ಕೇಂದ್ರ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ: ದೇವೇಗೌಡ

ಕಡೂರು, ಮೇ 11: ದೇಶದ ವ್ಯವಸ್ಥೆಯೇ ಹಾಳಾಗಿದೆ. ಕೇಂದ್ರ ಸರಕಾರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿ ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೆಟ್ರಿಕ್ ಟನ್ ಸಾಮರ್ಥ್ಯದ ವೈಜ್ಞ್ಞಾನಿಕ ಉಗ್ರಾಣ ಕೇಂದ್ರದ ಉದ್ಘಾಟನೆ ಹಾಗೂ ಗೋಶಾಲೆ ವೀಕ್ಷಣೆ ನಂತರ ಸಾರ್ವಜನಿಕ ಸಭೆೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತೆಂಗು ಮತ್ತು ಅಡಿಕೆ ತೋಟಗಳನ್ನು ಪರಿಶೀಲಿಸಿದ್ದು, ತೋಟಗಳು ಸಂಪೂರ್ಣ ನಾಶವಾಗಿವೆ. ಈ ಕುರಿತು ಕೇಂದ್ರದ ಸಂಬಂಧಪಟ್ಟ ಸಚಿವರಿಗೆ ಪೋಟೊ ಸಮೇತ ತೆಗೆದುಕೊಂಡು ಹೋಗಿ ವಿವರವನ್ನು ನೀಡಲಾಗಿದೆ. ಆದರೆ ಇದುವರೆಗೂ ಯಾವುದೇ ಉತ್ತರವಿಲ್ಲ.
ಇಡೀ ದೇಶ ಹಳ್ಳಿಗಳ ಮೇಲೆ ನಿಂತಿದ್ದು, ಕೇಂದ್ರ ಸರಕಾರಕ್ಕೆ ಇದರ ನಿರ್ಲಕ್ಷ ಧೋರಣೆ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಅಂಬೇಡ್ಕರ್ ಆದರ್ಶಗಳನ್ನು ತಿರುಚುತ್ತಿದೆ. ಹಿಂದೆ ಗೋರಖ್ಸಿಂಗ್ ಅವರಿಗೆ ತೆಂಗಿನ ಮರಗಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮ್ತತು ನಂತರ ಹಾಳಾಗಿರುವ ತೆಂಗಿನ ಮರಗಳಿಗೆ ಸರಕಾರದಿಂದ ಹಣ ದೊರಕಿಸಿಕೊಡಲಾಗಿತ್ತು. ಈ ಕುರಿತು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದ್ದು, ಯಾವುದೇ ಉತ್ತರ ದೊರಕಿಲ್ಲ. ರೈತರು ಒಂದು ತೆಂಗಿನ ಮರವನ್ನು ಬೆಳೆಸಲು ಸುಮಾರು 10 ವರ್ಷಗಳು ಬೇಕಾಗಲಿದೆ. ಈಗ ಯಾವುದೇ ತೆಂಗಿನ ಮರಗಳು ಉಳಿದಿಲ್ಲ. ಇದರ ಬಗ್ಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ.
ತೆಂಗಿನ ತೋಟಗಳು ಸಂಪೂರ್ಣ ನಾಶವಾಗಿರುವ ಬಗ್ಗೆ ವರದಿ ತಯಾರಿಸಬೇಕಿದೆ ಎಂದ ಅವರು, ಈಗ ಹವಾಮಾನದ ವೈಪರೀತ್ಯದಿಂದ ಮಳೆ ಇಲ್ಲದಾಗಿದೆ. ಇದಕ್ಕೆ ಮನುಷ್ಯರೇ ಕಾರಣ ಎಂದು ದೂರಿದರು.
ಸರಕಾರ ರೈತರ ಆತ್ಮಹತ್ಯ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕಿದೆ. ಅಂತರ್ಜಲ ಬತ್ತಿ ಹೋಗಿದ್ದು, ಮೋಡ ಬಿತ್ತನೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲವೆಂದು ತಿಳಿಸಿದರು. ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಇಡೀ ಜಿಲ್ಲೆಯಲ್ಲೇ ವ್ಯವಸ್ಥಿತವಾದ ಗೋದಾಮು ನಿರ್ಮಾಣಗೊಂಡಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಗೋಶಾಲೆಗಳೂ ಸಹ ಸಮರ್ಪಕವಾಗಿ ನಡೆಯುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಬಹಳಷ್ಟು ಅನುಕೂಲಕರವಾಗಿದೆ. ಇಡೀ ಜಿಲ್ಲೆಯಲ್ಲೇ ಮಾದರಿ ಗೋಶಾಲೆ ಇದಾಗಿದ್ದು, ಸುಮಾರು 5,000ಕ್ಕೂ ಹೆಚ್ಚು ರಾಸುಗಳಿದ್ದು, ಮೇವಿಗೆೆ ಯಾವುದೇ ಕೊರತೆಯಾಗದ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶರವಣ, ತರೀಕೆರೆ ಉಪವಿಭಾಗಾಧಿಕಾರಿ ಸರೋಜಮ್ಮ, ತಹಶೀಲ್ದಾರ್ ಭಾಗ್ಯಾ, ಎಸ್.ಎಸ್.ಪಟ್ಟಣಶೆಟ್ಟಿ, ರಾಜ್ಯ ಉಗ್ರಾಣ ನಿಗಮ ಸರಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ತಾಪಂ ಉಪಾಧ್ಯಕ್ಷ ಪ್ರಸನ್ನಕುಮಾರ್, ಎ.ಪಿ.ಎಂ.ಸಿ. ನಿರ್ದೇಶಕ ಟಿ.ಕೆ. ಜಗದೀಶ್, ಕೆ.ಎಂ. ಮಹೇಶ್ವರಪ್ಪ, ಸೀಗೆಹಡ್ಲು ಹರೀಶ್, ಪಂಚನಹಳ್ಳಿ ಪಾಪಣ್ಣ ಮತ್ತಿತರು ಉಪಸ್ಥಿತರಿದ್ದರು. ಆರೆಸ್ಸೆಸ್ ವರಿಷ್ಠರನ್ನು ಭೇಟಿಯಾದ ಈಶ್ವರಪ್ಪ?







