ಮೇ 13ರಂದು ಬೈಂದೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ
ಉಡುಪಿ, ಮೇ 9: ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯು ಬೈಂದೂರಿನ ರಾಜರಾಜೇಶ್ವರಿ ಕಲಾ ಮಂದಿರದಲ್ಲಿ ಮೇ 13ರಂದು ಜರಗಲಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕಾರಿಣಿ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿರುವರು. ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿ ಸುವ ಹಾಗೂ ಪಕ್ಷ ಸಂಘಟನೆಯ ಕುರಿತು ಇಲ್ಲಿ ಚರ್ಚೆ ನಡೆಯಲಿದೆ. ಸಂಜೆ 5 ಗಂಟೆಗೆ ವಂಡ್ಸೆಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪಹಾಗೂ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ 15 ದಿನಗಳ ಕಾಲ ಪೂರ್ಣಾವಧಿ ವಿಸ್ತಾರಕರಾಗಿ ಪ್ರತಿ ವಿಧಾನಸಭಾ ಕ್ಷೇತ್ರ ದಿಂದ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರನ್ನೊಳಗೊಂಡ 150 ಜನರನ್ನು ಗುರುತಿಸಲಾಗಿದೆ. ಸೆ.25ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ದೇಶಾದ್ಯಂತ ಸುಮಾರು 3.80 ಲಕ್ಷ ಕಾರ್ಯಕರ್ತರು 15 ದಿನಗಳ, 2480 ಮಂದಿ 6 ತಿಂಗಳ ಮತ್ತು 1580 ಮಂದಿ 1 ವರ್ಷದ ವಿಸ್ತಾರಕರಾಗಿ ಕಾರ್ಯ ನಿರ್ವಹಿಸಲಿರುವರು ಎಂದು ಅವರು ತಿಳಿಸಿದರು.
ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮ ಶತಾಬ್ದಿ ಅಂಗವಾಗಿ ಜಿಲ್ಲೆಯಲ್ಲಿ ಮಹಿಳಾ ಮೋರ್ಚಾದಿಂದ ಸ್ತ್ರೀ ಸಮಾವೇಶ, ರೈತ ಮೋರ್ಚಾ ದಿಂದ ಲಕ್ಷ ವೃಕ್ಷ ಸಸಿ ನೆಡುವ ಕಾರ್ಯಕ್ರಮ, ಯುವ ಮೋರ್ಚಾದಿಂದ ದೇಶೀಯ ಕ್ರೀಡಾಕೂಟ, ವೈದ್ಯಕೀಯ ಪ್ರಕೋಷ್ಠದ ನೆರವಿನಿಂದ ವೈದ್ಯಕೀಯ ಶಿಬಿರ ಮತ್ತು ದೀನ ದಯಾಳ್ ಅವರ ಜೀವನ, ಸಾಧನೆ ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಉಡುಪಿ ನಗರಸಭೆ ಸಂಪೂರ್ಣ ವಿಫಲವಾಗಿದ್ದು, ಬಜೆ ಡ್ಯಾಂನಲ್ಲಿ ನೀರು ಸೋರಿಕೆ, ಸಕಾಲದಲ್ಲಿ ಮರಳು ಚೀಲ ಹಾಕದೆ ಅಸಮರ್ಪಕ ವಿತರಣೆ ಹಾಗೂ ಆಡಳಿತ ವೈಫಲ್ಯದಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಬಜೆಯಲ್ಲಿ ಡ್ರೆಜ್ಜಿಂಗ್ ನೆಪದಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸ ಲಾಗುತ್ತಿದೆ. ಕಳೆದ 8 ದಿನಗಳಿಂದ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ರೋಗಿ ಗಳು ನೀರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಶ್ರೀಶ ನಾಯಕ್, ಕುಯಿಲಾಡಿ ಸುರೇಶ್ ನಾಯಕ್, ಕಟಪಾಡಿ ಶಂಕರ ಪೂಜಾರಿ, ಶಿವಕುಮಾರ್ ಅಂಬಲ ಪಾಡಿ ಉಪಸ್ಥಿತರಿದ್ದರು.







