ರಾಷ್ಟ್ರಪತಿ ಚುನಾವಣೆಗೂ ಬಿಹಾರ ಮಾದರಿ ಮಹಾಮೈತ್ರಿ?
ಸೋನಿಯಾ ಗಾಂಧಿ -ನಿತೀಶ್ ಕುಮಾರ್ ಭೇಟಿ
ಹೊಸದಿಲ್ಲಿ, ಎ.21: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ವಿರುದ್ಧ ವಿಪಕ್ಷಗಳು ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಬಿಹಾರ ಮಾದರಿಯಲ್ಲಿ ಮಹಾಮೈತ್ರಿ ಏರ್ಪಡುವ ಸಾಧ್ಯತೆ ಎಂದು ತಿಳಿದು ಬಂದಿದೆ.
ಈ ಸಂಬಂಧಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಕುಮಾರ್ ಸೋನಿಯಾ ಗಾಂಧಿ ಅವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಧ್ಯದಲ್ಲೇ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿ ವಿರುದ್ಧ ಮಹಾ ಮೈತ್ರಿಕೂಟದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವುದರ ಬಗ್ಗೆ ಭೇಟಿ ವೇಳೆ ಚರ್ಚೆ ನಡೆಸಲಾಗಿದೆ. ಜೆಡಿಯು ವಕ್ತಾರ ಕೆಸಿ ತ್ಯಾಗಿ ಈ ಬಗ್ಗೆ ಹೇಳಿಕೆ ನೀಡಿದ್ದು, ರಾಷ್ಟ್ರಪತಿ ಚುನಾವಣೆಗೆ ಬಗ್ಗೆ ಪ್ರಧಾನ ಚರ್ಚೆ ನಡೆಯದೇ ಇದ್ದರೂ ಸಹ ರಾಷ್ಟ್ರದ ಹಿತದೃಷ್ಟಿಯಿಂದ ಎನ್ ಡಿಎ ವಿರುದ್ಧ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.