ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯ ನಿಷೇಧ: ಡಿಸಿ

ಉಡುಪಿ, ಮೇ 12: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ನಿಂದ ತಯಾರಿಸಿದ ದಿನಬಳಕೆಯ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಎಲ್ಲಾ ಹೊಟೇಲ್, ಬಾರ್-ರೆಸ್ಟೋರೆಂಟ್, ಮಾಲ್, ಪ್ರೊವಿಜನ್ ಸ್ಟೋರ್ಸ್ ಮತ್ತು ಬುಕ್ ಸೆಂಟರ್ಗಳಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲದಲ್ಲಿ ವಸ್ತುಗಳನ್ನು ನೀಡದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ನಡೆದ ಸಬೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಎಲ್ಲಾ ವ್ಯಾಪಾರಸ್ಥರು ಪ್ಲಾಸ್ಟಿಕ್ಗೆ ಪರ್ಯಾಯವಾದ ವಸ್ತುಗಳನ್ನು ಬಳಕೆ ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ನಿಂದ ಮಾಡಿದ ಕವರ್, ನಾನ್ ಓವನ್ ಬ್ಯಾಗ್ಗಳು ಅಥವಾ ಬ್ಯಾಗ್ಗಳಲ್ಲಿ ವಸ್ತುಗಳನ್ನು ನೀಡದಂತೆ ಸೂಚಿಸಿದರು. ಬಟ್ಟೆ ಮತ್ತು ಪೇಪರ್ನಿಂದ ಮಾಡಿದ ಬ್ಯಾಗ್ಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವಂತೆ ಹಾಗೂ ಈ ರೀತಿಯ ಬ್ಯಾಗ್ಗಳನ್ನು ಜಿಲ್ಲೆಯ ಹಲವು ಸ್ವ ಸ್ವಹಾಯ ಸಂಘಗಳು ತಯಾರಿಸುತಿದ್ದು, ಅಲ್ಲಿಂದ ಖರೀದಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಸಭೆಯಲ್ಲಿ ಹಾಜರಿದ್ದ ವ್ಯಾಪಾರಿಗಳು ಸಹಮತ ವ್ಯಕ್ತಪಡಿಸಿ, ಸ್ಥಳೀಯವಾಗಿ ಯಾವುದೇ ಪ್ಲಾಸ್ಟಿಕ್ ಬ್ಯಾಗ್ ತಯಾರಾಗುತ್ತಿಲ್ಲ. ಹೊರ ರಾಜ್ಯಗಳಿಂದ ಜಿಲ್ಲೆಗೆ ಪ್ಲಾಸ್ಟಿಕ್ ಕವರ್ಗಳು ಬರುತ್ತಿದ್ದು, ಇದನ್ನು ತಡೆಯುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದರು. ಈ ಕುರಿತಂತೆ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಚೆಕ್ ಪೋಸ್ಟ್ ಪ್ರಾರಂಭಿಸಿ, ಪ್ಲಾಸ್ಟಿಕ್ನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನಗರಸಭೆ ವತಿಯಿಂದ ಎಲ್ಲಾ ವ್ಯಾಪಾರಸ್ಥರೊಂದಿಗೆ ಬಟ್ಟೆ ಮತ್ತು ಪೇಪರ್ ಬ್ಯಾಗ್ ತಯಾರಿಸುವ ಸ್ವಸಹಾಯ ಸಂಘಗಳ ಸದಸ್ಯರೊಂದಿಗೆ ಮುಖಾಮುಖಿ ಹಾಗೂ ಬಟ್ಟೆ ಮತ್ತು ಪೇಪರ್ನಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಏರ್ಪಡಿಸುವಂತೆ ಪೌರಾಯುಕ್ತ ಮಂಜುನಾಥಯ್ಯಗೆ ಡಿಸಿ ಸಲಹೆ ನೀಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿಯ ಕುರಿತು ವಿವರಿಸಿದ ಜಿಲ್ಲಾಧಿಕಾರಿ ಗಳು, ಎಲ್ಲಾ ವರ್ತಕರು ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಪರಿಸರ ಸ್ನೇಹಿ ಬ್ಯಾಗ್ ಮತ್ತು ವಸ್ತುಗಳ ಬಳಕೆಗೆ ಮನವೊಲಿಸುವ ಮೂಲಕ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಹಾಗೂ ಸ್ವಚ್ಛ ಮತ್ತು ಸುಂದರ ಜಿಲ್ಲೆಯನ್ನಾಗಿಸಲು ಸಹಕರಿಸುವಂತೆ ತಿಳಿಸಿದರು.
ಸಭೆಯಲ್ಲಿ ನಗರಸಭೆಯ ಪರಿಸರ ಎಂಜಿನಿಯರ್ ರಾಘವೇಂದ್ರ, ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್, ನಗರದ ಹಲವಾರು ಮಂದಿ ವರ್ತಕರು ಉಪಸ್ಥಿತರಿದ್ದರು.







