7.5 ಕೋ. ಹಣದೊಂದಿಗೆ ಪರಾರಿಯಾಗಿದ್ದ ಮೂವರ ಬಂಧನ: ಕಮಿಷನರ್

ಮಂಗಳೂರು, ಮೇ 16: ನಗರದ ಯೆಯ್ಯಾಡಿಯ ಆ್ಯಕ್ಸಿಸ್ ಬ್ಯಾಂಕ್ನಿಂದ ಬೆಂಗಳೂರಿನ ಕೋರಮಂಗಲ ಆ್ಯಕ್ಸಿಸ್ ಬ್ಯಾಂಕ್ಗೆ ಹಣ ರವಾನೆ ಮಾಡದೆ ವಂಚಿಸಿದ ಎಸ್ಐಎಸ್ ಪ್ರೊಸೆಗ್ಯುರ್ ಹೋಲ್ಡಿಂಗ್ ಕಂಪೆನಿಯ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.
ಮಂಗಳವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಲೆರೋ ವಾಹನ ಚಾಲಕ ಚಿತ್ರದುರ್ಗದ ಕರಿಬಸಪ್ಪ (24), ಗನ್ಮ್ಯಾನ್ ಕೊಡಗಿನ ಪೂವಪ್ಪ (38), ಹಣ ವಂಚಿಸಲು ಮಾರ್ಗದರ್ಶನ ನೀಡಿದ ಕೊಡಗಿನ ಕಾರಿಯಪ್ಪ ಯಾನೆ ಕಾಶಿ (46) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 6.30 ಕೋ.ರೂ. ವಶಪಡಿಸಲಾಗಿದೆ ಎಂದರು.
ಮೇ 11ರಂದು ಬೆಳಗ್ಗೆ 8:30ಕ್ಕೆ 7.5 ಕೋ.ರೂ.ವನ್ನು ಎಸ್ಐಎಸ್ ಪ್ರೊಸೆಗ್ಯುರ್ ಹೋಲ್ಡಿಂಗ್ ಕಂಪೆನಿಗೆ ಸೇರಿದ ಕೆ.ಎ.06 ಸಿ. 8389 ಸಂಖ್ಯೆಯ ಬೊಲೆರೋ ವಾಹನದಲ್ಲಿ ಆರೋಪಿಗಳು ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಯೆಯ್ಯಾಡಿ ಶಾಖೆಯ ಮುಖ್ಯಸ್ಥ ರಂಜಿತ್ ಅವರು ಕೋರಮಂಗಲ ಶಾಖೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದರೆ ಸಕಾಲದಲ್ಲಿ ಹಣ ತಲುಪದ ಕಾರಣ ಸಂಶಯಗೊಂಡ ಬ್ಯಾಂಕ್ ಅಧಿಕಾರಿಗಳು ಕಂಪೆನಿಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕಂಪೆನಿಯ ಸಚಿನ್ ಎಂಬವರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು.
ಆರೋಪಿಗಳು ಬ್ಯಾಂಕ್ಗೆ ಹಣ ತಲುಪಿಸಿಲ್ಲ. ಪ್ರಕರಣದ ತನಿಖೆ ನಡೆಸಿದಾಗ ಆರೋಪಿಗಳು ಸೋಮವಾರ ಪೇಟೆಯಿಂದ 20 ಕಿ.ಮೀ.ದೂರದಲ್ಲಿರುವ ಕುಂಬಾರುಗಡಿಗೆ ಎಂಬಲ್ಲಿನ ಕಾಡಿನಲ್ಲಿ ಹಣ ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ಲಭಿಸಿತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಕಸ್ಟೋಡಿಯನ್ ಪರಶುರಾಮರ ಪಾತ್ರದ ಬಗ್ಗೆ ತನಿಖೆ ಮಾಡಲಾಗುತ್ತದೆ. ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಅವರನ್ನು ಶೀಘ್ರ ಬಂಧಿಸಲಾಗುವುದು ಎಂದರು.
7.5 ಕೋ.ರೂ. ಪೈಕಿ 6.30 ಕೋ.ರೂ. ವಶಪಡಿಸಲಾಗಿದ್ದು, ಉಳಿದ ಹಣ ತಲೆಮರೆಸಿಕೊಂಡಿರುವ ಆರೋಪಿಗಳಲ್ಲಿ ಉಳಿದಿರುವ ಸಾಧ್ಯತೆ ಇದೆ. ಕಾರ್ಯಾಚರಣೆಗಾಗಿ ಮಂಗಳೂರು ನಗರ ದಕ್ಷಿಣ ಉಪವಿಭಾಗದ ಎಸಿಪಿ ಶೃತಿ, ಸಿಸಿಆರ್ಬಿ ಘಟಕದ ಎಸಿಪಿ ವೆಲೆಂಟೆನ್ ಡಿಸೋಜ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಈ ತಂಡವು ಮಡಿಕೇರಿ, ಬೆಂಗಳೂರು, ಮೈಸೂರು, ಚಿತ್ರದುರ್ಗ ಮತ್ತಿತರ ಕಡೆ ತೆರಳಿ ಕಾರ್ಯಾಚರಣೆ ನಡೆಸಿತ್ತು ಎಂದವರು ಮಾಹಿತಿ ನೀಡಿದರು.







