ಉತ್ತರ ಪ್ರದೇಶ : ಹೇಳಿದ ಹಾಗೆ ಕೇಳಲಿಲ್ಲ ಎಂದು ಬ್ಯಾಂಕ್ ಅಧಿಕಾರಿಯನ್ನು ಕಾರಿಗೆ ಹಾಕಿಕೊಂಡು ಹೋದ ಬಿಜೆಪಿ ಶಾಸಕ

ಲಕ್ನೋ, ಎ. 28 : ತಾನು ಹೇಳಿದ ಮಾತನ್ನು ಕೇಳಲಿಲ್ಲ ಎಂಬ ಒಂದೇ ಕಾರಣಕ್ಕೆ ಬರೇಲಿ ಜಿಲ್ಲೆಯ ನವಾಬಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಕೇಸರ್ ಸಿಂಗ್, ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಕಚೇರಿಯಿಂದ ಹೊರಗೆಳೆದು ತನ್ನ ಕಾರಿನಲ್ಲಿ ಹಾಕಿಕೊಂಡು ಹೋಗಿ ಥಳಿಸಿದ ಘಟನೆ ವರದಿಯಾಗಿದೆ.
ಯೋಗಿ ಆದಿತ್ಯನಾಥ್ ಸರಕಾರ ರೈತರ ಸಾಲ ಮನ್ನಾ ಮಾಡಿರುವ ಹೊರತಾಗಿಯೂ ರೈತರಿಗೆ ತಮ್ಮ ಖಾತೆಗಳಿಂದ ಹಣ ಹಿಂಪಡೆಯಲು ಅನುಮತಿಸುತ್ತಿಲ್ಲ ಎಂದು ಹಲವು ರೈತರು ದೂರಿರುವ ಹಿನ್ನೆಲೆಯಲ್ಲಿ ತಾನು ಬುಧವಾರ ಬರೋಡಾದ ಯುಪಿ ರೂರಲ್ ಬ್ಯಾಂಕಗೆ ಭೇಡಿ ನೀಡಿದ್ದೆ ಎಂದು ಶಾಸಕ ಹೇಳಿಕೊಂಡಿದ್ದಾರೆ.
‘‘ಮ್ಯಾನೇಜರ್ ಗೆ ನನ್ನ ಪರಿಚಯವಿಲ್ಲದೇ ಇರಬಹುದೆಂದುಕೊಂಡು ನನ್ನ ಪರಿಚಯ ಹೇಳಿದರೂ ನನಗೆ ಕುಳಿತುಕೊಳ್ಳಲು ಹೇಳಲಿಲ್ಲ,’’ ಎಂದು ಹೇಳಿದ ಶಾಸಕ ತಾನು ಬ್ಯಾಂಕಿನ ವಿರುದ್ದ ಇಷ್ಟೊಂದು ದೂರುಗಳೇಕಿವೆ ಎಂದು ಮ್ಯಾನೇಜರ್ ಎಚ್ ಎಸ್ ಹಂಕಿ ಅವರಲ್ಲಿ ಕೇಳಿದಾಗ ಆತ ಕೋಪಗೊಂಡ ಪರಿಣಾಮ ಇಬ್ಬರ ನಡುವೆ ದೊಡ್ಡ ವ್ಯಾಗ್ಯುದ್ಧ ನಡೆದಿತ್ತು. ಯಾರಿಗೂ ಹೊಡೆಯಲಾಗಿಲ್ಲ. ಆದರೆ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತ’’ ಎಂದು ಕಳೆದ ವರ್ಷ ಬಹುಜನ ಸಮಾಜ ಪಕ್ಷದಿಂದ ಉಚ್ಛಾಟನೆಗೊಂಡ ನಂತರ ಬಿಜೆಪಿ ಸೇರಿದ್ದ ಶಾಸಕ ಹೇಳಿದ್ದರೂ ಇದನ್ನು ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಚೇಂಬರಿನಲ್ಲಿ ಏನು ನಡೆಯಿತೆಂದು ಅಲ್ಲಿನ ಸಿಬ್ಬಂದಿಗಳಿಗೆ ತಿಳಿದಿಲ್ಲವಾದರೂ ಕೆಲ ನಿಮಿಷಗಳ ನಂತರ ಶಾಸಕರ ಜತೆಗಿದ್ದ ಆರೇಳು ಮಂದಿ ಮ್ಯಾನೇಜರ್ ಅವರನ್ನು ಹೊರಗೆಳೆದು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿರುವುದನ್ನು ನೋಡಿದ್ದಾರೆ.
ಶಾಸಕ ತನಗೆ ತನ್ನ ಚೇಂಬರಿನಲ್ಲಿ ಹಲ್ಲೆ ನಡೆಸಿದ್ದಾರೆಂದು ಬ್ಯಾಂಕ್ ಮ್ಯಾನೇಜರ್ ಹಂಕಿ ಆರೋಪಿಸಿದ್ದಾರೆ. ತಮ್ಮನ್ನು ಬಿಟ್ಟು ಬಿಡುವ ಮೊದಲು ಪುನಹ ಹಲ್ಲೆ ನಡೆಸಿ ಬೆದರಿಸಲಾಗಿತ್ತು ಎಂದೂ ಬರೇಲಿ ಡಿಜಿಪಿಗೆ ಸಲ್ಲಿಸಿದ ದೂರಿನಲ್ಲಿ ಮ್ಯಾನೇಜರ್ ತಿಳಿಸಿದ್ದಾರೆ.
ಪೊಲೀಸರು ಈ ಪ್ರಕರಣದ ಬಗ್ಗೆ ಜಾಗರೂಕರಾಗಿ ವ್ಯವಹರಿಸುತ್ತಿದ್ದು ಬ್ಯಾಂಕಿನ ಸಿಬ್ಬಂದಿಗಳು ಹೇಳಿದ್ದು ಬಿಟ್ಟರೆ ಹಲ್ಲೆ ನಡೆದಿದ್ದಕ್ಕೆ ಯಾವುದೇ ಪುರಾವೆ ಇಲ್ಲ, ಸೀಸಿಟಿವಿ ಕ್ಯಾಮರಾಗಳೂ ಆ ದಿನ ಕಾರ್ಯನಿರ್ವಹಿಸುತ್ತಿರಲಿಲ್ಲ, ಎಂದು ಪೊಲೀಸರು ಹೇಳುತ್ತಿದ್ದಾರೆ.