ಲಂಚ ಪಡೆದ ಅಧಿಕಾರಿಗೆ 4 ವರ್ಷ ಶಿಕ್ಷೆ, 10 ಸಾವಿರ ದಂಡ

ಮಂಡ್ಯ, ಮೇ 11: ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರಿಗೆ ಸೆರೆಯಾಗಿದ್ದ ಓರ್ವ ಅಧಿಕಾರಿ ಹಾಗೂ ಡಿ ಗ್ರೂಪ್ ನೌಕರನಿಗೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ 4 ವರ್ಷ ಶಿಕ್ಷೆ ಹಾಗೂ ತಲಾ ಹತ್ತು ಸಾವಿರ ದಂಡ ವಿಧಿಸಿದೆ.
ಜಿಲ್ಲಾ ಸಮಾಜ ಕಲ್ಯಾಣಾ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿದ್ದ ಸಿ.ಕೆ.ವೇಣುಪ್ರಕಾಶ್ ಮತ್ತು ಡಿ ದರ್ಜೆ ನೌಕರ ಸೋಮಲಿಂಗ ಶೆಟ್ಟಿ ಎಂಬವರು ಶಿಕ್ಷೆಗೆ ಗುರಿಯಾಗಿದ್ದು, ದಂಡ ಪಾವತಿಸಲು ತಪ್ಪಿದರೆ 6 ತಿಂಗಳ ಹೆಚ್ಚುವರಿ ಶಿಕ್ಷೆಗೆ ಗುರಿಪಡಿಸುವಂತೆ ನ್ಯಾಯಾಧೀಶೆ ಎಚ್.ಜಿ.ವಿಜಯಕುಮಾರಿ ಆದೇಶ ನೀಡಿದ್ದಾರೆ.
ಮಂಡ್ಯ ತಾಲೂಕಿನ ಕಚ್ಚಿಗೆರೆ ಗ್ರಾಮದ ಕೆ.ಎಂ.ಶಿವರಾಜು ಸಮಾಜ ಕಲ್ಯಾಣ ಇಲಾಖೆಗೆ ತನ್ನ ಕಾರನ್ನು ಬಾಡಿಗೆ ನೀಡಿದ್ದರು. ಬಾಡಿಗೆ ಬಿಲ್ ಪಾವತಿಸಲು ವೇಣುಪ್ರಕಾಶ್ 3 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಅಂದಿನ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಪಿ.ಕೆ.ರಾಜು ಟ್ರಾಪ್ ಮಾಡಿದ್ದರು. ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಕೆ.ಎಂ.ಬಸವರಾಜು ವಾದ ಮಂಡಿಸಿದ್ದರು.
Next Story





