ಹೈದರಾಬಾದ್ನ ನಿಝಾಮರು ದಾರ್ಶನಿಕರು: ಪ್ರಣವ್ ಮುಖರ್ಜಿ
ಒಸ್ಮಾನಿಯಾ ವಿವಿಯ ಶತಮಾನೋತ್ಸವ ಸಮಾರಂಭ

ಹೈದರಾಬಾದ್, ಎ.26: ನೂರು ವರ್ಷದ ಹಿಂದೆ ಒಸ್ಮಾನಿಯಾ ವಿಶ್ವವಿದ್ಯಾನಿಲಯವನ್ನು ಆರಂಭಿಸಿದ ಹೈದರಾಬಾದ್ ರಾಜ್ಯದ ಕೊನೆಯ ನಿಝಾಮರಾಗಿದ್ದ ಮೀರ್ ಒಸ್ಮಾನ್ ಅಲಿಖಾನ್ ಅವರೊಬ್ಬ ದಾರ್ಶನಿಕರು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ. ಹೈದರಾಬಾದ್ನಲ್ಲಿ ಉನ್ನತ ಶಿಕ್ಷಣಕ್ಕೆ ವಿಶ್ವಮಟ್ಟದ ಸಂಸ್ಥೆಯೊಂದನ್ನು ಸ್ಥಾಪಿಸುವ ಕನಸನ್ನು ಅವರು ಕಂಡಿದ್ದರು ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.
ಇಂದಿಗೆ ನೂರು ವರ್ಷದ ಹಿಂದೆ , ಹೈದರಾಬಾದ್ನ ಕೊನೆಯ ನಿಝಾಮರಾಗಿದ್ದ ದಾರ್ಶನಿಕ ಮೀರ್ ಒಸ್ಮಾನಿಯಾ ಅಲಿಖಾನ್ ಹೈದರಾಬಾದ್ನಲ್ಲಿ ವಿಶ್ವಮಟ್ಟದ ಸಂಸ್ಥೆಯೊಂದನ್ನು ಸ್ಥಾಪಿಸುವ ಕನಸು ಕಂಡಿದ್ದರು. ಮನಸ್ಸುಗಳು ಮುಕ್ತವಾಗಿ ಬೆರೆಯಲು ಅವಕಾಶ ನೀಡುವ , ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಆಸ್ಪದ ನೀಡುವ , ಶಾಂತಿಯುತ ಸಹಬಾಳ್ವೆಗೆ ಅನುವು ಮಾಡಿಕೊಡುವ ವೇದಿಕೆಯಾಗಿ ಹೈದರಾಬಾದ್ನಲ್ಲಿ ಒಸ್ಮಾನಿಯಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ ಎಂದು ರಾಷ್ಟ್ರಪತಿ ಮುಖರ್ಜಿ ತಿಳಿಸಿದರು.
ಒಸ್ಮಾನಿಯಾ ವಿವಿಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ನೂರು ವರ್ಷಗಳಲ್ಲಿ ಎರಡು ವಿಶ್ವಯುದ್ದ, ಭಾರತದ ಸ್ವಾತಂತ್ರ, ತೆಲಂಗಾಣ ರಾಜ್ಯದ ರಚನೆಯೂ ಸೇರಿದಂತೆ ವಿವಿ ಹಲವಾರು ಮಹತ್ವಪೂರ್ಣ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದು ರಾಷ್ಟ್ರಪತಿ ನುಡಿದರು.
