ಸಂಘಟನೆಯಲ್ಲಿ ಬಲವಿದೆ

ಮುಂಬೈನ ಪೌರಕಾರ್ಮಿಕರ ಕಾನೂನಾತ್ಮಕ ದಿಗ್ವಿಜಯ
ಸಂಘಟನಾ ಶಕ್ತಿಯ ಬಲವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಸುಮಾರು ಹತ್ತು ವರ್ಷಗಳಿಂದ ನಡೆದ ಸುದೀರ್ಘ ಕಾನೂನು ಸಮರದಲ್ಲಿ ಮುಂಬೈನ ಪೌರಕಾರ್ಮಿಕರಿಗೆ ಕೊನೆಗೂ ಜಯ ಸಿಕ್ಕಿದೆ. ಮೊದಲು ಕೈಗಾರಿಕಾ ನ್ಯಾಯಮಂಡಳಿಯಿಂದ ಮುಂಬೈ ಉಚ್ಚ ನ್ಯಾಯಾಲಯಕ್ಕೆ ಮತ್ತೆ ಅಲ್ಲಿಂದ ಅಂತಿಮವಾಗಿ ಸುಪ್ರೀಂ ಕೋರ್ಟಿನವರೆಗೆ ನಡೆದ ಈ ಕಾನೂನು ಸಮರದಲ್ಲಿ ಜಯಶೀಲರಾದ ಮುಂಬೈನ 2,700 ಪೌರಕಾರ್ಮಿಕರು ಈಗ ಮುಂಬೈನ ಬೃಹನ್ನಗರ ಪಾಲಿಕೆಯ (ಬಿಎಂಸಿ) ಖಾಯಂ ನೌಕರರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮೂರೂ ಹಂತದ ನ್ಯಾಯಾಲಯಗಳಲ್ಲೂ ಈ ನೌಕರರ ಪರವಾಗಿಯೇ ಆದೇಶ ಬಂದಿತ್ತು. ಬಿಎಂಸಿಯೇ ಮೂರೂ ಬಾರಿಯೂ ಮೇಲಿನ ಕೋರ್ಟುಗಳಿಗೆ ಪ್ರಕರಣವನ್ನು ತೆಗೆದುಕೊಂಡುಹೋಗಿ ಮೂರು ಬಾರಿಯೂ ಸೋಲನ್ನಪ್ಪಿತು.
ಒಂದೆಡೆ ಇದು ಪೌರ ಕಾರ್ಮಿಕರಿಗೆ ಮತ್ತು ಅವರನ್ನು ಸಂಘಟಿಸಿದ ಕಚ್ರಾ ವಾಹತೂಕ್ ಶ್ರಮಿಕ್ ಸಂ (ಕೆವಿಎಸ್ಎಸ್)ಕ್ಕೆ ದಕ್ಕಿದ ಅತ್ಯದ್ಭುತ ದಿಗ್ವ್ವಿಜಯವಾಗಿದ್ದರೆ ಮತ್ತೊಂದೆಡೆ ಸಂಘಟಿತರಾಗುವ ಮತ್ತು ಒಟ್ಟಾಗಿ ಹೋರಾಡುವ ಚೈತನ್ಯದ ಶಕ್ತಿಯ ರುಜುವಾತೂ ಆಗಿದೆ. ಅಷ್ಟು ಮಾತ್ರವಲ್ಲ, ಭಾರತದಲ್ಲಿ ಕಾರ್ಮಿಕ ಹೋರಾಟ ದುರ್ಬಲಗೊಳ್ಳುತ್ತಿರುವಾಗ ಮತ್ತು ಇನ್ನೂ ಅವು ಚೇತರಿಸಿಕೊಳ್ಳುವುದಿಲ್ಲವೆಂದೂ ಕಾರ್ಮಿಕ ವಿರೋಧಿ ಶಕ್ತಿಗಳು ದೊಡ್ಡ ಗಂಟಲಲ್ಲಿ ಅರಚುತ್ತಿರುವ ಸಂದರ್ಭದಲ್ಲಿ, ಒಂದು ಕಾರ್ಮಿಕ ಸಂಘಟನೆಯು ಹೇಗೆ ತನ್ನ ಹೋರಾಟದ ಮಾರ್ಗೋಪಾಯಗಳನ್ನು ಮುಂದಾಲೋಚನೆಯಿಂದ ರೂಪಿಸುವ ಮೂಲಕ ಮತ್ತು ತನ್ನ ಹೋರಾಟಕ್ಕೆ ನಾಗರಿಕ ಸಮಾಜದ ಬೆಂಬಲ ಮತ್ತು ಸಹಕಾರಗಳನ್ನೂ ರೂಢಿಸಿಕೊಳ್ಳುವ ಮೂಲಕ ಹೋರಾಟವನ್ನು ಗೆಲ್ಲಬಹುದೆಂಬುದನ್ನೂ ತೋರಿಸಿಕೊಟ್ಟಿದೆ.
