ಸೌಹಾರ್ದತೆಯ ಭಾರತ ಇತರ ರಾಷ್ಟ್ರಗಳಿಗೆ ಮಾದರಿ: ಡಾ.ಎಸ್.ಎನ್ ಸುಬ್ಬರಾವ್
ಯೆನೆಪೊಯ ವಿವಿ: ಯುವಜನತೆಗಾಗಿ ರಾಷ್ಟ್ರೀಯ ಏಕೀಕರಣ ಶಿಬಿರಕ್ಕೆ ಚಾಲನೆ

ಕೊಣಾಜೆ, ಮೇ 2: ಭಾರತವು ವೈವಿಧ್ಯತೆಯಿಂದ ಕೂಡಿರುವ ರಾಷ್ಟ್ರವಾದರೂ ಏಕತೆಯೊಂದಿಗೆ ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಬಾಳುವ ಮೂಲಕ ಪ್ರಪಂಚದ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ. ಭಾರತಕ್ಕೆ ದೊರೆತ ಸ್ವಾತಂತ್ರ್ಯ ಇತರ 117 ರಾಷ್ಟ್ರಗಳಿಗೂ ಸ್ಫೂರ್ತಿಯಾಗಿತ್ತು ಎಂದು ರಾಷ್ಟ್ರೀಯ ಯುವ ಯೋಜನೆಯ ನಿರ್ದೇಶಕ ಡಾ.ಎಸ್.ಎನ್ ಸುಬ್ಬರಾವ್ ಹೇಳಿದರು.
ಹೊಸದಿಲ್ಲಿಯ ರಾಷ್ಟ್ರೀಯ ಯುವ ಯೋಜನೆ, ಯೆನೆಪೊಯ ವಿವಿಯ ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ದೇರಳಕಟ್ಟೆ ಯೆನೆಪೊಯ ವಿಶ್ವವಿದ್ಯಾನಿಲಯದ ಯೆಂಡ್ಯುರೆನ್ಸ್ ಝೋನ್ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಯುವಜನತೆಗಾಗಿ ರಾಷ್ಟ್ರೀಯ ಏಕೀಕರಣ ಶಿಬಿರ-2017 ಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಲವಾರು ಧರ್ಮ, ಭಾಷೆ, ಜಾತಿಗಳೊಂದಿಗೆ ವಿವಿಧತೆಯನ್ನು ಹೊಂದಿರುವ ಭಾರತವು ಏಕತೆಯ ಮನೋಭಾವನೆಯೊಂದಿಗೆ ಅಖಂಡವಾಗಿ ರೂಪಿತವಾಗಿದೆ. ಇತರೆ ದೇಶಗಳ ಪಾಸ್ಪೋರ್ಟಿನಲ್ಲಿ ಧರ್ಮದ ಆಧಾರದಲ್ಲಿ ಹೆಸರನ್ನು ನಮೂದಿಸಿದ್ದರೆ, ದೇಶದ ಪಾಸ್ಪೋರ್ಟಿನಲ್ಲಿ ಗಣರಾಜ್ಯ ಭಾರತ ಎಂದು ನಮೂದಿಸಲಾಗಿರುವುದು ದೇಶದ ಏಕತೆಯನ್ನು ತೋರಿಸುತ್ತದೆ ಎಂದರು.
ಯೆನೆಪೊಯ ವಿವಿಯ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಅರುಣ್.ಎನ್.ಪೂಜಾರ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಎ.ಎಂ ಖಾನ್, ನಿವೃತ್ತ ಸೇನಾಧಿಕಾರಿ ಹಾಗೂ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ಶರತ್ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು.
ಯೆನೆಪೊಯ ದಂತ ಮಹಾವಿದ್ಯಾಲಯದ ಡೀನ್.ಡಾ.ಬಿ.ಎಚ್.ಶ್ರೀಪತಿ ರಾವ್, ಯೆನೆಪೊಯ ವೈದ್ಯಕೀಯ ಕಾಲೇಜಿನ ಡೀನ್ ಡಾ.ಗುಲಾಂ ಜೀಲಾನಿ ಖಾದಿರಿ, ರಾಷ್ಟ್ರೀಯ ಯುವ ಯೋಜನೆಯ ಡಾ.ರಾಮ್ ಸಿಂಗ್ ಪರ್ಮಾರ್, ಡಾ.ಸುಕುಮಾರ್ ಕರಿಯಾಲ್, ಸಂಘಟನಾ ಕಾರ್ಯದರ್ಶಿ ಅನಿಲ್ ಹೆಬ್ಬಾರ್, ಡಾ.ಅಶ್ವಿನಿ ಶೆಟ್ಟಿ ಉಪಸ್ಥಿತರಿದ್ದರು
ಡಾ.ಮುಹಮ್ಮದ್ ನ್ಹುಮನ್ ಮತ್ತು ಡಾ. ಶ್ರೀಕಾ ರೈ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ರಾಜ್ಯಗಳಿಂದ ಆಗಮಿಸಿದ ಶಿಬಿರಾರ್ಥಿಗಳು
ಶಿಬಿರದಲ್ಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಜಮ್ಮುಕಾಶ್ಮೀರ, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಘಢ, ತ್ರಿಪುರ, ಬಿಹಾರಮ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 500 ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ನಡುವೆ ಸಂವಾದ ಹಾಗೂ ಸಂಸ್ಕೃತಿ, ಕಲೆ , ಸಂಪ್ರದಾಯಗಳ ಕುರಿತು ಪರಸ್ಪರ ಪರಿಚಯದ ಕಾರ್ಯಕ್ರಮಗಳು, ನಾಯಕತ್ವದ ಕೌಶಲ್ಯಗಳು, ಆರೋಗ್ಯ ಜಾಗೃತಿ ಪ್ರಾಥಮಿಕ ಚಿಕಿತ್ಸೆ ತರಬೇತಿ ಕಾರ್ಯಕ್ರಮ, ದುರಂತ ನಿರ್ವಹಣೆ, ರಾಷ್ಟ್ರ ನಿರ್ಮಾಣದಲ್ಲಿ ಯುವಸಮುದಾಯದ ಪಾತ್ರ ಮಹಿಳಾ ಸಬಲೀಕರಣ, ಪರಿಸರ ಉಳಿಸುವುದು, ಐತಿಹಾಸಿಕ ಸ್ಮಾರಕಗಳ ರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಶಿಬಿರ ಒಳಗೊಂಡಿದೆ.
ಯೆನೆಪೊಯ ವಿವಿ ಕ್ಯಾಂಪಸ್ ಹಾಗೂ ಉಳ್ಳಾಲ ಸಮುದ್ರ ತೀರದಲ್ಲಿ ಸ್ವಚ್ಛತೆ, ಬಬ್ಬುಕಟ್ಟೆ, ಚೇತನನಗರ ಕುಂಪಲದ ಶಾಲೆಗಳಿಗೆ ಸುಣ್ಣ ಬಳಿಯುವ ಕಾರ್ಯಕ್ರಮಗಳು ನಡೆಯಲಿದೆ.







