ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ‘ಜನಮನ’ದಲ್ಲಿ ಪ್ರಶಂಸೆ
ಮಾಸಾಶನ ಹೆಚ್ಚಳ, ಅಕ್ಕಿ ಜೊತೆ ಸಕ್ಕರೆ ವಿತರಣೆಗೆ ಫಲಾನುಭವಿಗಳ ಮನವಿ

ಉಡುಪಿ, ಮೇ 13: ರಾಜ್ಯ ಸರಕಾರ ಬಡವರಿಗೆ ಮಾತ್ರವಲ್ಲದೆ, ವಿದ್ಯಾರ್ಥಿ ಗಳು, ಮಹಿಳೆ ಸಹಿತ ಎಲ್ಲ ವರ್ಗದವರಿಗೆ ಅನುಕೂಲವಾಗುವ ಯೋಜನೆ ಗಳನ್ನು ಜಾರಿಗೆ ತಂದಿದೆ. ರಾಜ್ಯ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಆ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದೆ. ಆದುದರಿಂದ ಅಧಿಕಾರಿಗಳು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡ ಬೇಕು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ರಾಜ್ಯ ಸರಕಾರ ನಾಲ್ಕು ವರ್ಷಗಳ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಶನಿವಾರ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ಜನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇನ್ನು ಐದು ದಿನ ಹಾಲು: ಕ್ಷೀರಭಾಗ್ಯದ ಯೋಜನೆ ಕುರಿತು ತನ್ನ ಅನಿಸಿಕೆ ಹೇಳಲು ವೇದಿಕೆ ಹತ್ತಿದ ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಶ್ರೀನಿತ್ಯ ತಾನು ಎಸ್ಸೆಸೆಲ್ಸಿ ಉತ್ತೀರ್ಣರಾದ ಹಿನ್ನೆಲೆಯಲ್ಲಿ ತಂದಿದ್ದ ಸಿಹಿಯನ್ನು ಸಚಿವರಿಗೆ ನೀಡಿದರು. ಇದೇ ವೇಳೆ ಸಚಿವರು ಆಕೆಗೆ ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶ್ರೀನಿತ್ಯ, ನಮ್ಮ ಶಾಲೆಯಲ್ಲಿ ವಾರಕ್ಕೆ ಮೂರು ದಿನ ಎರಡು ಹೊತ್ತು ಹಾಲು ನೀಡುವ ಬದಲು ಪ್ರತಿದಿನ ಒಂದು ಹೊತ್ತು ಹಾಲು ನೀಡಲಾಗುತ್ತಿದೆ. ಇದರಿಂದ ನಾವು ಆರೋಗ್ಯವಂತರಾಗಲು ಸಾಧ್ಯವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸದ್ಯದಲ್ಲೇ ವಾರದ ಐದು ದಿನವೂ ಎರಡು ಹೊತ್ತು ಹಾಲು ಸಿಗುವ ಯೋಜನೆ ಜಾರಿಯಾಗಲಿದೆ ಎಂದು ತಿಳಿಸಿದರು.
ಬೈಲೂರು ಸರಕಾರಿ ಪ್ರೌಢಶಾಲೆಯ ಕೀರ್ತನಾ ಶೂ ಭಾಗ್ಯದ ಬಗ್ಗೆ ಮಾತನಾಡಿ, ಸರಕಾರ ಬಡ ವಿದ್ಯಾರ್ಥಿಗಳಿಗೆ ಶೂ ನೀಡುವ ಮೂಲಕ ನಾವು ಕೂಡ ಖಾಸಗಿಯವರಿಗೆ ಕಮ್ಮಿ ಇಲ್ಲ ಎಂಬ ಭಾವನೆ ಬರುತ್ತಿದೆ ಎಂದರು. ಕೀರ್ತನ್ ಪ್ರವಾಸದ ಬಗ್ಗೆ ಮಾತನಾಡಿ, ಬಡವರಾದ ನಮಗೆ ಪ್ರವಾಸ ಹೋಗು ವುದು ಕನಸಿನ ಮಾತು. ಅದನ್ನು ಸರಕಾರ ನನಸು ಮಾಡಿದೆ. ಈ ಬಾರಿ ಹಲವು ಜಿಲ್ಲೆಗಳಿಗೆ ಪ್ರವಾಸ ಹೋಗಿ ಬಂದಿದ್ದೇನೆ ಎಂದು ಹೇಳಿದರು.
ವಿದ್ಯಾಸಿರಿ ಕುರಿತು ಮಣಿಪಾಲ ಎಂಐಟಿ ವಿದ್ಯಾರ್ಥಿ ಸುದೀಪ್ ಮಾತನಾಡಿದರು.
