ಉಳ್ಳಾಲ: ಯೂತ್ ಕಾಂಗ್ರೆಸ್ ಚುನಾವಣೆ ವೇಳೆ ಮಾತಿನ ಚಕಮಕಿ

ಉಳ್ಳಾಲ, ಮೇ 16: ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಗಳವಾರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ನ ತೊಕ್ಕೊಟ್ಟಿನಲ್ಲಿರುವ ಕಚೇರಿಯಲ್ಲಿ ಚುನಾವಣೆ ನಡೆದಿದ್ದು , ಈ ವೇಳೆ ಪೊಲೀಸರು ಮತ್ತು ಅಭ್ಯರ್ಥಿ ಪರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಯೂತ್ ಕಾಂಗ್ರೆಸ್ನ ರಾಜ್ಯ, ಜಿಲ್ಲೆ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಬಿರುಸಿನ ಸ್ಪರ್ಧೆ ಏರ್ಪಟಿದ್ದು ಮಂಗಳೂರು ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದು, ಜಿಲ್ಲಾ ಯೂತ್ ಕಾಂಗ್ರೆಸ್ಗೆ ಮೂವರು ಸ್ಪರ್ಧಿಗಳಿದ್ದಾರೆ.
ಬೆಳಗ್ಗಿನಿಂದಲೇ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದರೆ ಮಧ್ಯಾಹ್ನ ಗುರುತಿನ ಚೀಟಿಯ ಝೆರಾಕ್ಸ್ ಪತ್ರಿ ನೀಡಿ ಇಬ್ಬರು ಮತದಾರರು ಒಳಗೆ ಹೋಗಿದ್ದಾರೆ ಎಂದು ಆರೋಪಿಸಿ ರಾಜ್ಯದಿಂದ ನಿಯುಕ್ತಿಗೊಂಡಿದ್ದ ಕಾಂಗ್ರೆಸ್ ಏಜೆಂಟ್ ಒಬ್ಬರಲ್ಲಿ ತಗಾದೆ ತೆಗೆದ ಒಂದು ಗುಂಪು ಮತದಾನ ಕೇಂದ್ರದೊಳಗೆ ನುಗ್ಗಲು ಪ್ರಯತ್ನಿಸಿದ್ದರು.
ಈ ಸಂದರ್ಭ ಕರ್ತವ್ಯದಲ್ಲಿದ್ದ ಪೊಲೀಸರು ತಡೆದಾಗ, ಪೊಲೀಸ್ ಮತ್ತು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಉಳ್ಳಾಲ ಇನ್ಸ್ಪೆಕ್ಟರ್ ಗೋಪಿಕೃಷ್ಣ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಉಳ್ಳಾಲ ಸೇರಿದಂತೆ ಕೆಎಸ್ಆರ್ಪಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.







