ಹಾಸನ: ಕುಡಿಯುವ ನೀರಿನ ಸ್ಥಿತಿಗತಿ ಮರು ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

ಹಾಸನ, ಎ.27: ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ತೀವ್ರತೆ ಮುಂದುರಿದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಶೇಷ ಸಭೆಯನ್ನು ನಡೆಸಿದ ಜಿಲ್ಲಾಧಿಕಾರಿ ವಿ.ಚೈತ್ರ, ಕುಡಿಯುವ ನೀರಿನ ಸ್ಥಿತಿಗತಿ ಬಗ್ಗೆ ಮರು ಸಮೀಕ್ಷೆಗೆ ಸೂಚನೆ ನೀಡಿದ್ದಾರೆ.
ಜಿಪಂ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮುಖ್ಯ ಇಂಜಿನಿಯರ್ ಪ್ರಕಾಶ್ ಉಪಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಈಗಿನ ಪರಿಸ್ಥಿತಿಗಳ ಬಗ್ಗೆ ಮರು ಸಮೀಕ್ಷೆ ನಡೆಸುವ ಕುರಿತು ಅವರು ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಉದ್ದೇಶಕ್ಕೆ ಹಣಕಾಸಿನ ಕೊರತೆ ಇಲ್ಲ. ಆದರೆ ಇರುವ ಅನುದಾನ ಯೋಜಿತವಾಗಿ ಸದ್ಭಳಕೆಯಾಗುತ್ತಿದೆಯೇ ಎಂಬುದರ ಪರಾಮರ್ಷೆ ನಡೆಯಬೇಕಿದೆ ಎಂದರು.
ಕಳೆದ 2 ತಿಂಗಳ ಹಿಂದೆಯೇ ಜಿಲ್ಲೆಯ ಕುಡಿಯುವ ನೀರಿನ ಸ್ಥಿತಿಗತಿಗಳ ವಾಸ್ತವತೆಯನ್ನು ಅರಿಯುವ ಸಲುವಾಗಿ ಹೋಬಳಿ ಮಟ್ಟದಲ್ಲಿ ಸಮೀಕ್ಷೆ ನಡೆಸಲು ಸಮಿತಿಗಳನ್ನು ರಚಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಈಗ ನಿಗದಿತ ನಮೂನೆಗಳಲ್ಲಿ ಮರು ಸಮೀಕ್ಷೆ ನಡೆಸಿ 3 ದಿನಗಳೊಳಗೆ ವರದಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನಾವು ಕುಡಿಯುವ ನೀರಿನ ಸಮಸ್ಯೆಗಳನ್ನು ಪಟ್ಟಿಮಾಡುತ್ತಲೇ ಮುಂದುವರಿದಿದ್ದೇವೆ. ಆದರೆ ಅದನ್ನು ನಿಭಾಯಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬರ ಪರಿಹಾರ ಯೋಜನೆಯಡಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಡಿ ಪ್ರತಿ ಕ್ಷೇತ್ರಕ್ಕೆ 2.25 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಅಲ್ಲದೆ 14ನೇ ಹಣಕಾಸಿನ ಯೋಜನೆಯಡಿಯಲ್ಲಿಯೂ ಸುಮಾರು 19 ಕೋಟಿ ರೂ. ಹಣ ಕುಡಿಯುವ ನೀರಿನ ಉದ್ದೇಶಕ್ಕೆ ವೆಚ್ಚಾಗಿದೆ. ಹಾಗಿದ್ದರೂ ಇನ್ನೂ 218 ಗ್ರಾಮಗಳಲ್ಲಿ ಸುಮಾರು 600 ಟ್ಯಾಂಕರ್ಗಳನ್ನು ಬಳಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಪರಿಶೀಲನೆಗಳು ಅಗತ್ಯವಿದೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಬೇಕಿದೆ. ಅಧಿಕಾರಿಗಳು ಬದ್ಧತೆಯಿಂದ, ಸಾಮಾಜಿಕ ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳ ಪಾತ್ರವೂ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಗ್ರಾಮೀಣ ನೀರು ಸರಬರಾಜು ಇಲಾಖೆ ಮುಖ್ಯ ಇಂಜಿನಿಯರ್ ಪ್ರಕಾಶ್ ಮಾತನಾಡಿ, ಪರಿಸ್ಥಿತಿಯ ಗಂಭೀರತೆಯನ್ನು ಎಲ್ಲರೂ ಅರ್ಥಮಾಡಿಕೊಂಡು ಸಮಸ್ಯೆ ನಿಭಾಯಿಸುವತ್ತ ಕೈಜೋಡಿಸಬೇಕು. ಗ್ರಾಮವಾರು ನಿಖರವಾದ ಮಾಹಿತಿ ಲಭ್ಯವಿಲ್ಲದಿದ್ದರೆ ಬೇಡಿಕೆಗಳು ಏರುತ್ತಲೇ ಹೋಗುತ್ತವೆ. ನಿಭಾಯಿಸುವ ಸ್ವರೂಪದ ಬಗ್ಗೆ ಗೊಂದಲಗಳು ಮೂಡುತ್ತವೆ. ಎಲ್ಲಾ ಕಡೆಗಳಲ್ಲಿ ಕೊಳವೆ ಬಾವಿ ಕೊರೆಸುವ ಬದಲಿಗೆ ಹಾಲಿ ಲಭ್ಯವಿರುವಂತಹ ಕೊಳವೆ ಬಾವಿಗಳನ್ನು ಫ್ಲಶಿಂಗ್ ಅಥವಾ ಇನ್ನಷ್ಟು ಆಳ ಕೊರೆಯುವ ಮೂಲಕ ಪುನರುಜ್ಜೀವನ ಸಾಧ್ಯವೇ ಎಂಬುದನ್ನು ಗಮನಿಸಬೇಕು. ಖಾಸಗಿ ಜಲಮೂಲಗಳನ್ನು ಬಳಸಿಯಾದರೂ ನೀರು ಪೂರೈಕೆ ಮಾಡುವುದರಿಂದ ವೆಚ್ಚವೂ ಕಡಿಮೆಯಾಗುವುದು. ನಷ್ಟವನ್ನೂ ಉಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಮಾತನಾಡಿ, 14ನೇ ಹಣಕಾಸು ಆಯೋಗದಿಂದ ಜಿಲ್ಲೆಗೆ ಬಿಡುಗಡೆಯಾದ 23 ಕೋಟಿ ರೂ.ಗಳಲ್ಲಿ ಸುಮಾರು 19.50 ಕೋಟಿ ರೂ.ಗಳನ್ನು ಕುಡಿಯುವ ನೀರಿಗಾಗಿಯೇ ಬಳಸಿರುವುದು ಗ್ರಾಪಂವಾರು ನೀಡಿರುವ ಮಾಹಿತಿಯಿಂದ ತಿಳಿಯಬಹುದಾಗಿದೆ. ಈ ಅನುದಾನವನ್ನು ಪೈಪ್ ಲೈನ್ ಅಳವಡಿಕೆ, ಮೋಟರ್ ಖರೀದಿ, ದುರಸ್ಥಿ, ಬಿಡಿ ಭಾಗಗಳ ಖರೀದಿ, ಮತ್ತಿತರ ಕಾರ್ಯಗಳಿಗಾಗಿ ವೆಚ್ಚ ಮಾಡಲಾಗಿದೆ. ಹಾಗಿದ್ದ ಮೇಲೆ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಸುಧಾರಿಸಬೇಕಿತ್ತು. ಈ ಬಗ್ಗೆ ಪ್ರತಿ ಗ್ರಾಮ ಪಂಚಾಯಿತಿ ವಾರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್ಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಸಿದ್ದರಾಜು, ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮೀಕ್ಷೆಗಾಗಿ ತಯಾರಿಸಲಾಗಿರುವ ನಮೂನೆಯ ಬಗ್ಗೆ, ಹೋಬಳಿ ವಾರು ನೇಮಕಗೊಂಡಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನಾಗರಾಜ್, ಜಿ.ಪಂ. ಲೆಕ್ಕಾಧಿಕಾರಿ ಶ್ರೀನಿವಾಸಗೌಡ, ಉಪವಿಭಾಗಾಧಿಕಾರಿ ಡಾ:ಎಚ್.ಎಲ್. ನಾಗರಾಜ್ ಎಲ್ಲಾ ತಾಲ್ಲುಕುಗಳ ತಹಸೀಲ್ದಾರ್ಗಳು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಇಂಜಿನಿಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು







