ಬಾರ್ಕೂರು ಮಹಾಸಂಸ್ಥಾನದಲ್ಲಿ ಧರ್ಮ ಸಂಸತ್ತು

ಬಾರಕೂರು, ಎ.22: ದೇಶದಲ್ಲಿ ಮಹಿಳೆ ಹಾಗೂ ಧರ್ಮದ ವಿರುದ್ಧ ಆಗುತ್ತಿರುವ ಅನ್ಯಾಯ ಮತ್ತು ದಾರಿತಪ್ಪುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹಿಂದೂ ಸಂಘಟನೆಗಳೊಂದಿಗೆ ಮಠಾಧಿಪತಿಗಳು ಕೈಜೋಡಿಸಬೇಕಾಗಿದೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬಾರ್ಕೂರು ಮಹಾಸಂಸ್ಥಾನದಲ್ಲಿ ಶುಕ್ರವಾರ ನಡೆದ ಧರ್ಮ ಸಂಸತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು. ಮಠಾಧಿಪತಿಗಳು ಸಮಾಜವನ್ನು ತಿದ್ದಿ, ತೀಡುವ ಹಾಗೂ ರಾಷ್ಟ್ರ ಧರ್ಮವನ್ನು ಉಳಿಸಲು ಮಾರ್ಗದರ್ಶನ ಮಾಡಬೇಕು ಎಂದರು.
ಬೆಳಗಾವಿ ಕುಂದರಗಿ ಅಡವಿ ಸಿದ್ಧೇಶ್ವರ ಮಠದ ಅಮರ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಹೆತ್ತವರು ಸುಸಂಸ್ಕೃತರಾಗಿ ಪ್ರತಿ ಮನೆಯೂ ಪಾಠಶಾಲೆಯಾಗ ಬೇಕು ಎಂದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಕಮತಗಿ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಮಹಾಸ್ವಾಮಿ, ಶ್ರೀರಂಗಪಟ್ಟಣ ಚಂದ್ರಾವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಬೆಳಗಾಂ ಹಿರೇಮಠ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳ ಗಂಗಾವತಿಯ ಡಾ. ಕೊಟ್ಟೂರು ಮಹಾಸ್ವಾಮಿ, ಅಮೀನಗಢ ಹುನಗುಂದದ ಶಂಕರ ರಾಜೇಂದ್ರ ಮಹಾಸ್ವಾಮೀಜಿ, ಆಲಮಟ್ಟಿಯ ರುದ್ರಮುನಿವರು, ರಾಯಚೂರು ರುದ್ರ ಮುನೇಶ್ವರ ಮಠದ ರುದ್ರಮುನಿ ಮಹಾಸ್ವಾಮಿ, ಗುಲ್ಬರ್ಗ ಹಿಪ್ರಗಿಯ ಶಿವಲಿಂಗೇಶ್ವರ ವಿರಕ್ತ ಮಠದ ಅಭಿನವ ಶಿವಲಿಂಗ ಮಹಾಸ್ವಾಮಿ ನೂತನ ಸಂಸ್ಥಾನದ ಕುರಿತು ಮೆಚ್ಚುಗೆಯ ಮಾತನಾಡಿದರು.
ಬಂಟ ಸಮಾಜದ ಪ್ರಮುಖರಾದ ವಿಠಲ್ ಹೆಗ್ಡೆ, ಗುರ್ಮೆ ಸುರೇಶ್ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ, ಅರುಣ್ಕುಮಾರ್ ಶೆಟ್ಟಿ, ಬಾಸ್ಕರ್ ಎ.ಶೆಟ್ಟಿ, ಶಾಂತಾರಾಮ, ರತ್ನಾಕರ ಶೆಟ್ಟಿ, ಪ್ರಮೋದ್ ರೈ, ಎಸ್.ವಿ.ಶೆಟ್ಟಿ, ಸೋಮಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬಾರಕೂರು ಮಹಾಸಂಸ್ಥಾನದ ಸ್ಥಾಪಕ ಶ್ರೀವಿಶ್ವ ಸಂತೋಷ ಭಾರತಿ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.







