ಬಂಧನ ಆದೇಶದ ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ
ನ್ಯಾ.ಕರ್ಣನ್ಗೆ ಮತ್ತೊಂದು ಹಿನ್ನಡೆ
ಹೊಸದಿಲ್ಲಿ, ಮೇ 15: ನ್ಯಾಯಾಲಯ ನಿಂದನೆ ಆರೋಪ ಎದುರಿಸುತ್ತಿರುವ ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್.ಕರ್ಣನ್ ವಿರುದ್ಧ ದಾಖಲಾಗಿರುವ ಬಂಧನ ಆದೇಶದ ಕುರಿತು ತ್ವರಿತ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ನ್ಯಾಯಾಲಯ ನಿಂದನೆ ಆರೋಪದಲ್ಲಿ ನ್ಯಾ.ಕರ್ಣನ್ರನ್ನು ಬಂಧಿಸುವಂತೆ ಮೇ 9ರಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಕರ್ಣನ್ಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಮರುದಿನದಿಂದ ಕರ್ಣನ್ ನಾಪತ್ತೆಯಾಗಿದ್ದಾರೆ. ಅವರಿನ್ನೂ ಚೆನ್ನೈಯಲ್ಲೇ ಇದ್ದಾರೆ ಎಂದು ಅವರ ಪರ ವಕೀಲ ಮ್ಯಾಥ್ಯೂಸ್ ನೆಡುಂಪುರಂ ಸುಪ್ರೀಂಕೋರ್ಟ್ಗೆ ತಿಳಿಸಿದ್ದರೂ ಪೊಲೀಸರಿಗೆ ಅವರನ್ನು ಪತ್ತೆಹಚ್ಚಿ ಬಂಧಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ, ತನಗೆ ವಿಧಿಸಿರುವ ಶಿಕ್ಷೆಯನ್ನು ಮರು ಪರಿಶೀಲಿಸುವಂತೆ ಕೋರಿ ಮೇ 12ರಂದು ವಕೀಲರ ಮೂಲಕ ಕರ್ಣನ್ ಸುಪ್ರೀಂಕೋರ್ಟ್ಗೆ ಕೋರಿಕೆ ಸಲ್ಲಿಸಿದ್ದರು.ನ್ಯಾ.ಕರ್ಣನ್ ವಿರುದ್ಧ ಯಾವುದೇ ಆರೋಪಪಟ್ಟಿ ದಾಖಲಾಗಿಲ್ಲ. ಆದ್ದರಿಂದ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್ಗೆ ಕೋರಿಕೆ ಸಲ್ಲಿಸಿರುವುದಾಗಿ ನೆಡುಂಪುರ ತಿಳಿಸಿದ್ದಾರೆ. ಈ ಅರ್ಜಿಯ ತ್ವರಿತ ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.