ಹಾಗಿದ್ದರೂ ಕಾನೂನು ಜಯವೊಂದರಿಂದಲೇ ಕಾರ್ಮಿಕರ ಹೋರಾಟಕ್ಕೆ ಅಂತಿಮ ಜಯ ಸಿಕ್ಕಿತೆಂದು ಅಂದುಕೊಳ್ಳುವಂತಿಲ್ಲ. ಸಾಮಾನ್ಯವಾಗಿ ಪೌರ ಕಾರ್ಮಿಕರು ಸಮಾಜದ ಅತ್ಯಂತ ಕೆಳಸ್ಥರದ ಜಾತಿಗಳಿಗೆ ಸೇರಿದವರಾಗಿರುತ್ತಾರೆ. ಕಸವನ್ನು ಸಂಗ್ರಹಿಸಿ ಅದನ್ನು ಸಾಗಾಟ ಮಾಡುವುದರಿಂದ ಈ ಅದೃಶ್ಯ ಕಾರ್ಮಿಕರು ಹಲವಾರು ಚರ್ಮ ಸಂಬಂಧಿ ಮತ್ತು ಉಸಿರಾಟದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಒಳಚರಂಡಿ ಕಾರ್ಮಿಕರಂತೆ ಈ ಪೌರ ಕಾರ್ಮಿಕರೂ ಮುಂಬೈನಂಥ ಬಹುವೇಗವಾಗಿ ಬೆಳೆಯುತ್ತಿರುವ ನಗರಗಳ ನಿತ್ಯ ಜೀವನಕ್ಕೆ ಅತ್ಯಗತ್ಯವೇ ಆದ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಆದರೆ ಇಂಥಾ ಕೆಲಸಗಳಿಂದಾಗಿಯೇ ಸಮಾಜವು ಅವರನ್ನು ಮನುಷ್ಯರೆಂದು ಗುರುತಿಸುವುದಿಲ್ಲ. ಮಾತ್ರವಲ್ಲ, ಸಮಾಜಕ್ಕಾಗಿ ಅವರು ಮಾಡುವ ಕೆಲಸಗಳಿಗಾಗಿಯೂ ಅವರನ್ನು ಗುರುತಿಸುವುದಿಲ್ಲ. ತಾವು ಮಾಡುವ ಕೆಲಸ ಮತ್ತು ವಾಸ ಮಾಡುವ ಸ್ಥಳಗಳ ಗಲೀಜುಗಳು ತಮ್ಮ ಇಂದ್ರಿಯಗಳ ಅನುಭವಕ್ಕೆ ಬರದಂತಿರಲು ಬಹಳಷ್ಟು ಜನ ಕುಡಿತಕ್ಕೆ ದಾಸರಾಗಿ ಸಂವೇದನೆಗಳನ್ನು ಕೊಂದುಕೊಂಡಿರುತ್ತಾರೆ. ಆದರೂ ಇಂಥಾ ಕೆಲಸಗಳಲ್ಲಿ ತೊಡಗಿಕೊಂಡಿರುವ ಪುರುಷರು ಮತ್ತು ಮಹಿಳೆಯರಿಗೆ ಇತರ ಸಂಘಟಿತ ಸರಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಉದ್ಯೋಗಿಗಳಿಗೆ ಲಭ್ಯವಾಗುವಂಥ ಕೆಲಸದ ಭದ್ರತೆ, ಕಾಯಿಲೆ ರಜೆ, ಕೆಲಸ ಮಾಡುವಾಗ ಸತ್ತರೆ ಅವರ ಕುಟುಂಬದವರಿಗೆ ಕನಿಷ್ಠ ಪರಿಹಾರದಂಥ ಯಾವುದೇ ಕ್ಷೇಮ ಯೋಜನೆಗಳ ಲಾಭ ದೊರಕುವುದಿಲ್ಲ.
