ಅನಕ್ಷರಸ್ಥರಿಗೂ ಅರ್ಹ ಕೌಶಲ್ಯ ತರಬೇತಿ: ಸಚಿವ ರೈ
ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ: ವೆಬ್ಸೈಟ್ನಲ್ಲಿ ನೋಂದಣಿ

ಮಂಗಳೂರು, ಮೇ 11: ಆಯವ್ಯಯದಲ್ಲಿ ಪ್ರಕಟಿಸಲಾಗಿರುವ ಮುಖ್ಯಮಂತ್ರಿಗಳ ಕರ್ನಾಟಕ ಕೌಶಲ್ಯ ಯೋಜನೆಗೆ ರಾಜ್ಯ ಮಟ್ಟದಲ್ಲಿ ಮೇ 15ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುತ್ತಿದ್ದು, ಮಂಗಳೂರಿನ ಪುರಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಪುರಭವನ ಆವರಣದಲ್ಲಿ ಯೋಜನೆಗೆ ಚಾಲನೆ ದೊರೆಯಲಿದ್ದು, ಅನಕ್ಷರಸ್ಥ ಉದ್ಯೋಗಾಕಾಂಕ್ಷಿಗಳು ಸೇರಿದಂತೆ 16ರಿಂದ 35 ವರ್ಷ ವಯಸ್ಸಿನ ಯುವಜನರು ವೆಬ್ ಪೋರ್ಟಲ್ kaushalkar.com ನಲ್ಲಿ ಹೆಸರು ನೋಂದಾಯಿಸಲು ವಿಶೇಷ ಕೌಂಟರ್ಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಈ ಯೋಜನೆಯಡಿ ನೋಂದಣಿಯಾಗುವ ಯುವಜನರ ಬೇಡಿಕೆಗೆ ಅನುಸಾರವಾಗಿ ಪ್ರಸ್ತುತ ಜಾರಿಯಲ್ಲಿರುವ ವಿವಿಧ ಯೋಜನೆಗಳ ಅಡಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಐದು ಲಕ್ಷ ಯುವಜನತೆಗೆ ವೃತ್ತಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಶೇ. 70ರಷ್ಟು ಮಂದಿಗೆ ಉದ್ಯೋಗ ಖಚಿತ: ನೋಂದಾಯಿಸಲ್ಪಟ್ಟ ಯುಜನರಿಗೆ ಬೇಡಿಕೆ ಆಧಾರದಲ್ಲಿ ಉಚಿತವಾಗಿ ತರಬೇತಿ ಒದಗಿಸಿ, ಉದ್ಯೋಗ ಒದಗಿಸಲಾಗುವುದು. ತರಬೇತಿ ಪಡೆಯುವ ಶೇ.70ರಷ್ಟು ಮಂದಿಗೆ ಖಚಿತವಾಗಿ ಉದ್ಯೋಗ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಫಲಾನುಭವಿಗಳಲ್ಲಿ ಶೇ. 20ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ. 7ರಷ್ಟು ಪರಿಶಿಷ್ಟ ಪಂಗಡ ಹಾಗೂ ಶೇ. 15ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಿಡಲಾಗುವುದು. ವಿದೇಶಗಳಲ್ಲಿ, ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡಲಿಚ್ಚಿಸುವವರು ಅಥವಾ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಬಿಟ್ಟು ಬಂದವರೂ ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು ವೃತ್ತಿ ಕೌಶಲ್ಯವನ್ನು ಪಡೆಯಬಹುದಾಗಿದೆ.
ವಿದೇಶಗಳಿಗೆ ಹೋಗಲು ಬಯಸಿದವರು ಈ ಯೋಜನೆಯಡಿ ನೈಪುಣ್ಯತೆ ಪಡೆದಲ್ಲಿ ಅವರಿಗೆ ಉತ್ತಮ ಉದ್ಯೋಗ ದೊರಕುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೌಶಲ್ಯ ಮಿಶನ್, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೌಶಲ್ಯ ಮಿಶನ್ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಕೌಶಲ್ಯ ಮಿಶನ್ಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಕೈಗಾರಿಕೆಗಳ ಕೇಂದ್ರ ಜಂಟಿ ನಿರ್ದೇಶಕ ಗೋಕುಲ್ದಾಸ್ ನಾಯಕ್ ಉಪಸ್ಥಿತರಿದ್ದರು.
