ಸುಮಾರು 165 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ಕಾಯಕ ಮಾಡಿದ್ದರು. ಆದರೆ, ಅದು ತಾತ್ಕಾಲಿಕ ಪರಿಹಾರವಷ್ಟೇ ಎಂದರಿತ ಅವರು, ಈ ಬಾರಿ ಕೆರೆಗಳ ಜೀರ್ಣೋದ್ಧಾರಕ್ಕೆ ಕೈಹಾಕಿದ್ದಾರೆ. ಇದರಿಂದ ನೀರಿನ ಹಾಹಾಕಾರಕ್ಕೆ ಶಾಶ್ವತ ಪರಿಹಾರ ಕಾಣುತ್ತಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ರಾಜ್ಯ ಪುರಾತತ್ವ, ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ಸಹಾಯಕ ಪ್ರಾಕ್ತನ ಶಾಸ್ತ್ರಜ್ಞ ಐ.ಎನ್. ಗೌಡ, ದಾವಣಗೆರೆ ವಿವಿ ಇತಿಹಾಸ ಅಧ್ಯಾಪಕರ ವೇದಿಕೆ ಅಧ್ಯಕ್ಷ ಪ್ರೊ. ಬಿ.ಎಸ್. ಉಮಾಮಹೇಶ್ವರ, ಐಕ್ಯೂಎಸಿ ಸಂಚಾಲಕ ಡಾ.ಆರ್. ತಿಪ್ಪಾರೆಡ್ಡಿ, ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್. ಜಂತ್ರಿ , ಟಿ. ವೀರೇಶ್ ಇದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ.ಟಿ. ವೀರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ. ಮಂಜಣ್ಣ ಟಿ. ಸ್ವಾಗತಿಸಿದರು. ಪೂಜಾ ಪ್ರಾರ್ಥಿಸಿದರು. ಪ್ರೊ. ನಾಗವೇಣಿ ನಿರೂಪಿಸಿದರು. ಸದಾಶಿವಪ್ಪ ವಂದಿಸಿದರು.