ಆದರೆ ಕೆವಿಎಸ್ಎಸ್ ಮತ್ತು ಚಿಂದಿ ಮತ್ತು ತ್ಯಾಜ್ಯ ವಸ್ತು ಆಯುವವರ ಸಂಘಗಳಂಥ ಸಂಸ್ಥೆಗಳು ಈಗ ಮೌನವನ್ನು ಮುರಿದು ಗುತ್ತಿಗೆ ಪೌರ ಕಾರ್ಮಿಕರ ಹಕ್ಕೊತ್ತಾಯಗಳನ್ನು ಸಾರ್ವಜನಿಕರ ಮತ್ತು ಆಡಳಿತ ವರ್ಗದ ಗಮನಕ್ಕೆ ತರಲು ಹೋರಾಡುತ್ತಿದ್ದಾರೆ. ಹಾಗೂ ಕನಿಷ್ಠ ಕೂಲಿ ಮತ್ತು ಇನ್ನಿತರ ಸೌಲಭ್ಯಗಳನ್ನು ಗಳಿಸಿಕೊಳ್ಳುವಲ್ಲಿ ಈ ಹೋರಾಟಗಳು ಒಂದಷ್ಟು ಯಶಸ್ಸನ್ನೂ ಕಂಡಿವೆ. ಕಾನೂನು ಹೋರಾಟದ ಪ್ರಕ್ರಿಯೆಯಲ್ಲಿ ಬಿಎಂಸಿಯು ಈ ಕೆಲಸಗಾರರನ್ನು ಗುತ್ತಿಗೆದಾರರು ನೇಮಕ ಮಾಡಿಕೊಂಡಿರುವುದರಿಂದ ತಾನು ಅವರ ಮುಖ್ಯ ಉದ್ಯೋಗದಾತನಲ್ಲವೆಂದು (ಪ್ರಿನ್ಸಿಪಲ್ ಎಂಪ್ಲಾಯರ್) ವಾದಿಸಿತು.
ಆದರೆ ಈ ಗುತ್ತಿಗೆದಾರರಿಗೆ ಯಾವುದೇ ಪ್ರತ್ಯೇಕ ಕೌಶಲ್ಯವಾಗಲಿ, ಸಾಮರ್ಥ್ಯವಾಗಲಿ ಇಲ್ಲದಿರುವುದರಿಂದ ಸಂಬಳವನ್ನು ಬಿಎಂಸಿಯೇ ಪಾವತಿಸುತ್ತಿದೆಯೆಂದು ಕೆವಿಎಸ್ಎಸ್ ವಾದಿಸಿತು. ಅಷ್ಟು ಮಾತ್ರವಲ್ಲದೆ ಪರಿಸರ ರಕ್ಷಣಾ ಕಾಯ್ದೆಯ ಕಾನೂನುಗಳ ಪ್ರಕಾರ ಚರಂಡಿಗಳನ್ನು ಶುಚಿಗೊಳಿಸುವ, ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವ ಕಡ್ಡಾಯ ಕರ್ತವ್ಯಗಳು ನಗರ ಪಾಲಿಕೆಗಳದ್ದೇ ಆಗಿರುತ್ತದೆ ಎಂದೂ ಸಹ ಅದು ಎತ್ತಿತೋರಿಸಿತು. ಅಲ್ಲದೆ ಗುತ್ತಿಗೆದಾರನ ಎಲ್ಲಾ ಚಟುವಟಿಕೆಗಳನ್ನು ಬಿಎಂಸಿಯೇ ನಿಯಂತ್ರಿಸುವುದನ್ನೂ ಸಹ ಕೆವಿಎಸ್ಎಸ್ ತೋರಿಸಿತು.
