ಪಿಂಚಣಿಗೆ ಆಗ್ರಹಿಸಿ ಎಐಟಿಯುಸಿಯಿಂದ ಭವಿಷ್ಯ ನಿಧಿ ಚಲೋ

ಮಂಗಳೂರು, ಮೇ 16: ಇತ್ತೀಚಿನ ದಿನಗಳಲ್ಲಿ ಭವಿಷ್ಯ ನಿಧಿ ಸಂಘಟನೆಯು ಕಾರ್ಮಿಕರ ಭವಿಷ್ಯ ನಿಧಿ, ಪಿಂಚಣಿ ಹಾಗೂ ಇನ್ನಿತರ ಸೌಲಭ್ಯ ಗಳನ್ನು ಪಡೆಯಲು ಅನಗತ್ಯ ನಿಯಮಗಳನ್ನು ಹೇರಿ ಸತಾಯಿಸುತ್ತಿರುವುದಾಗಿ ಆರೋಪಿಸಿ ಎಐಟಿಯುಸಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಭವಿಷ್ಯ ನಿಧಿ ಚಲೋ ಚಳವಳಿ ಇಂದು ನಡೆಯಿತು.
ಹೈಲ್ಯಾಂಡ್ಸ್ ನಲ್ಲಿರುವ ಪ್ರಾದೇಶಿಕ ಭವಿಷ್ಯನಿಧಿ ಸಂಘಟನೆಯ ಕಛೇರಿ ಎದುರು ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದೆ ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ ಕಾರ್ಯದರ್ಶಿ ವಿ.ಎಸ್. ಬೇರಿಂಜ ಒಂದೆಡೆ ಕಾರ್ಮಿಕರು ಬದುಕಿಗಾಗಿ ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದು ಭವಿಷ್ಯನಿಧಿ ಹಣ ಪಡೆಯಲು ಕೂಡಾ ಕಾರ್ಮಿಕರೇ ನೇರವಾಗಿ ಭವಿಷ್ಯನಿಧಿ ಕಚೇರಿಗೆ ಬಂದು ಕಣ್ಣಿನ ಹಾಗೂ ಹೆಬ್ಬೆಟ್ಟಿನ ಬೆರಳಚ್ಚು ನೀಡಬೇಕೆಂದು ನಿಯಮಗಳನ್ನು ಮಾಡಿರುವುದು ಸರಿಯಲ್ಲ ಎಂದರು.
ಕಾರ್ಮಿಕರು ದುಡಿದ ಫಲವಾಗಿ ಬಂದಿರುವ ಕಾನೂನು ಸೌಲಭ್ಯಗಳನ್ನು ಪಡೆಯಲು ಇಲ್ಲ ಸಲ್ಲದ ಷರತ್ತುಗಳನ್ನು ವಿಧಿಸುವುದು ಖಂಡನೀಯ ಎಂದು ಹೇಳಿದ ಅವರು, ಪ್ರಸಕ್ತ ಪರಿಸ್ಥಿತಿಯಲ್ಲಿ ಕಾರ್ಮಿಕರ ಬದುಕೇ ದುಸ್ಥರಗೊಂಡಿದ್ದು ಭವಿಷ್ಯನಿಧಿ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಇಲ್ಲವಾಗಿದೆ. ತಾವು ಸೇವೆ ಬಿಟ್ಟ ನಂತರವಾದರೂ ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ದಿನವೊಂದಕ್ಕೆ ಸರಾಸರಿ ರೂ. 200 ರ ಆಧಾರದಲ್ಲಿ ಮಾಸಿಕ ಕನಿಷ್ಠ ರೂ.6,000 ಪಿಂಚಣಿ ಜ್ಯಾರಿಯಾದರೆ ಕಾರ್ಮಿಕರು ಸ್ವಲ್ಪ ಮಟ್ಟಿಗಾದರೂ ಗೌರವಯುತ ಜೀವನ ಸಾಗಿಸಲು ಅನುಕೂಲವಾಗಬಹುದು ಎಂದು ಆಗ್ರಹಿಸಿದರು.
ನಂತರ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ರಾವ್ ಮಾತನಾಡಿ, ಭವಿಷ್ಯನಿಧಿ ಸಂಘಟನೆಯ ಕೇಂದ್ರ ಕಚೇರಿಯ ನಿರ್ದೇಶನದಂತೆ ನಿಯಮಗಳಲ್ಲಿ ದಿನಕ್ಕೊಂದು ರೀತಿಯ ಬದಲಾವಣೆಗಳು ಆಗುತ್ತಿದ್ದು ಕಾರ್ಮಿಕರ ನೈಜ ಪರಿಸ್ಥಿತಿ ಇಲಾಖೆಯ ಗಮನಕ್ಕೆ ಬಂದಿರದಿರುವುದು ಖೇದಕರ. ಎಲ್ಲವನ್ನೂ ಡಿಜಿಟಲೀಕರಣ ಮಾಡಲು ಬರುವುದಿಲ್ಲ. ಕಾರ್ಮಿಕರಿಗೆ ಸವಲತ್ತು ಪಡೆಯಲು ನಿಯಮಗಳನ್ನು ಸರಳೀಕರಿಸುವ ಬದಲು ಅನಗತ್ಯ ನಿಯಮಗಳನ್ನು ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಸಹಾಯಕ ಭವಿಷ್ಯನಿಧಿ ಆಯುಕ್ತ ರವಿ ಮನವಿ ಸ್ವೀಕರಿಸಿದರು.
ಕಂಕನಾಡಿ ಬಸ್ ನಿಲ್ದಾಣದಿಂದ ಕಾರ್ಮಿಕರ ಮೆರಣಿಗೆ ನಡೆಯಿತು. ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ವಿ.ಭಟ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಜಿಲ್ಲಾ ಮುಖಂಡರುಗಳಾದ ಕರುಣಾಕರ್, ತಿಮ್ಮಪ್ಪ ಕೆ, ಕೆ.ಈಶ್ವರ್, ಸುಲೋಚನಾ, ಚಿತ್ರಾಕ್ಷಿ, ಸರಸ್ವತಿ ಕಡೇಶಿವಾಲಯ, ಪ್ರೇಮ್ನಾಥ್ ಕೆ. ಬಾಬು ಭಂಡಾರಿ, ದಯಾವತಿ, ಲಲಿತ ಕಾಗೆಕಾನ ನೇತೃತ್ವ ವಹಿಸಿದ್ದರು.
ಎಐಟಿಯುಸಿ ಜಿಲ್ಲಾ ನಾಯಕರಾದ ಸುರೇಶ್ ಕುಮಾರ್ ಸ್ವಾಗತಿಸಿ, ಬಿ. ಶೇಖರ್ ವಂದಿಸಿದರು.







