ವಿಕಲಚೇತನರ ಮೀಸಲಾತಿ ಆಯ್ಕೆ ಸಮರ್ಪಕವಾಗಿ ನಡೆದಿಲ್ಲ : ಸುಧಾಕರ ಶೆಟ್ಟಿ
ವಿಕಲಚೇತನರ ಅರಿವಿನ ಸಿಂಚನ ಮಾಹಿತಿ ಕಾರ್ಯಕ್ರಮ

ಪುತ್ತೂರು,ಮೇ 9: ವಿಕಲಚೇತನರಿಗೆ ಕೆಲಸ ಮತ್ತು ಇನ್ನಿತರ ವ್ಯವಸ್ಥೆಗಳಿಗೆ ನೀಡಲಾಗುತ್ತಿರುವ ಮೀಸಲಾತಿ ಆಯ್ಕೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಮೀಸಲಾತಿಗಳು ಎಲ್ಲರಿಗೂ ತಲುಪುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳು ನಡೆಯಬೇಕು ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಹೇಳಿದರು.
ಅವರು ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಬಾಗದ ನಟರಾಜ ವೇದಿಕೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ವಿಕಲಚೇತನರ ಅರಿವಿನ ಸಿಂಚನ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಕಲಚೇತನರು ಇದೀಗ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ಹೆಸರು ಕೀರ್ತಿಯನ್ನು ಪಡೆಯುತ್ತಿದ್ದಾರೆ.
ಅವರಿಗೆ ಧೈರ್ಯ ಮತ್ತು ಶಕ್ತಿ ತುಂಬುವ ಕೆಲಸಗಳು ಆಗಬೇಕು. ಹಲವಾರು ಎಂಡೋಪೀಡಿತ ವಿಕಲಚೇತನರಿಗೆ ಇನ್ನೂ ಸರಿಯಾಗಿ ಮಾಶಾಸನ ದೊರಕದಿರುವುದು ವಿಷಾಧನೀಯ ಎಂದ ಅವರು ಈ ಬಗ್ಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸಾಕಷ್ಟು ಮನವರಿಕೆ ಮಾಡುತ್ತಿದ್ದರೂ ಪೂರಕ ಸ್ಪಂಧನೆ ಸಿಗುತ್ತಿಲ್ಲ ಎಂದರು.
ಮಾನಸಿಕ ತಜ್ಞ ಡಾ. ಜಯಂತ್ ಕುಮಾರ್ ಮಾತನಾಡಿ ಮಾನಸಿಕ ಕಾಯಿಲೆಗಳ ಬಗ್ಗೆ ಹಲವಾರು ಮಂದಿಗಳಲ್ಲಿ ತಪ್ಪು ಕಲ್ಪನೆಗಳಿದ್ದು, ಶೇ. 30 ಮಂದಿ ಬದುಕಿನಲ್ಲಿ ಒಂದು ಬಾರಿಯಾದರೂ ಮಾನಸಿಕ ಕಾಯಿಲೆಗಳು ಬರುತ್ತಿದೆ. ಇದಕ್ಕೆ ಚಿಕಿತ್ಸೆಗಳಿಂದ ಪರಿಹಾರವಿದೆ. ಕೆಲವು ರೋಗಗಳು ಚಿಕಿತ್ಸೆಗೆ ಸ್ಪಂಧಿಸುವುದಿಲ್ಲ. ವಿವಾಹ ಮಾನಸಿಕ ರೋಗಕ್ಕೆ ಪರಿಹಾರವಲ್ಲ. ಮೊದಲು ರೋಗವನ್ನು ಪರಿಹರಿಸಿ ಬಳಿಕ ವಿವಾಹ ಮಾಡಿದರೆ ಕುಟುಂಬದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಇದೊಂದು ಶಾಪದಿಂದ ಬರುವ ಕಾಯಿಲೆಯಲ್ಲ. ಇದರಿಂದ ರೋಗಿಗಳ ಪ್ರತಿಭೆಗೆ ಕುಂದಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಕಲಚೇತನರ ವಿಶೇಷ ಶಿಕ್ಷಕ ಶಿವಪ್ಪ ರಾಥೋಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಪುತ್ತೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ, ತಾ.ಪಂ. ವಿಸ್ತರಣಾಧಿಕಾರಿ ಶಿವಪ್ರಕಾಶ್ ಅಡ್ಪಂಗಾಯ, ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರದ ನೋಡೆಲ್ ಅಧಿಕಾರಿ ಪಿ.ಎಸ್. ಸುಬ್ರಮಣಿ, ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್, ಲಯನೆಸ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣ, ತಾಲೂಕು ವಿಕಲಚೇತನರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಎರ್ಕ ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಕಲಚೇತನರ ವಿಶೇಷ ಶಿಕ್ಷಕ ಶಿವಪ್ಪ ರಾಥೋಡ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ ಸ್ವಾಗತಿಸಿದರು. ಪುನರ್ವಸತಿ ಕಾರ್ಯಕರ್ತರಾದ ಮೋನಪ್ಪ ವಂದಿಸಿದರು. ಸೇಸಪ್ಪ ನಿರೂಪಿಸಿದರು.







