ಪಾನ್-ಆಧಾರ್ ಜೋಡಣೆಗೆ ಚಾಲನೆ
ಹೊಸದಿಲ್ಲಿ, ಮೇ 11: ವ್ಯಕ್ತಿಯ ಆಧಾರ್ನ್ನು ಪಾನ್ನೊಂದಿಗೆ ಜೋಡಣೆಗೊಳಿಸಲು ನೂತನ ಇ-ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆಯು ಪ್ರಾರಂಭಿಸಿದೆ. ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸಲು ಪಾನ್ನೊಂದಿಗೆ ಆಧಾರ್ ಜೋಡಣೆಯನ್ನು ಈಗ ಕಡ್ಡಾಯಗೊಳಿಸಲಾಗಿದೆ.
ಈ ಜೋಡಣೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಇಲಾಖೆಯ ಇ-ಫೈಲಿಂಗ್ ಜಾಲತಾಣದ ಹೋಮ್ಪೇಜ್ನಲ್ಲಿ ಹೊಸ ಕೊಂಡಿಯೊಂದನ್ನು ನೀಡಲಾಗಿದೆ. ವ್ಯಕ್ತಿಯು ತನ್ನ ಪಾನ್ ಸಂಖ್ಯೆ,ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ನಲ್ಲಿ ನೀಡಲಾಗಿರುವ ಹೆಸರನ್ನು ಯಥಾವತ್ತಾಗಿ ಪಂಚ್ ಮಾಡುವುದನ್ನು ಈ ಕೊಂಡಿಯು ಅಗತ್ಯವಾಗಿಸುತ್ತದೆ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ ಪರಿಶೀಲನೆಯ ಬಳಿಕ ಈ ಲಿಂಕಿಂಗ್ನ್ನು ದೃಢಪಡಿಸಲಾಗುತ್ತದೆ. ಆಧಾರ್ ಹೆಸರಿನಲ್ಲಿ ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಒಂದು ಬಾರಿಯ ಪಾಸ್ವರ್ಡ್ ಅಗತ್ಯವಾಗುತ್ತದೆ ಎಂದು ಇಲಾಖೆಯು ತಿಳಿಸಿದೆ.
ಇಲಾಖೆಯು ಈ ಬಗ್ಗೆ ವಿವರವಾದ ಸಲಹೆಗಳನ್ನು ತೆರಿಗೆದಾತರಿಗೆ ರವಾನಿಸಿದೆ.
ತ್ರಿವಳಿ ತಲಾಖ್ ಇಸ್ಲಾಮ್ನ ಮೂಲಭೂತ ಪ್ರಕ್ರಿಯೆಯೇ ಎನ್ನುವುದರ ಪರಿಶೀಲನೆ: ಸುಪ್ರೀಂ
ಹೊಸದಿಲ್ಲಿ, ಮೇ 11: ಇಸ್ಲಾಮ್ನಲ್ಲಿ ಪ್ರಚಲಿತವಿರುವ ತ್ರಿವಳಿ ತಲಾಖ್ ವಿಚ್ಛೇದನ ಪದ್ಧತಿಯು ಧರ್ಮದ ಮೂಲಭೂತ ಪ್ರಕ್ರಿಯೆಯೇ ಮತ್ತು ಅದು ಜಾರಿಗೊಳಿಸ ಬಹುದಾದ ಮೂಲಭೂತ ಹಕ್ಕಿನ ಭಾಗವೇ ಎನ್ನುವುದನ್ನು ತಾನು ಪರಿಶೀಲಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿದೆ.
ತ್ರಿವಳಿ ತಲಾಖ್ಗೆ ಸಂಬಂಧಿಸಿದಂತೆ ಮುಸ್ಲಿಂ ವೈಯಕ್ತಿಕ ಕಾನೂನಿಗೆ ತಿದ್ದುಪಡಿಗಳನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪಂಚ ನ್ಯಾಯಾಧೀಶರ ಪೀಠವು ಇಂದು ಆರಂಭಿಸಿತು.
ತ್ರಿವಳಿ ತಲಾಖ್ ಜೊತೆಗೆ ಬಹುಪತ್ನಿತ್ವ ಮತ್ತು ‘ನಿಖಾ ಹಲಾಲಾ ’ಕ್ಕೆ ಸಂಬಂಧಿಸಿದ ಅರ್ಜಿಗಳನ್ನೂ ನ್ಯಾಯಾಲಯವು ಆಲಿಸಲಿದೆ. ಆದರೆ ಮುಸ್ಲಿಮರಲ್ಲಿಯ ಬಹುಪತ್ನಿತ್ವ ಪದ್ಧತಿ ವಿವಾದವು ತನ್ನ ವಿಚಾರಣೆಯ ಭಾಗವಾಗದಿರಬಹುದು ಎಂದು ಅದು ತಿಳಿಸಿದೆ.
...................







