ಬಲ್ಯಮುಂಡೂರಿನಲ್ಲಿ ಯುವಕನ ಅಪಹರಣ
ಮಡಿಕೇರಿ, ಮೇ 4 : ಶ್ರೀಮಂಗಲ ಆರಕ್ಷಕ ಠಾಣಾ ವ್ಯಾಪ್ತಿಯ ಬಲ್ಯಮುಂಡೂರು ಗ್ರಾಮದ ನಿವಾಸಿ ರಾಜು ಎಂಬವರ ಪುತ್ರ ಗಿರೀಶ್(25) ಎಂಬಾತನನ್ನು ಬುಧವಾರ ರಾತ್ರಿ 9:10 ಗಂಟೆಗೆ ಅಪರಿಚಿತರು ಅಪಹರಣ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜು ಅವರ ಪುತ್ರರಾದ ಗಿರೀಶ್ ಹಾಗೂ ಗಣೇಶ ಇಬ್ಬರು ತಮ್ಮ ಮೋಟಾರು ಬೈಕ್ನಲ್ಲಿ ಸಮೀಪದ ಪಟ್ಟಣದಿಂದ ಹಿಂದಿರುಗುತ್ತಿದ್ದಾಗ ರಾತ್ರಿ ಡಸ್ಟರ್ ಹಾಗೂ ಓಮ್ನಿ ವಾಹನದಲ್ಲಿ ಬಂದಿದ್ದ 7 ಜನ ಅಪರಿಚಿತರು ಬೈಕನ್ನು ಅಡ್ಡಗಟ್ಟಿ ಗಿರೀಶ್ ಹಾಗೂ ಗಣೇಶ ಇಬ್ಬರ ಮೇಲೆ ಮೆಣಸಿನ ಪುಡಿ ಎರಚಿದ್ದಾರೆ. ನಂತರ ಗಿರೀಶನನ್ನು ಡಸ್ಟರ್ ಕಾರ್ನಲ್ಲಿ ಅಪಹರಿಸಿದ್ದಾರೆ. ತಾನು ಸ್ಥಳದಿಂದ ಓಡಿ ತಪ್ಪಿಸಿಕೊಂಡಿರುವುದಾಗಿ ಗಿರೀಶನ ಸೋದರ ಗಣೇಶ ಶ್ರಿಮಂಗಲ ಪೊಲೀಸ್ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ತನ್ನ ದೊಡ್ಡಪ್ಪಸಿದ್ದಯ್ಯ ಹಾಗೂ ಅವರ ಮಗ ಸುರೇಶ ಎಂಬವರು ಈ ಕೃತ್ಯವೆಸಗಿರಬಹುದೆಂದು ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಸಿದ್ದಯ್ಯ ಹಾಗೂ ಸುರೇಶ ಸೇರಿದಂತೆ ಹಲವರ ವಿರುದ್ಧ ಸಂಶಯಾಧಾರಿತ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ಅವರ ನಿರ್ದೇಶನದಂತೆ ವೀರಾಜಪೇಟೆ ತಾಲೂಕು ಡಿವೈಎಸ್ಪಿ ನಾಗಪ್ಪನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಪತ್ತೆ ಕಾರ್ಯ ಚುರುಕುಗೊಂಡಿದೆ.







