ಎಸ್ಸೆಮ್ಮೆಸ್, ಮಿಸ್ಕಾಲ್ನಿಂದ ಸ್ವ-ಉದ್ಯೋಗ
ರಾಜ್ಯದಲ್ಲಿಯೇ ಪ್ರಥಮಹೆಜ್ಜೆ

ರೇಣುಕೇಶ್
ಶಿವಮೊಗ್ಗ, ಮೇ 17: ಜಿಲ್ಲಾ ಕೈಗಾರಿಕಾ ಸಂಘ (ಡಿಐಸಿ)ಯು ಜಿಲ್ಲೆಯ ನಿರುದ್ಯೋಗಿಗಳಿಗೆ ಸಿಎಂಎಸ್ಜಿಪಿ ಹಾಗೂ ಪಿಎಂಎಸ್ಇಜಿಪಿ ಯೋಜನೆಯ ಸೌಲಭ್ಯ ಕಲ್ಪಿ ಸಲು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಎಸ್ಸೆಮ್ಮೆಸ್ ಹಾಗೂ ಮಿಸ್ ಕಾಲ್ ಮೂಲಕ ನೆರವಾಗುವ ವಿಭಿನ್ನ ಕಾರ್ಯಕ್ರಮ ಕಾರ್ಯಗತಗೊಳಿಸಿದೆ.
ತಮ್ಮ ನೇರ, ನಿರ್ಭಿಡ, ಜನಪರ ಕಾರ್ಯವೈಖರಿಯ ಮೂಲಕ ಜನಮಾನಸದಲ್ಲಿ ಉತ್ತಮ ಹೆಸರು ಸಂಪಾದಿಸಿರುವ ಡಿಐಸಿಯ ಜಂಟಿ ನಿರ್ದೇಶಕ ಎಚ್.ಆರ್. ರಾಜಪ್ಪಅವರು ಈ ವಿನೂತನ ಯೋಜನೆಯ ಸೃಷ್ಟಿಕರ್ತರಾಗಿದ್ದಾರೆ. ಕಳೆದ ವರ್ಷ ಕೂಡ ಈ ಎರಡು ಯೋಜನೆಗಳ ಅಭ್ಯರ್ಥಿಗಳ ಆಯ್ಕೆಗೆ ಇದೇ ಮಾದರಿ ಅನುಸರಿಸಿ ಎಚ್.ಆರ್. ರಾಜಪ್ಪಯಶಸ್ವಿಯಾಗಿದ್ದು, ಪ್ರಸಕ್ತ ವರ್ಷ ಈ ವಿನೂತನ ಕಾರ್ಯಕ್ರಮ ಅನುಷ್ಠಾನಕ್ಕೆ ಮುಂದಾಗಿದ್ದಾರೆ.
ಸಿಗಲಿದೆ ಸೌಲಭ್ಯ: ಇಲಾಖೆಯ ಮೇಲ್ಕಂಡ ಮೊಬೈಲ್ ಸಂಖ್ಯೆಗೆ ಎಸ್ಸೆಮ್ಮೆಸ್ ಕಳುಹಿಸಿದವರ ತಾಲೂಕುವಾರು ಪಟ್ಟಿ ಸಿದ್ಧಪಡಿಸಿ, ಆಯಾ ತಾಲೂಕು ಕೇಂದ್ರಗಳಲ್ಲಿಯೇ ಮಾಹಿತಿ ಶಿಬಿರ ಆಯೋಜಿ ಸುವ ವ್ಯವಸ್ಥೆಯನ್ನು ರಾಜಪ್ಪರೂಪಿಸಿದ್ದಾರೆ.
ಶಿಬಿರದಲ್ಲಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ಯೋಜನಾ ವರದಿ ತಯಾರಿಸುವುದು ಹೇಗೆ, ಯಾವ ರೀತಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ, ಯಾವ ಸ್ವ-ಉದ್ಯೋಗಗಳಿಗೆ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಒಂದು ವೇಳೆ ಎಸ್ಸೆಮ್ಮೆಸ್ ಕಳುಹಿಸಲು ಸಾಧ್ಯವಾಗದವರು ಇಲಾಖೆಗೆ ಪತ್ರದ ಮೂಲಕ ಅಥವಾ ಖುದ್ದಾಗಿ ಭೇಟಿಯಾಗಿ ಹೆಸರು ನೋಂದಾ ಯಿಸಿಕೊಳ್ಳುವ ವ್ಯವಸ್ಥೆಯನ್ನು ಅವರು ಕಲ್ಪಿಸಿದ್ದಾರೆ.