ಬಿಎಂಸಿಯ ವಿರುದ್ಧ ಮೇಲಿನ ಮೂರೂ ಹಂತದ ಕೋರ್ಟು ಹೋರಾಟಗಳು ಕೆವಿಎಸ್ಎಸ್ ಎದುರಿಸಿದ ಸವಾಲುಗಳ ಒಂದು ಭಾಗವಷ್ಟೆ. ಅಸಂಘಟಿತ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸುವುದೇ ಪ್ರಾಯಶಃ ಕಾರ್ಮಿಕ ಹೋರಾಟಗಳಲ್ಲಿ ಅತ್ಯಂತ ಕಷ್ಟದ ಸವಾಲು. ಅವರ ಕೆಲಸದ ಅಭದ್ರತೆ ಮತ್ತು ಬದುಕಿನ ದುರ್ಭರ ಸ್ಥಿತಿಗತಿಗಳು ಅವರನ್ನು ಕಾರ್ಮಿಕ ಸಂಘಟನೆಗೆ ಸೇರಲು ಹೆದರುವಂತೆ ಮಾಡುತ್ತದೆ. ಒಂದು ವೇಳೆ ಸೇರಿಕೊಂಡರೂ ಅವರ ಬದುಕಿನ ಸ್ಥಿತಿಗತಿಗಳು ಬಲವಾದ ಶತ್ರುವಿನ ವಿರುದ್ಧ ದೀರ್ಘಕಾಲ ಸೆಣಸದಂತೆ ಮಾಡುತ್ತದೆ. ಇದೆಲ್ಲದರ ನಡುವೆಯೂ ಈ ಕಾರ್ಮಿಕರ ಐಕ್ಯತೆ ಮತ್ತು ಸೌಹಾರ್ದವನ್ನು ಕಾಪಾಡಿಕೊಂಡು ಬಂದ ಹಿರಿಮೆ ಕೆವಿಎಸ್ಎಸ್ಗೆ ಸೇರಬೇಕು. ಅಲ್ಲದೆ ವಿದ್ಯಾರ್ಥಿಗಳ, ಪತ್ರಕರ್ತರ, ಆರೋಗ್ಯ ಮತ್ತು ಕಾನುನು ಕಾರ್ಯಕರ್ತರ, ಚಿತ್ರ ನಿರ್ಮಾಪಕರ ಮತ್ತಿತರ ಸಮಾಜದ ಇತರ ವರ್ಗಗನ್ನು ಹಲವು ವಿಧಗಳಲ್ಲಿ ತಲುಪಿ ಈ ಹೋರಾಟಕ್ಕೆ ಅವರ ಬೆಂಬಲ ಮತ್ತು ಸಹಕಾರವನ್ನು ಪಡೆದುಕೊಳ್ಳುವಲ್ಲಿ ಸಹ ಅದು ಯಶಸ್ವಿಯಾಯಿತು.
ಒಂದೆಡೆ ‘ಸ್ವಚ್ಛ ಭಾರತ ಅಭಿಯಾನ’ದ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಲೇ ಮತ್ತೊಂದೆಡೆ ವಾಸ್ತವದಲ್ಲಿ ನಗರಗಳನ್ನು ಸ್ವಚ್ಛವಾಗಿಡುವ ಕಾರ್ಮಿಕರ ಬಗ್ಗೆ ಯಾವುದೇ ಸಂವೇದನೆಗಳನ್ನು ತೋರದ ಸರಕಾರದ ಮತ್ತು ಸ್ಥಳೀಯ ಸಂಸ್ಥೆಗಳ ಆಷಾಢಭೂತಿತನವನ್ನು ಕೆವಿಎಸ್ಎಸ್ ನ ಈ ಕಾನೂನು ವಿಜಯವು ಬಯಲುಗೊಳಿಸಿದೆ. ತನ್ನ ವೆಬ್ ಸೈಟಿನಲ್ಲಿ ಕೆವಿಎಸ್ಎಸ್ ಸಂಘಟನೆಯು ಕಸಪೊರಕೆಯನ್ನು ಹಿಡಿದುಕೊಂಡು ಮಾಧ್ಯಮಗಳಿಗೆ ಫೋಸು ಕೊಡುತ್ತಾ ಸ್ವಚ್ಛ ಭಾರತದ ನಾಟಕವಾಡುವ ಮಂತ್ರಿ ಮಹೋದಯರನ್ನು ಮತ್ತು ಇತರ ತಾರಾಮಣಿಗಳನ್ನು ಬಯಲುಗೊಳಿಸಿದೆ. ‘‘ಅವರು ಅವರ ನೆರಳನ್ನು ಗುಡಿಸುತ್ತಾರೆ ಆದರೆ ನಾವು ದೇಶವನ್ನು ಸ್ವಚ್ಛವಾಗಿಡುತ್ತೇವೆ’’ ಎಂಬ ತಲೆಬರಹದ ಮೂಲಕ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ಇತ್ತೀಚಿನ ಒಂದು ಆದೇಶದಲ್ಲಿ ಸುಪ್ರೀಂ ಕೋರ್ಟು ಒಂದು ವರ್ಗದ ಜನರ ಶುಭ್ರತೆಯನ್ನು ಮತ್ತೊಂದು ವರ್ಗದವರನ್ನು ಗುಲಾಮಗಿರಿಗೆ ಹಚ್ಚುವ ಮೂಲಕ ಸಾಧಿಸಲು ಸಾಧ್ಯವಿಲ್ಲವೆಂದು ಸರಿಯಾಗಿಯೇ ಗುರುತಿಸಿದೆ. ಈ ಸಂದೇಶವನ್ನು ಸರಕಾರ ಮತ್ತು ನಾಗರಿಕ ಸಮಾಜ ಅರ್ಥಮಾಡಿಕೊಳ್ಳಬೇಕಿದೆ.
ಕೃಪೆ: Economic and Political Weekly







