ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಕೊರತೆ: ರೋಗಿಗಳ ಪರದಾಟ

ಮಂಗಳೂರು, ಮೇ 7: ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ, ಮಾತ್ರವಲ್ಲದೆ ಸಮೀಪದ ಜಿಲ್ಲೆಗಳ ಬಡ ರೋಗಿಗಳಿಗೂ ಆಸರೆಯಾಗಿರುವ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಕೊರತೆಯಿದ್ದು, ತುರ್ತು ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ. ಐಸಿಯು (ತೀವ್ರ ನಿಗಾ ಘಟಕ)ನಲ್ಲಿ ಚಿಕಿತ್ಸೆ ನೀಡಬೇಕಾದ ರೋಗಿಗಳನ್ನೂ ವಾರ್ಡ್ನಲ್ಲಿಯೇ ಇರಿಸಿ ಕಾಯಬೇಕಾದ ದುಸ್ಥಿತಿ ಜಿಲ್ಲಾಸ್ಪತ್ರೆಯದ್ದಾಗಿದೆ.
150 ವರ್ಷಗಳ ಇತಿಹಾಸವಿರುವ, ಒಂದು ಸಾವಿರ ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆ ಬಡರೋಗಿಗಳ ಪಾಲಿಗೆ ವರದಾನ. ದೇಶದ ಅತಿ ಹಳೆಯ ಹಾಗೂ ಅತ್ಯುತ್ತಮ ಸರಕಾರಿ ಆಸ್ಪತ್ರೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ವೆನ್ಲಾಕ್ನಲ್ಲಿ ಐಸಿಯು ಲೆವೆಲ್ 1 (ಕೃತಕ ಉಸಿರಾಟ ಸಹಿತ ಜೀವರಕ್ಷಕ ವ್ಯವಸ್ಥೆ)ರಲ್ಲಿ 12 ಹಾಸಿಗೆಗಳು ಮತ್ತು ಸಾಮಾನ್ಯ ತೀವ್ರ ನಿಗಾ ಘಟಕ ಲೆವೆಲ್ 2ನಲ್ಲಿ ಏಳು ಹಾಸಿಗೆಗಳು ಮಾತ್ರ ಲಭ್ಯ. ವಿಪರ್ಯಾಸವೆಂದರೆ, ನಗರದ ಪ್ರಮುಖ ಸರಕಾರಿ ಹೆರಿಗೆ ಆಸ್ಪತ್ರೆಯಾಗಿರುವ ಲೇಡಿಗೋಶನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ರೋಗಿಗಳನ್ನು ವೆನ್ಲಾಕ್ನ ಐಸಿಯುನಲ್ಲಿಯೇ ದಾಖಲಿಸಬೇಕಾಗಿದೆ. ವೆನ್ಲಾಕ್ನಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆಗಳು ಉಚಿತವಾಗಿದ್ದರೂ, ಐಸಿಯು ಕೊರತೆಯಿಂದಾಗಿ ಬಡ ರೋಗಿಗಳು ಕೂಡಾ ಸುತ್ತಮುತ್ತಲಿನ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗುತ್ತಿದೆ. ವೆನ್ಲಾಕ್ನಲ್ಲಿ ಪ್ರತಿನಿತ್ಯ ಸುಮಾರು 10ರಷ್ಟು ರೋಗಿಗಳು ಐಸಿಯುಗಾಗಿ ವಾರ್ಡ್ನಲ್ಲೇ ಕಾಯಬೇಕಾದ ಪರಿಸ್ಥಿತಿ ಇದೆ.
ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ದಾವಣಗೆರೆ, ಗದಗ, ಹಾವೇರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಬಡ ರೋಗಿಗಳು ವೆನ್ಲಾಕ್ ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಐಸಿಯು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳ ಕೊರತೆ ಇದೆ. ಅಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಗಳೂ ಕೂಡಾ ತುರ್ತು ಸಂದರ್ಭಗಳಲ್ಲಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಬಹುತೇಕವಾಗಿ ಐಸಿಯು ಸೌಲಭ್ಯಕ್ಕಾಗಿಯೇ ಇಲ್ಲಿಗೆ ಬರುತ್ತಾರಾದರೂ, ಇಲ್ಲಿ ಐಸಿಯುನ ಕೊರತೆ ನಮಗೆ ಸಮಸ್ಯೆಯಾಗಿದೆ ಎನ್ನುತ್ತಾರೆ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ.
ವರ್ಷದಲ್ಲಿ ಸುಮಾರು 30,000 ಮಂದಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗುತ್ತಾರೆ. ಇವರಲ್ಲಿ ಸುಮಾರು 1,500ರಷ್ಟು ಮಂದಿ ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಾರೆ. ವರ್ಷದಿಂದ ವರ್ಷಕ್ಕೆ ಐಸಿಯುಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ.
ಲೇಡಿಗೋಶನ್ ನೂತನ ಕಟ್ಟಡ ಆರಂಭಗೊಂಡಲ್ಲಿ ಹೊರೆತಗ್ಗುವ ನಿರೀಕ್ಷೆ
ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡ ಕಾರ್ಯಾರಂಭಗೊಂಡಲ್ಲಿ ಅಲ್ಲಿನ ರೋಗಿಗಳಿಗೆ ಐಸಿಯು ವ್ಯವಸ್ಥೆ ಅಲ್ಲೇ ದೊರಕಲಿದೆ. ಇದೇ ವೇಳೆ ವೆನ್ಲಾಕ್ ಆಸ್ಪತ್ರೆಯ ಎರಡನೇ ಬ್ಲಾಕ್ ನಿರ್ಮಾಣಕ್ಕೂ ಸಿದ್ಧತೆ ನಡೆಯುತ್ತಿದೆ. ಅಲ್ಲಿ 20 ಹಾಸಿಗೆಗಳ ಲೆವೆಲ್ 1 ಐಸಿಯು ಹಾಗೂ ಲೆವೆಲ್ 2 ಐಸಿಯು ಸ್ಥಾಪಿಸುವ ಪ್ರಸ್ತಾಪವೂ ಇದೆ. ಅವೆಲ್ಲವೂ ಶೀಘ್ರದಲ್ಲಿ ನೆರವೇರಲ್ಪಟ್ಟಲ್ಲಿ ರೋಗಿಗಳ ಪರದಾಟ ಸಾಕಷ್ಟು ಮಟ್ಟಿಗೆ ಕಡಿಮೆಯಾಗಬಹುದು.