ಅಕ್ಕಿ ಜೊತೆ ಸಕ್ಕರೆ ನೀಡಿ: ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿದ ಫಲಾನುಭವಿಗಳಾದ ಆನಂದ ಮಠದ ಉಡುಪಿ, ಭಾಸ್ಕರ ಪೂಜಾರಿ ಕುಂದಾಪುರ, ದಮಯಂತಿ ಕಾರ್ಕಳ, ಇದು ಬಡವರಿಗೆ ಪಾಲಿಗೆ ವರದಾನ ಯೋಜನೆ. ಇದೇ ರೀತಿ ಪಡಿತರ ಮೂಲಕ ಸಕ್ಕರೆ, ಗೋಧಿ, ಸೀಮೆಎಣ್ಣೆಯನ್ನು ಕೂಡ ಸರಕಾರ ನೀಡುವಂತಾಗಬೇಕು. ಬಡವರು ಈ ಹಣವನ್ನು ಉಳಿತಾಯ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಮನಸ್ವಿನಿ ಯೋಜನೆ ಕುರಿತು ಸೀತಾ, ರತ್ನಾವತಿ ಮಾತನಾಡಿ, ಈ ಯೋಜನೆಯಲ್ಲಿ ನೀಡುವ ಮಾಸಿಕ 500 ರೂ. ಸಾಕಾಗುವುದಿಲ್ಲ. ಇದನ್ನು ಸರಕಾರ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಪಿಂಚಣಿ ಯೋಜನೆಗಳಿಗೆ ರಾಜ್ಯ ಸರಕಾರ ವರ್ಷಕ್ಕೆ 10 ಸಾವಿರ ಕೋಟಿ ವಿನಿಯೋಗಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡುವುದಾಗಿ ಸಚಿವರು ಭರವಸೆ ನೀಡಿದರು.
ಕ್ಷೀರಧಾರೆ ಕುರಿತು ವಿಜಯಲಕ್ಷ್ಮಿ, ಕೋಕಿಂ ರಮಾನಂದ್, ಮೀನುಗಾರಿಕೆ ಬಗ್ಗೆ ಶೇಖರ್ ಕೋಟ್ಯಾನ್, ಜಯಕರ್, ಕೃಷಿ ಭಾಗ್ಯದ ಬಗ್ಗೆ ಸ್ವಾತಿ, ಅನಂತ ಭಟ್ ಇರ್ವತ್ತೂರು, ಶೇಖರ್ ಪೂಜಾರಿ ಕುಂದಾಪುರ, ಸಹಕಾರಿ ಕುರಿತು ರುಕ್ಸಾನ, ನಾರಾಯಣದಾಸ್ ಉಡುಪ, ಸರೋಜ, ತೋಟಗಾರಿಕೆ ಬಗ್ಗೆ ರಾಮಚಂದ್ರ ಪೈ ಶಿರ್ವ, ಚಂದ್ರಶೇಖರ್ ಉಡುಪ, ವಸತಿ ಯೋಜನೆ ಕುರಿತು ನೇತ್ರಾವತಿ, ಗೀತಾ ಬಸ್ರೂರು ಮಾತನಾಡಿದರು.
ತಂದೆ ಸಾಲ ತೀರಿಸಿದರು: ಶಾದಿಭಾಗ್ಯ ಯೋಜನೆ ಬಗ್ಗೆ ಮುಮ್ತಾಝ್ ಬೇಗಂ ಮಾತನಾಡಿ, ನಾವು ನಾಲ್ಕು ಮಂದಿ ಹೆಣ್ಣು ಮಕ್ಕಳು. ಈ ಯೋಜನೆ ಯಿಂದ ನಮ್ಮ ತಂದೆ ಮಕ್ಕಳ ಮದುವೆಗೆ ಮಾಡಿರುವ ಸಾಲಗಳನ್ನು ತೀರಿಸಲು ಸಾಧ್ಯವಾಯಿತು ಎಂದರು.
ದೇವರಾಜ್ ಅರಸು ಹಿಂದುಳಿದ ವರ್ಗಗಳ ಆಯೋಗದ ಯೋಜನೆ ಬಗ್ಗೆ ಬಾಬುರಾಯ್ ಆಚಾರ್ಯ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಗಂಗಾ ಕಲ್ಯಾಣದ ಕುರಿತು ಚಂದ್ರರಾಜ್ ಜೈನ್, ವಾಲ್ಮೀಕಿ ಅಭಿವೃದ್ಧಿ ಆಯೋಗದ ಯೋಜನೆ ಬಗ್ಗೆ ಸುರೇಶ್ ನಾಯ್ಕೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳ ಕುರಿತು ರಾಜು, ಪ್ರವಾಸೋದ್ಯಮ ಬಗ್ಗೆ ಸುರೇಶ್ ಪಾಣಾರ, ಪಶುಭಾಗ್ಯದ ಕುರಿತು ಶ್ರೀನಿವಾಸ ಶೆಟ್ಟಿಗಾರ್, ವೇದಾವತಿ, ಸರಸ್ವತಿ ಕಲ್ಮಾಡಿ ತಮ್ಮ ಅನಿಸಿಕೆ ಅಭಿಪ್ರಾಯ ಹೇಳಿದರು.
ವೇದಿಕೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಹಶೀಲ್ದಾರ್ ಮಹೇಶ್ಚಂದ್ರ ಉಪಸ್ಥಿತರಿದ್ದರು.
ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಸ್ವಾಗತಿಸಿದರು. ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ವಂದಿಸಿದರು. ಉಪನ್ಯಾಸಕ ಡಾ.ದುಗ್ಗಪ್ಪ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾ ಹಾಸ್ಟೆಲ್ ಪಿಯುಸಿವರೆಗೆ ವಿಸ್ತರಣೆ
ಕ್ರೀಡೆ ಬಗ್ಗೆ ಉಡುಪಿ ಕ್ರೀಡಾ ಹಾಸ್ಟೆಲ್ನಲ್ಲಿರುವ ಎಸೆಸೆಲ್ಸಿ ವಿದ್ಯಾರ್ಥಿನಿ ಪ್ರಜ್ಞಾ ಕೆ. ಮಾತನಾಡಿ, ಈಗ ಕ್ರೀಡಾ ಹಾಸ್ಟೆಲ್ನಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುತ್ತದೆ. ಸದ್ಯಕ್ಕೆ ಹಾಸ್ಟೆಲ್ನಲ್ಲಿ ಎಸೆಸೆಲ್ಸಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಉಳಿದುಕೊಳ್ಳಲು ಅವಕಾಶವಿದ್ದು ಅದನ್ನು ಪಿಯುಸಿವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕಿಯಿಸಿದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಹಾಸ್ಟೆಲ್ಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಳಿಗೂ ಹಾಸ್ಟೆಲ್ನಲ್ಲಿ ಅವಕಾಶ ಕಲ್ಪಿಸುವಂತೆ ಈಗಾಗಲೇ ಆದೇಶ ಹೊರಡಿಸ ಲಾಗಿದೆ ಎಂದರು.
ಸಚಿವರೊಂದಿಗೆ ಫಲಾನುಭವಿಗೆ ಸೆಲ್ಫಿ ಭಾಗ್ಯ!
ಪಶುಭಾಗ್ಯದ ತನ್ನ ಅನಿಸಿಕೆ ಹೇಳಲು ಆಗಮಿಸಿದ ಫಲಾನುಭವಿ ವೇದಾವತಿ, ಈ ಯೋಜನೆಯಿಂದ ಹೈನುಗಾರಿಕೆಗೆ ತುಂಬಾ ಸಹಕಾರಿಯಾಗಿದೆ. ನನಗೆ ಈಗ ಎರಡು ರೀತಿಯ ಭಾಗ್ಯ ಸಿಕ್ಕಿದೆ. ಒಂದು ಪಶುಭಾಗ್ಯ ಇನ್ನೊಂದು ಸಚಿವರನ್ನು ನೋಡುವ ಭಾಗ್ಯ. ಹಲವು ವರ್ಷಗಳಿಂದ ಸಚಿವರನ್ನು ನೋಡಲು ಆಸೆ ಪಡು ತ್ತಿದ್ದೆ. ಆ ಬಗ್ಗೆ ಅವರಿಗೆ ಪತ್ರ ಕೂಡ ಬರೆದಿದ್ದೆ. ಇಂದು ಆ ಅವಕಾಶ ಸಿಕ್ಕಿದೆ. ಅದಕ್ಕಾಗಿ ತುಂಬಾ ಥ್ಯಾಂಕ್ಸ್ ಎಂದರು.
ಬಳಿಕ ಆಕೆ ನೇರವಾಗಿ ಸಚಿವರ ಬಳಿ ಹೋಗಿ ಶೇಕ್ಹ್ಯಾಂಡ್ ಮಾಡಿ, ತನ್ನ ಮೊಬೈಲ್ನಿಂದ ಸೆಲ್ಫಿ ತೆಗೆಯುವುದಾಗಿ ಕೇಳಿಕೊಂಡರು. ಕೂಡಲೇ ಸಚಿವ ಪ್ರಮೋದ್ ಕುರ್ಚಿಯಿಂದ ಎದ್ದು ನಿಂತು ಆಕೆಯೊಂದಿಗೆ ಸೆಲ್ಫಿ ತೆಗೆದರು. ಆಗ ಇಡೀ ಸಭೆಯಲ್ಲಿ ಕರತಾಡನ ಕೇಳಿಬಂತು.







