ಕೊರಗರ ಮೇಲೆ ಹಲ್ಲೆ ಪ್ರಕರಣ: ಕಾಲನಿಗೆ ದಲಿತ, ಮುಸ್ಲಿಮ್ ಮುಖಂಡರ ಭೇಟಿ
ಎ.28ರಂದು ಪ್ರತಿಭಟನೆ

ಗಂಗೊಳ್ಳಿ, ಎ.27: ತ್ರಾಸಿ ಗ್ರಾಮದ ಆನ್ಗೋಡಿನಲ್ಲಿರುವ ಗಾಣದಮಕ್ಕಿ ಕೊರಗ ಕಾಲನಿಯಲ್ಲಿ ಗೋಮಾಂಸ ಸೇವಿಸುತ್ತಿರುವುದಾಗಿ ಆರೋಪಿಸಿ ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆ ಹಾಗೂ ಜಾತಿನಿಂದನೆ, ದೌರ್ಜನ್ಯಕ್ಕೆ ಒಳಗಾದ ಕೊರಗ ಸಮುದಾಯದವರನ್ನು ಉಡುಪಿ ದಲಿತ ಧಮನಿತ ಸ್ವಾಭಿಮಾನಿ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ ಮತ್ತು ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮುಖಂಡರು ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ಬಳಿಕ ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿದ ಮುಖಂಡರು, ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಗಳ ಮುಖಂಡರಾದ ಸುಂದರ್ ಮಾಸ್ಟರ್, ಉದಯ ಕುಮಾರ್ ತಲ್ಲೂರ್, ಯಾಸೀನ್ ಮಲ್ಪೆ, ಶ್ಯಾಮ್ರಾಜ್ ಬಿರ್ತಿ, ಅನಂತ್ ಮಚ್ಚಟ್ಟು, ಎಸ್.ಎಸ್. ಪ್ರಸಾದ್, ಬಾಲಕೃಷ್ಣ ಶೆಟ್ಟಿ, ಶ್ಯಾಮ ಸುಂದರ್ ಮಣೂರು, ಹುಸೇನ್ ಕೊಡಿ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
ಎ.28ರಂದು ಪ್ರತಿಭಟನೆ: ಗಾಣದಮಕ್ಕಿಯಲ್ಲಿ ಕೊರಗ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಮತ್ತು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಹಾಗೂ ಕೊರಗ ಸಂಘಟನೆಗಳ ಒಕ್ಕೂಟ ಉಡುಪಿ ಜಿಲ್ಲೆ ಇವುಗಳ ವತಿಯಿಂದ ಎ.28ರಂದು ಅಪರಾಹ್ನ 3 ಗಂಟೆಗೆ ಉಡುಪಿ ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







