ಸಮುದ್ರಪಾಲಾಗಿದ್ದ ಯುವಕನ ಮೃತದೇಹ ಪತ್ತೆಹಚ್ಚಿದ ಮುಳುಗುತಜ್ಞರಿಗೆ ವಿಶೇಷ ಪುರಸ್ಕಾರ: ಸಚಿವ ಖಾದರ್

ಮಂಗಳೂರು, ಎ.23: ಉಳ್ಳಾಲ ಸಮೀಪದ ಸೀಗೌಂಡ್ ಸಮುದ್ರ ಕಿನಾರೆಯಲ್ಲಿ ನೀರುಪಾಲಾಗಿದ್ದ ಮಾಸ್ತಿಕಟ್ಟೆ ನಿವಾಸಿ ಮುಹಮ್ಮದ್ ಹನೀಫ್ ಅವರ ಮೃತದೇಹವನ್ನು ಪತ್ತೆ ಹಚ್ಚಿರುವ ತಣ್ಣೀರುಬಾವಿಯ ಮುಳುಗು ತಜ್ಞ ತಂಡಕ್ಕೆ ವಿಶೇಷ ಪುರಸ್ಕಾರ ನೀಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬೆಳಗ್ಗೆ ಸುಮಾರು 10 ಗಂಟೆಗೆ ಸಮುದ್ರ ಪಾಲಾಗಿದ್ದ ಹನೀಫ್ರ ಮೃತದೇಹಕ್ಕಾಗಿ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸೇರಿದಂತೆ ಇತರರು ಶೋಧ ಕಾರ್ಯ ನಡೆಸಿದ್ದರು. ಆದರೂ ಮೃತದೇಹ ಪತ್ತೆಯಾಗಿರಲಿಲ್ಲ. ಸಂಜೆ 4 ಗಂಟೆಗೆ ಆಗಮಿಸಿದ ತಣ್ಣೀರುಬಾವಿ ತಂಡದ ನಾಲ್ಕು ಮಂದಿ ಮುಳುಗುತಜ್ಞ ಯುವಕರು ಕೆಲವು ಮೀಟರ್ಗಳಷ್ಟು ಆಟಕ್ಕೆ ಮುಳುಗಿ ಮೃತದೇಹವನ್ನು ಪತ್ತೆ ಹಚ್ಚಿ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದ ಈ ಕೆಲಸಕ್ಕೆ ಕ್ಷೇತ್ರದ ಜನರ ಪರವಾಗಿ ವಿಶೇಷ ಪುರಸ್ಕಾರ ನೀಡಲಾಗುವುದು. ಅಲ್ಲದೆ, ತಂಡದ ಈ ಕಾರ್ಯವನ್ನು ಸರಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.
Next Story





