ಇನೋಳಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಅನುಸ್ಮರಣೆ ಕಾರ್ಯಕ್ರಮ
ಕೊಣಾಜೆ,ಎ.30: ಎಸ್ಕೆಎಸ್ಸೆಸ್ಸೆಫ್ ಇನೋಳಿ ಶಾಖೆಯ ಆಶ್ರಯದಲ್ಲಿ ಇನೋಳಿ ದಿ.ಯು.ಎಚ್.ಉಮರಬ್ಬ ವೇದಿಕೆಯಲ್ಲಿ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಮಜ್ಲಿಸುನ್ನೂರು ಕಾರ್ಯಕ್ರಮ ಶನಿವಾರ ನಡೆಯಿತು.
ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಕೆಐಸಿ ಅವರು ಮಾತನಾಡಿ,ರಸ್ತೆಬದಿ ನಿಂತು ಪ್ರತಿಭಟನೆ ಮಾಡುವುದರಿಂದ ಅಥವಾ ಬೊಬ್ಬೆ ಹಾಕುವುದರಿಂದ ಸಮುದಾಯದ ಅಭಿವೃದ್ಧಿ ಅಸಾಧ್ಯ, ಕಾಶ್ಮೀರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಕೈಯಲ್ಲಿ ಕಲ್ಲು ಹಿಡಿದ ಪರಿಣಾಮ ಅಭಿವೃದ್ಧಿಯನ್ನೂ ಕಾಣದೆ ಅಭದ್ರತೆಯ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಶಿಕ್ಷಣದಿಂದ ಅಭಿವೃದ್ಧಿ ಕಾಣಲು ಸಾಧ್ಯ ಎನ್ನುವ ಕಣ್ಣೀಯತ್ ಉಸ್ತಾದ್, ಸಂಶುಲ್ ಉಲಮಾ ಹಾಗೂ ಸಯ್ಯದ್ ಶಿಹಾಬುದ್ದೀನ್ ತಂಙಳ್ ಅವರ ಆಶಯ ಈಡೇರಿಸುವಲ್ಲಿ ಸಂಘಟನೆ ಮುಂಚೂಣಿಯಲ್ಲಿದೆ ಎಂದರು.
ಸತ್ಯಕ್ಕೆ ಎಂದಿಗೂ ಸೋಲಿಲ್ಲ, ಸಮಸ್ತ ಎಂಬುದು ಸಮುದ್ರ ಇದ್ದಂತೆ, ಈ ಸಂಘಟನೆ ಸತ್ಯದ ಹಾದಿಯಲ್ಲಿ ಮುನ್ನಡೆಯುತ್ತಿರುವುದರಿಂದ ಇದನ್ನು ಯಾರಿಂದಲೂ ಒಡೆಯಲು ಅಸಾಧ್ಯ, ಈ ಸಂಘಟನೆ ಯಾವತ್ತೂ ಎರಡಾಗಿಲ್ಲ ಎಂದ ಮೇಲೆ ಒಂದಾಗುವ ಮಾತು ಅರ್ಥವಿಲ್ಲದ್ದು ಎಂದು ಉಸ್ತಾದ್ ಇಬ್ರಾಹಿಂ ಬಾಖವಿ ಕೆ.ಸಿ.ರೋಡು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಪ್ರಯುಕ್ತ ನಡೆದ ಧ್ವಜರೋಹಣ ಎಸ್ಕೆಎಸ್ಸೆಸ್ಸೆಫ್ ಉಸ್ತುವಾರಿ ಮಹಮ್ಮದ್ ಗಂಡಿ ನೆರವೇರಿಸಿದರು. ಕಿನ್ಯ ವಾದಿತ್ತೈದ ಸಂಶುಲ್ ಉಲಮಾ ಅಕಾಡೆಮಿ ಅಧ್ಯಕ್ಷ ಅಸ್ಸಯ್ಯದ್ ಅಮೀರ್ ತಂಙಳ್ ಅಲ್ಬುಖಾರಿ ನೇತೃತ್ವದಲ್ಲಿ ಮಜ್ಲಿಸುನ್ನೂರು ನಡೆಯಿತು. ಪಾಣಕ್ಕಾಡ್ ಅಸ್ಸಯ್ಯದ್ ಶಫೀಕ್ ಅಲೀ ಶಿಹಾಬ್ ತಂಙಳ್ ದುವಾ ಮಾಡಿದರು. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿದರು.
ಸಲೀಂ ವಾಫಿ ಅಂಬಲಕ್ಕಂಡಿ ಮುಖ್ಯ ಭಾಷಣ ಮಾಡಿದರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅನುಸ್ಮರಣಾ ಭಾಷಣ ಮಾಡಿದರು. ಕೋಟೆಕಾರ್ ಮುದರ್ರಿಸ್ ಹಾರೂನ್ ಅಹ್ಸನಿ, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಮಹಮ್ಮದ್ ಶಮೀಮ್ ಸಖಾಫಿ, ಹಾಫಿಳ್ ಝೈನಿ ಸಖಾಫಿ ಉಳ್ಳಾಲ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಇಬ್ರಾಹಿಂ ಕೊಣಾಜೆ, ಮಹಮ್ಮದ್ ಮಾಸ್ಟರ್ ಮಲಾರ್, ಮಜೀದ್ ಮಾಸ್ಟರ್ ಮಲಾರ್, ಅಬ್ದುಲ್ ಸಲೀಂ ಅರ್ಶದಿ, ಇಬ್ರಾಹಿಂ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.
ಮದರಸ ವಿದ್ಯಾರ್ಥಿ ಅಬ್ದುಲ್ ನಾಸಿರ್ ಕಿರಾಅತ್ ಪಠಿಸಿದರು. ಮಹಮ್ಮದ್ ರಿಯಾರ್ ಫೈಝಿ ಸ್ವಾಗತಿಸಿದರು. ಇಬ್ರಾಹಿಂ ನೌಷಾದ್ ದಾರಾಣಿ ಇನೋಳಿ ವಂದಿಸಿದರು. ಇರ್ಫಾನ್ ಮೌಲವಿ ಕಾರ್ಯಕ್ರಮ ನಿರೂಪಿಸಿದರು.