ದಲಿತ ರಾಜಕಾರಣ ದೇಶಕ್ಕೆ ಅಗತ್ಯ: ಜಯನ್ ಮಲ್ಪೆ

ಮಲ್ಪೆ, ಎ.22: ದಲಿತ ರಾಜಕಾರಣ ಎಂಬುದನ್ನು ಅಂಬೇಡ್ಕರ್ ಅವರೇ ವಿದ್ಯುಕ್ತವಾಗಿ ಉದ್ಘಾಟಿಸಿದವರು. ಅದನ್ನು ನಾವು ಸೈದ್ಧಾಂತಿಕ ರಾಜಕಾರಣ, ಹೋರಾಟ ಹಾಗೂ ಚಳವಳಿಯ ರಾಜಕಾರಣದ ನೆಲೆ ಮತ್ತು ಸಾಂವಿಧಾನಿಕ ನೆಲೆಗಳಲ್ಲಿ ಗ್ರಹಿಸಬಹುದು. ಈ ಚೌಕಟಿನಲ್ಲಿ ದಲಿತ ರಾಜಕಾರಣ ದೇಶಕ್ಕೆ ಬೇಕಾಗಿದೆ ಎಂದು ದಲಿತ ಚಿಂತಕ ಜಯನ್ ಮಲ್ಪೆಹೇಳಿದ್ದಾರೆ.
ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ ಜೈಭೀಮ್ ರ್ಯಾಲಿಗೆ ಕೊಡವೂರು ಪಾಳೇಕಟ್ಟೆಯ ಮುಕಾಂಬಿಕ ಭಜನಾ ಮಂದಿರದಲ್ಲಿ ಸ್ವಾಗತಕೋರಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ದಲಿತ ರಾಜಕಾರಣ ಎಂದರೆ ಅದರಲ್ಲಿ ದಲಿತರ ಹಿತಾಸಕ್ತಿ ಇರಬೇಕು. ಜೊತೆಗೆ ದಲಿತ ಧೋರಣೆಗಳಿರಬೇಕು. ದಲಿತರ ಹಸಿವು, ಶೋಷಣೆ, ಅಸಮಾ ನತೆಗಳ ಕ್ರೂರತೆಗಳನ್ನು ಸಮಗ್ರವಾಗಿ ಅರಿತಿರಬೇಕು. ಅಂದರೆ ದಲಿತರ ರಾಜ ಕಾರಣ ಎಂಬುದು ಎಲ್ಲಾ ಬಗೆಯ ಅಸಮಾನತೆ ಹಾಗೂ ಶೋಷಣೆಗಳನ್ನು ವಿರೋಧಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ಮುಕಾಂಬಿಕ ಭಜನಾ ಮಂದಿರದ ಅಧ್ಯಕ್ಷ ವಾದಿರಾಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜ ಪರಿರ್ವತನಾ ಸಂಘಟಕ ಪಿ. ಡೀಕಯ್ಯ, ಚಿಂತಕ ಜಿ.ರಾಜಶೇಖರ್, ಬೌಧ್ಧಧರ್ಮದ ಶಂಭು ಮಾಸ್ತರ್, ದಸಂಸ ನಾಯಕರುಗಳಾದ ಸುಂದರ್ ಕಪ್ಪೆಟ್ಟು, ಮಾಲಿಂಗ ಕೋಟ್ಯಾನ್, ವಸಂತ ತೊಟ್ಟಂ, ಹರೀಶ್ ಸಾಲ್ಯಾನ್, ಪ್ರಸಾದ್ ಮಲ್ಪೆ, ಸುರೇಶ ತೊಟ್ಟಂ, ಭಗವನ್ದಾಸ್ ಮೊದಲಾದವರು ಉಪಸ್ಥಿತರಿದ್ದರು.







