ಕರ್ನಾಟಕ ಸಂಗೀತ ಕಾರ್ಯಾಗಾರ ಉದ್ಘಾಟನೆ

ಉಡುಪಿ, ಮೇ 7: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಸುರತ್ಕಲ್ನ ಮಣಿ ಕೃಷ್ಣಸ್ವಾಮಿ ಅಕಾಡಮಿ ಚೆಂಗ್ಲಪೇಟ್ ರಂಗನಾಥನ್ ಸಂಸ್ಮರಣೆಗಾಗಿ ಹಮ್ಮಿಕೊಂಡ ಒಂದು ವಾರದ ಕರ್ನಾಟಕ ಸಂಗೀತ ಕಾರ್ಯಾಗಾರ ಮತ್ತು ಸಂಗೀತ ಕಚೇರಿ ಕಾರ್ಯಕ್ರಮಕ್ಕೆ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಇಂದು ಬೆಳಗ್ಗೆ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಚಾಲನೆ ನೀಡಿದರು.
ಆಚಾರ್ಯ ಮಧ್ವರು ಪ್ರಭುದ್ದ ಶಾಸ್ತ್ರೀಯ ಸಂಗೀತ ವಿದ್ವಾಂಸರಾಗಿದ್ದು, ಅವರು ಹಾಡಿದರೆ ಮರಗಿಡಗಳು ಚಿಗುರುತ್ತಿದ್ದವು. ಇಂತಹ ಶಕ್ತಿ ಸಂಗೀತ ಕಲೆಗೆ ಇದ್ದು, ಇದನ್ನು ಪೋಷಿಸಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀವಚನ ನೀಡಿದರು. ರಂಜನಿ ಮೆಮೋರಿಯಲ್ ಟ್ರಸ್ಟ್ನ ವಿ. ಅರವಿಂದ ಹೆಬ್ಬಾರ್, ನಾಗಸ್ವರ ವಿದ್ವಾಂಸ ಬಪ್ಪನಾಡು ನಾಗೇಶ್, ಯುವ ಕಲಾಮಣಿ ಪ್ರಾರ್ಥನಾ ಸಾಯಿ ನರಸಿಂಹನ್ ಸಭೆಯಲ್ಲಿ ಉಪಸ್ಥಿತರಿದ್ದರು.
ಮಣಿ ಕೃಷ್ಣಸ್ವಾಮಿ ಅಕಾಡಮಿಯ ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು. ಪ್ರೊ.ಎಂ.ಎಲ್. ಸಾಮಗ ವಂದಿಸಿದರು.





