ಮಾಚಕನೂರ ದಲಿತರ ಮೇಲೆ ಮನಸೋ ಇಚ್ಛೆ ಹಲ್ಲೆ
‘ಹೇರ್ ಕಟಿಂಗ್’ ವಿಚಾರಕ್ಕೆ ಜಗಳ

ಬೆಂಗಳೂರು, ಮೇ 10: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ಜಯಂತಿ ಆಚರಿಸಿ ತಿಂಗಳು ಕಳೆಯುವ ಮೊದಲೆ ಕ್ಷುಲ್ಲಕ ಕಾರಣಕ್ಕೆ ದಲಿತರ ಮೇಲೆ ಮಾರಣಾಂತಿಕ ಹಲ್ಲೆ-ದೌರ್ಜನ್ಯ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಾಚಕನೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕ್ಷೌರದ ಅಂಗಡಿಗಳಲ್ಲಿ ದಲಿತರಿಗೆ ‘ಹೇರ್ ಕಟಿಂಗ್’ ಮಾಡುವ ವಿಚಾರಕ್ಕೆ ಮೇ 3ರಂದು ದಲಿತರ ಕಾಲನಿಗೆ, ಗ್ರಾಮದ ಮೇಲ್ಜಾತಿಯ ಗುಂಪು ದಿಢೀರ್ ದಾಳಿ ನಡೆಸಿ ಕಲ್ಲು-ದೊಣ್ಣೆ. ಮಾರಕಾಸ್ತ್ರಗಳಿಂದ ಮಕ್ಕಳು, ಮಹಿಳೆಯರ ಮತ್ತು ವೃದ್ಧರೆನ್ನದೆ ಮನಸೋ ಇಚ್ಛೆ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ.
ದಲಿತ ಮಹಿಳೆ ಲಲಿತಾ, ಯಲ್ಲಮ್ಮ ಎಂಬವರನ್ನು ಹಿಡಿದು ಎಳೆದಾಡಿದ್ದು, ಅವರ ಮೈಮೇಲಿದ್ದ ಬಟ್ಟೆಗಳನ್ನು ಹರಿದು ಅಪಮಾನ ಮಾಡಲಾಗಿದೆ. ವಿಠ್ಠಲ್ ಯಮುನಪ್ಪ, ಅರ್ಜನ ಗದ್ದಿಮನಿ, ಮಹಾಂತೇಶ್ ಯಮುನಪ್ಪ ಸೇರಿದಂತೆ ಹಲವು ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೆ, ಶಿಲ್ಪಕಲಾ ಕೇಂದ್ರ, ಮೊಬೈಲ್ ಅಂಗಡಿ ಸೇರಿದಂತೆ ದಲಿತ ಯುವಕರು ನಡೆಸುತ್ತಿದ್ದ ನಾಲ್ಕೈದು ಅಂಗಡಿಗಳು, ಮನೆಗಳಿಗೆ ಹಾನಿ ಮಾಡಲಾಗಿದೆ. ದಲಿತ ಸಂಘರ್ಷ ಸಮಿತಿ ಫಲಕದಲ್ಲಿರುವ ಡಾ.ಅಂಬೇಡ್ಕರ್, ಬಾಬು ಜಗಜೀವನ ರಾಂ ಅವರ ಭಾವಚಿತ್ರಗಳಿಗೆ ಹಾನಿ ಮಾಡಲಾಗಿದೆ ಎಂದು ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಪ್ರಕರಣ ಸಂಬಂಧ ಪೊಲೀಸರು ಮೇಲ್ಜಾತಿಯ 27ಮಂದಿ ಆರೋಪಿಗಳ ಪೈಕಿ ಕೆಲವರನ್ನು ಬಂಧಿಸಿದ್ದಾರೆ. ಆದರೆ, ಪ್ರಮುಖರನ್ನು ಇನ್ನೂ ಬಂಧಿಸಿಲ್ಲ. ಅಲ್ಲದೆ, ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಸೌಹಾರ್ದ ಸಭೆ ನಡೆಸಿದ್ದರೂ, ಗ್ರಾಮದಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ‘ಕಿರಾಣಿ ಅಂಗಡಿಗಳಲ್ಲಿ ದಿನಸಿ ನೀಡುತ್ತಿಲ್ಲ, ಹಿಟ್ಟಿನ ಗಿರಣಿಯಲ್ಲಿ ಧಾನ್ಯಗಳನ್ನು ಬೀಸಿಕೊಡುತ್ತಿಲ್ಲ’ ಎಂದು ದಲಿತರು ಆರೋಪಿಸಿದ್ದಾರೆ.
ದಲಿತರ ಮೇಲೆ ಹಲ್ಲೆ ನಡೆಸಿದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಹಾನಿಗೊಳಗಾದ ದಲಿತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಗ್ರಾಮದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
‘ನಮ್ಮ ಜೀವನಕ್ಕ ಆಧಾರ ಆಗಿದ್ದ ಅಂಗಡಿಗೊಳೆಲ್ಲ ಮೇಲ್ಜಾತಿಯವ್ರೆ ಹಾಳು ಮಾಡ್ಯಾರಾ..ಸ್ವಯಂ ಉದ್ಯೋಗ ಯೋಜನೆದೊಳಗ ನಮಗೆ ಸ್ವಂತ ಕೆಲಸಕ್ಕೆ ಸಾಲ ಕೊಡ್ತೀವಂತ ಹೇಳಿದ್ದ ಸರಕಾರವೂ ಸ್ಪಂದಿಸುತ್ತಿಲ್ಲ. ಹಿಂಗೆ ಆದ್ರೆ ನಾವು ಬದುಕೋದ್ ಎಂಗ್ರೀ ಸಾರ..ದಲಿತರ ಮೇಲಿನ ಕಿರುಕುಳ ತಪ್ಪಿಸೋಕ ಸರಕಾರಕ್ಕೆ ಆಗೋಲ್ಲ ಅಂದ್ರೆ ಹ್ಯಾಂಗೇ..’
-ರವಿ ರಾಮಪ್ಪ ದೇವರಮನಿ ದೂರುದಾರ, ಮಾಚನಕೂರ