ಮೇ 27ರವರೆಗೆ ವಿಶೇಷ ನೋಂದಣಿ ಅಭಿಯಾನ
ಯೋಜನೆಯ ವಿಶೇಷ ಅಭಿಯಾನದ ಅಂಗವಾಗಿ 15ರಿಂದ 27ರವರೆಗೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಕೌಶಲ್ಯ ಆಸಕ್ತರು ವೆಬ್ಸೈಟ್ನಲ್ಲಿ ನೋಂದಾಯಿಸಲು ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೇ, ಮಂಗಳೂರು ಕಾರ್ಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಗೆ ಹೆಸರು ನೋಂದಾಯಿಸಲು ವಿಶೇಷ ಕೌಂಟರ್ಗಳು ಮೇ 15ರಿಂದ 27ರವರೆಗೆ ಕಾರ್ಯಾಚರಿಸಲಿವೆ. ಇದು ನಿರಂತರ ಕಾರ್ಯಕ್ರಮವಾಗಿದ್ದು, ಈ ಅವಧಿಯ ಬಳಿಕವೂ ಕಂಪ್ಯೂಟರ್ ಅಥವಾ ಮೊಬೈಲ್ ನಿಂದ ವೆಬ್ಸೈಟ್ನಲ್ಲಿ ಹೆಸರು, ವಿವರ ನೋಂದಾಯಿಸಬಹುದು ಎಂದು ಸಚಿವ ರೈ ತಿಳಿಸಿದರು.
ಅಭ್ಯರ್ಥಿಗಳು ಯಾವುದೇ ಪ್ರದೇಶದಿಂದಲೂ ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಬಹುದು. ನಿರುದ್ಯೋಗ ಸಮಸ್ಯೆ ನಿವಾರಿಸಿ, ನೈಪುಣ್ಯತೆ ಹೆಚ್ಚಿಸಲು ರಾಜ್ಯ ಸರಕಾರ ಜಾರಿಗೊಳಿಸಿರುವ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.
3 ಹಂತಗಳಲ್ಲಿ ಯೋಜನೆ ಅನುಷ್ಠಾನ
ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಮೂರು ಹಂತಗಳಲ್ಲಿ ಕ್ರಮವಾಗಿ ಜಾರಿಗೊಳ್ಳಲಿದೆ. ಪ್ರಥಮ ಹಂತದಲ್ಲಿ ವೃತ್ತಿ ತರಬೇತಿ ಬಯಸುವ ಯುವಜನರ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಬಳಿಕ ನೋಂದಣಿ ಮಾಡಲ್ಪಟ್ಟ ಯುವಜನರ ಬೇಡಿಕೆಗಳ ಅನುಸಾರವಾಗಿ ಸಂಬಂಧಪಟ್ಟ ಇಲಾಖೆಗಳ ಮೂಲಕ ಅಭ್ಯರ್ಥಿಗಳಿಗೆ ಪೂರಕವಾಗುವ ರೀತಿಯಲ್ಲಿ ತರಬೇತಿಯನ್ನು ನೀಡಲಾಗುವುದು. ಬಳಿಕ ತರಬೇತಿ ಪಡೆದ ಉದ್ಯೋಗಾಕಾಂಕ್ಷಿಗಳಿಗೆ ಸಂಬಂಧಪಟ್ಟ ಸಂಸ್ಥೆ, ಕಂಪೆನಿಗಳಿಗಳಲ್ಲಿ ಉದ್ಯೋಗ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ವಿವರ ನೀಡಿದರು.