ಮೂಲ ಸಂಶೋಧನೆ ಮತ್ತು ಹೊಸ ಕಲ್ಪನೆಗೆ ತೆರೆದುಕೊಳ್ಳುವ ಪ್ರಕ್ರಿಯೆಯನ್ನು ನಿರ್ಲಕ್ಷಿಸಿದರೆ ನಾವು ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸಲು ಆಗದು. ಇದಕ್ಕೆ ಅಗತ್ಯವಿರುವ ಆರ್ಥಿಕ ನಿಧಿಯನ್ನು ಸರಕಾರ ಅಥವಾ ಉದ್ದಿಮೆಗಳು ನಿರಂತರವಾಗಿ ಒದಗಿಸಬೇಕಿದೆ . ವಿವಿಗಳಲ್ಲಿ ಪೀಠಗಳು ಸ್ಥಾಪನೆಗೊಳ್ಳಬೇಕು. ಉದ್ದಿಮೆಗಳು ನೂತನ ಸಂಶೋಧನಾ ಕಾರ್ಯಗಳಿಗೆ ದತ್ತಿ ನೀಡಬೇಕು. ಶಿಕ್ಷಣ, ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಿದರೆ ಮಾತ್ರ ನಾವು ಶಿಕ್ಷಣ ವ್ಯವಸ್ಥೆಯ ನಕಾಶೆಯಲ್ಲಿ ಸೂಕ್ತ ಸ್ಥಾನ ಪಡೆಯಲಷ್ಟೇ ಅಲ್ಲ, ಅಂತರಾಷ್ಟ್ರೀಯ ಸಮುದಾಯದಲ್ಲಿ ಸೂಕ್ತ ಸ್ಥಾನ ಪಡೆಯಲು ಸಾಧ್ಯ ಎಂದರು. ಎಲ್ಲಾ ಶಿಕ್ಷಣ ಸಂಘದಲ್ಲಿ ಉತ್ಕೃಷ್ಠತೆಯ ಅಗತ್ಯವಿದೆ ಎಂದ ಅವರು, ನಮ್ಮ ವಿವಿಗಳನ್ನು ಮಾದರಿಯಾಗಿ ಬೆಳಸಬೇಕಿದೆ. ಅಂತರಾಷ್ಟ್ರೀಯ ಸಮುದಾಯದಲ್ಲಿ ಸುಮಾರು 1,500ರಿಂದ 1600 ವರ್ಷಗಳಿಂದಲೂ ಭಾರತವು ಉನ್ನತ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ತಕ್ಷಿಲಾ, ನಳಂದ ಮತ್ತಿತರ ಶಿಕ್ಷಣ ಸಂಸ್ಥೆಗಳು ಇದೀಗ ಅಧಃಪತನಗೊಂಡಿರಬಹುದು. ಆದರೆ 1000 ವರ್ಷಕ್ಕಿಂತಲೂ ಹೆಚ್ಚಿನ ಕಾಲ ವಿಶ್ವದಾದ್ಯಂತದ ಶಿಕ್ಷಕರು, ವಿದ್ಯಾರ್ಥಿಗಳನ್ನು ಈ ಸಂಸ್ಥೆಗಳು ಆಕರ್ಷಿಸಿವೆ. ವಿವಿಗಳು ಸಮಾಜದಿಂದ ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ ಎಂದ ಅವರು, ಶಿಕ್ಷಣ ಸಂಸ್ಥೆಗಳು ಸಂಶೋಧನೆ, ಆವಿಷ್ಕಾರ, ಮತ್ತು ಹೊಂದಿಕೆಗೆ ಒತ್ತು ನೀಡಬೇಕು ಎಂಬುದು ದೇಶದ ಪ್ರಪ್ರಥಮ ಶಿಕ್ಷಣ ಸಚಿವ ವೌಲಾನಾ ಅಬ್ದುಲ್ ಕಲಾಂ ಆಝಾದ್ ಅವರ ಆಶಯವಾಗಿತ್ತು ಎಂದು ತಿಳಿಸಿದರು.
ಉಪಕುಲಪತಿ ಎಸ್.ರಾಮಚಂದ್ರಮ್ ಮಾತನಾಡಿ, ವಿವಿಯು ಒಂದು ಕೋಟಿಗಿಂತಲೂ ಹೆಚ್ಚಿನ ಹಳೆಯ ವಿದ್ಯಾರ್ಥಿಗಳನ್ನು ಹೊಂದಿದ್ದು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದರು. ತೆಲಂಗಾಣ ಗವರ್ನರ್ ಇ.ಎಸ್.ಎಲ್. ನರಸಿಂಹನ್, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
1917ರ ಎಪ್ರಿಲ್ 26ರಂದು ಮೀರ್ ಒಸ್ಮಾನಿಯಾ ಅವರು ವಿಶ್ವವಿದ್ಯಾನಿಲಯ ಸ್ಥಾಪಿಸುವ ಬಗ್ಗೆ ರಾಜಾಜ್ಞೆ ಹೊರಡಿಸಿದ್ದರು.ಭಾರತೀಯ ಉಪಖಂಡದಲ್ಲಿ ಉರ್ದು ಶಿಕ್ಷಣ ಮಾಧ್ಯಮವಾಗಿದ್ದ ಏಕೈಕ ವಿವಿಯಾಗಿದೆ. ಆದರೆ ದೇಶ ಸ್ವಾತಂತ್ರ ಪಡೆದ ಬಳಿಕ ಉರ್ದುವಿನ ಬದಲು ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಯಿತು.