ಅಡಿಕೆ ಬೆಳೆಗಾರರ ಹಿತಕ್ಕಾಗಿ ತೋಟಗಾರಿಕಾ ಕ್ಷೇತ್ರದ ತಜ್ಞರ ಮೂಲಕ ವೈಜ್ಞಾನಿಕ ಸಮೀಕ್ಷೆ: ಪ್ರಕಾಶ ಕಮ್ಮರಡಿ

ಚಿಕ್ಕಮಗಳೂರು, ಮೇ 2: ಹಳದಿರೋಗವೂ ಸೇರಿದಂತೆ ಬೆಲೆ ಏರಿಳಿತ ಮುಂತಾದ ಕಾರಣಗಳಿಂದ ಅಡಿಕೆ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಪರಿಹಾರ ಅಥವಾ ಬದಲಿ ಮಾರ್ಗೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕಾ ಕ್ಷೇತ್ರದ ತಜ್ಞರ ಮೂಲಕ ವೈಜ್ಞಾನಿಕ ಸಮೀಕ್ಷೆ ನಡೆಸಲಾಗುವುದು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಬಿ.ಕಮ್ಮರಡಿ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭತ್ತ, ಅಡಿಕೆ, ಕಾಳುಮೆಣಸು ಬೆಳೆ ಬೆಳೆಯುವ ಕೃಷಿಕರು ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರದ ಮಾರ್ಗೋಪಾಯಗಳ ವಿವರ ನೀಡಿದರು. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ತಾವು ಮಳೆ ಅಶ್ರಿತ ಭತ್ತ ಬೆಳೆಯುವ ಪ್ರದೇಶದಲ್ಲಿ ಪ್ರವಾಸ ನಡೆಸಿದ್ದಾಗಿ ತಿಳಿಸಿದರು. ಈ ಹಿಂದೆ ತಾವು ಕೃಷಿಭೂಮಿ ಸದ್ಬಳಕೆ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಅದರಲ್ಲಿ ಬೇರೆ ಬೇರೆ ಕಾರಣದಿಂದ ರೈತರು ಬೀಳು ಬಿಟ್ಟಿರುವ ಭೂಮಿಯ ಬಗ್ಗೆ ಉಲ್ಲೇಖಿಸಿದ್ದಾಗಿ ತಿಳಿಸಿದರು.
ರಾಜ್ಯದಲ್ಲಿ ಸುಮಾರು ಇಪ್ಪತ್ತೊಂದು ಲಕ್ಷ ಹೆಕ್ಟೇರ್ ಭೂಮಿ ಬೀಳುಬಿಡಲಾಗಿದೆ. ಜಿಲ್ಲೆಯಲ್ಲಿ ಶೇ. 16ರಷ್ಟು ಕೃಷಿಭೂಮಿ ಮಾತ್ರ ಬಳಕೆಯಾಗುತ್ತಿದ್ದು .ಬಹುತೇಕ ಆ ಭೂಮಿ ಮಳೆ ಆಶ್ರಿತವಾಗಿದೆ. ಕಳೆದ ಎರಡು ವರ್ಷಗಳಿಂದ ಮಳೆ ಕೊರತೆ ಉಂಟಾಗಿದೆ. ಆದರೆ ಕಳೆದ ಐದು ವರ್ಷಗಳಿಂದ ಭತ್ತದ ಬೆಲೆ ಕುಸಿತ, ಇಳುವರಿ ಮುಂತಾದ ಕಾರಣಗಳನ್ನು ಕೃಷಿಕರು ಮುಂದಿಡುತ್ತಿದ್ದಾರೆ ಎಂದರು.
ಈ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ಅಡಿಕೆ ಹಳದಿ ರೋಗದ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ಸುಮಾರು ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಳದಿರೋಗ ಬಾದೆ ಇದೆ. ಈ ರೋಗಕ್ಕೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆದಿದೆ. ಒಂದೆಡೆ ಹಳದಿರೋಗದ ಬಾದೆ ಇದ್ದರೆ ಮತ್ತೊಂದೆಡೆ ಸ್ಥಿರ ಮಾರುಕಟ್ಟೆ ಇಲ್ಲದೆ ಬೆಲೆಯ ಏರಿಳಿತ ಕೂಡ ಅಡಿಕೆ ಬೆಳೆಗಾರರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ರೋಗ ಪೀಡಿತ ಪ್ರದೇಶದಲ್ಲಿ ವೈಜ್ಞಾನಿಕವಾದ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದರು.
ಭಟ್ಕಳ, ಶಿವಮೊಗ್ಗ ಮತ್ತು ಕಾಸರಗೋಡಿನ ತೋಟಗಾರಿಕಾ ಸಂಶೋಧನಾ ಕೇಂದ್ರದ ತಜ್ಞರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡದ ಮೂಲಕ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ರೋಗ ತಗುಲಿರುವ ಪ್ರದೇಶದ ವಿಸ್ತೀರ್ಣ ಹಾಗೂ ರೋಗದ ಪ್ರಮಾಣ ಕುರಿತಂತೆ ಸಂಶೋಧನೆ ನಡೆಸಿ ಮುಂದಿನ ನವೆಂಬರ್ ಒಳಗೆ ಸಮೀಕ್ಷೆಯ ವರದಿ ಸಲ್ಲಿಸುವಂತೆ ಕೋರಲಾಗುವುದು ಎಂದು ತಿಳಿಸಿದರು.
ಈ ರೋಗ ನಿವಾರಣೆ ಸಾಧ್ಯವೇ ಅಥವಾ ಸಾಧ್ಯವಾಗದಿದ್ದರೆ ಬದಲಿ ಪರಿಹಾರದ ಮಾರ್ಗೋಪಾಯ ತಿಳಿಸುವಂತೆ ತಂಡಕ್ಕೆ ಸೂಚನೆ ನೀಡುವ ಮುನ್ನ ಹಣಕಾಸು ವ್ಯವಸ್ಥೆ, ವ್ಯಾಪ್ತಿ, ಸಂಶೋಧನೆಯ ರೂಪು ರೇಷೆ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಸಲಾಗುವುದು ಎಂದರು. ಅಡಿಕೆ ಬೆಳೆಗಾರರು ಬೆಂಬಲಬೆಲೆ ಕೇಳುತ್ತಿಲ್ಲ. ಬದಲಿಗೆ ಬೆಲೆ ಸ್ಥಿರತೆ ಕೇಳುತ್ತಿದ್ದಾರೆ. ಹಾಗೆ ಮಧ್ಯವರ್ತಿಗಳ ಹಾವಳಿ ತಡೆಗೆ ಆನ್ಲೈನ್ ಮಾರಾಟ ಉತ್ತಮ ಮಾರ್ಗವಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಅಡಿಕೆ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್ಥಿಕ ಸಮಸ್ಯೆ, ಮಾರುಕಟ್ಟೆ, ವೈಜ್ಞಾನಿಕ ಪರಿಹಾರದ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಮಾಸಾಂತ್ಯದೊಳಗೆ ಶೃಂಗೇರಿಯಲ್ಲಿ ರೈತರಿಗಾಗಿ ಕಾರ್ಯಾಗಾರವೊಂದನ್ನು ಏರ್ಪಡಿಸಲಾಗುವುದು. ಭತ್ತ ಬೆಳೆಯುವ ಬಗ್ಗೆಯೂ ಆಯೋಗ ಒತ್ತು ನೀಡಲಿದ್ದು ಬೀಳು ಭೂಮಿ ಬಳಕೆ, ನಾಟಿತಳಿಗೆ ಒತ್ತು ನೀಡುವ ಕುರಿತಂತೆ ಈ ತಿಂಗಳ ಅಂತ್ಯದೊಳಗೆ ಕೊಪ್ಪತಾಲೂಕಿನ ಕಮ್ಮರಡಿಯಲ್ಲಿ ಕಾರ್ಯಾಗಾರವೊಂದನ್ನು ಏರ್ಪಡಿಸಲಾಗುವುದು ನಾಟಿ ತಳಿ ಬೆಳೆಯುವವರಿಗೆ ಪ್ರೋತ್ಸಾಹ ಧನ ನೆರವು ನೀಡುವ ನಿಟ್ಟಿನಲ್ಲಿ ದಕ್ಷಿಣ ರಾಜ್ಯಗಳ ಒಂದು ವಿಭಾಗದ ತಂಡ ಅಂದು ಮಾಹಿತಿ ನೀಡಲಿದೆ ಎಂದು ಹೇಳಿದರು.
ಅಡಿಕೆ ಮೇಲಿನ ಕಾನೂನು ಸಮರ ಮುಂದುವರೆದಿದೆ. ಕಾಫಿ ಸೇರಿದಂತೆ ಇತರೆ ಬೆಳೆಗಳಿಗೆ ಇರುವ ಮಂಡಳಿ ಮಾದರಿ ಮಂಡಳಿಯೊಂದು ಅಡಿಕೆ ಬೆಳೆಗೂ ಅಗತ್ಯವಾಗಿದೆ. ಅಂತಹ ಮಂಡಳಿ ರಚಿಸಿ ಅಡಿಕೆ ಉತ್ತೇಜನ ನೀಡಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.







