ಶಂಕಿತ ಕಳ್ಳಬೇಟೆಗಾರನ ಹತ್ಯೆ ; 8 ಪೊಲೀಸರಿಗೆ ಗಾಯ
ಪೊಲೀಸರ ಮೇಲೆ ಬುಡಕಟ್ಟು ತಂಡದ ದಾಳಿ

ಜೈಪುರ, ಎ.22: ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ಬಂಧಿಸಲು ತೆರಳಿದ ಪೊಲೀಸ್ ತಂಡದ ಮೇಲೆ ಅಲೆಮಾರಿ ಬುಡಕಟ್ಟು ತಂಡದವರು ದಾಳಿ ನಡೆಸಿದ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಸ್ವಯಂ ರಕ್ಷಣೆಗೆ ಗುಂಡು ಹಾರಿಸಿದಾಗ ಓರ್ವ ಮೃತಪಟ್ಟಿದ್ದಾನೆ. ಗುಂಪಿನ ದಾಳಿಯಲ್ಲಿ ಎಂಟು ಪೊಲೀಸರು ಗಾಯಗೊಂಡಿದ್ದಾರೆ.
ಬನ್ಬಾಗ್ರಿ ಎಂಬ ಬುಡಕಟ್ಟು ತಂಡ ಕಾಡುಪ್ರಾಣಿಗಳನ್ನು ಬೇಟೆಯಾಡುವುದನ್ನೇ ಪ್ರಧಾನ ಕಸುಬನ್ನಾಗಿ ಹೊಂದಿದ್ದು , ಈ ತಂಡದ ಪುಸ ಎಂಬಾತನ ಮೇಲೆ ಕಾಡುಪ್ರಾಣಿಗಳನ್ನು ಬೇಟೆಯಾಡಿದ ಆರೋಪವಿತ್ತು. ಆತನನ್ನು ಬಂಧಿಸಲು ಸಿಲಾರಿಯಾ ಎಂಬ ಗ್ರಾಮಕ್ಕೆ ಪೊಲೀಸರು ತೆರಳಿದಾಗ ಬುಡಕಟ್ಟು ಜನರ ತಂಡ ಪೊಲೀಸರ ಮೇಲೆಯೇ ದಾಳಿ ನಡೆಸಿದೆ.
ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದಾಗ ಮತ್ತಷ್ಟು ಕೆರಳಿದ ಗುಂಪು ದೊಣ್ಣೆಯಿಂದ ಪೊಲೀಸರನ್ನು ಥಳಿಸತೊಡಗಿದರು. ಆಗ ಸ್ವಯಂ ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ತಾಗಿ ಪುಸ ಮೃತಪಟ್ಟಿದ್ದು ಎಂಟು ಪೊಲೀಸರು ಥಳಿತದಿಂದ ಗಾಯಗೊಂಡಿ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.