ಸದ್ಬಳಕೆಯಾಗಬೇಕು: ಎಚ್.ಆರ್. ರಾಜಪ್ಪಈ ಕುರಿತಂತೆ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ವ-ಉದ್ಯೋಗಕ್ಕೆ ಪ್ರೋತ್ಸಾಹಿಸಲು ಮುಖ್ಯಮಂತ್ರಿ ಸ್ವ-ಉದ್ಯೋಗ ಸೃಜನ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ. ಇದು ಅತ್ಯಂತ ಮಹತ್ವದ ಯೋಜನೆಯಾಗಿದೆ. ಆದರೆ ಮಾಹಿತಿಯ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಮೀಣ ಭಾಗದ ಜನರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿಲ್ಲ ಎಂದಿದ್ದಾರೆ.
ಹಾಗೆಯೇ ಪ್ರಧಾನಮಂತ್ರಿ ಸ್ವಯಂ ಉದ್ಯೋಗ ಸೃಜನೆ ಯೋಜನೆಯಡಿ ನಗರ ಹಾಗೂ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಸೌಲಭ್ಯ ದೊರಕಲಿದೆ. ಜಿಲ್ಲೆಯಾದ್ಯಂತ ಈ ಎರಡು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇಲಾಖೆಯ ವತಿಯಿಂದ ಈ ಬಾರಿ, ಅರ್ಜಿ ಆಹ್ವಾನಿಸುವುದಕ್ಕಿಂತ ಮುಂಚಿತವಾಗಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಎಸ್ಸೆಮ್ಮೆಸ್ ಹಾಗೂ ಮಿಸ್ಕಾಲ್ ನೀಡುವ ವ್ಯವಸ್ಥೆ ಕಾರ್ಯ ಗತಗೊಳಿಸಲಾ ಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಸಂಖ್ಯೆಗಳ ವ್ಯವಸ್ಥೆ ಮಾಡಲಾಗಿದೆ.
ಹಾಗೆಯೇ ಯೋಜನೆಯ ಪೋಸ್ಟರ್ ಸಿದ್ಧಪಡಿಸಿ ಪ್ರತೀ ಗ್ರಾಪಂ ಕಚೇರಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡ ಲಾಗುತ್ತಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ಮಾಹಿತಿ ಶಿಬಿರ ಆಯೋಜಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರು ಯೋಜನೆಯ ಸಮಗ್ರ ಮಾಹಿತಿ ಅರಿತು ಸೌಲಭ್ಯ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಹಾಗೆಯೇ ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳುತ್ತದೆ ಎಂದು ರಾಜಪ್ಪ ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಮೊ. 7996392130ಗೆ ನಿಮ್ಮ ಹೆಸರು, ವಿಳಾಸದ ವಿವರ ಕಳುಹಿಸಬೇಕು. ಇದು ಸಾಧ್ಯವಾಗದಿದ್ದರೆ ಈ ನಂಬರ್ಗೆ ‘ಮಿಸ್ ಕಾಲ್’ ಮಾಡಬಹುದು. ನಿಮ್ಮ ಮೊಬೈಲ್ಗೆ ಡಿಐಸಿ ಅಧಿಕಾರಿ-ಸಿಬ್ಬಂದಿಯರೇ ಮರು ಕರೆ ಮಾಡಿ, ನಿಮ್ಮ ಮಾಹಿತಿ ಪಡೆಯಲಿದ್ದಾರೆ. ಯೋಜನೆಯ ಆಯ್ಕೆಗೆ ನೀವು ಅರ್ಹವಾಗಿದ್ದರೆ ಅವರೇ ತರಬೇತಿ ನೀಡಲಿದ್ದಾರೆ. ಸಂಬಂಧಿಸಿದ ಬ್ಯಾಂಕ್ಗಳಿಗೆ ಸಬ್ಸಿಡಿ ಲೋನ್ ಮಂಜೂರು ಮಾಡಲು ಶಿಫಾರಸು ಮಾಡಲಿದ್ದಾರೆ ಎಂದು ತಿಳಿಸಿದರು.
‘ರಾಜ್ಯಾದ್ಯಂತ ಈ ವ್ಯವಸ್ಥೆ ಅನುಷ್ಠಾನವಾಗಲಿ’
ಗ್ರಾಮೀಣ ಭಾಗದ ಬಡ, ಹಿಂದುಳಿದ, ಪರಿಶಿಷ್ಟ ಜಾತಿ-ಪಂಗಡ, ಮಹಿಳೆಯರ ಶ್ರೇಯೋಭಿವೃದ್ಧಿಗೆ ರಾಜ್ಯ ಸರಕಾರ ಹತ್ತು ಹಲವು ಸ್ವ-ಉದ್ಯೋಗ ಯೋಜನೆ ರೂಪಿಸಿ ಜಾರಿಗೊಳಿಸಿದೆ ಎಂದು ಉದ್ಯಮಿ ಗೋಪಿನಾಥ್ ಹೇಳಿದ್ದಾರೆ.
ಆದರೆ ಅದೆಷ್ಟೋ ಯೋಜನೆಗಳು ಮಾಹಿತಿಯ ಕೊರತೆ, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತಿತರ ಕಾರಣದಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಮಾಹಿತಿಯ ಕೊರತೆ ಯಿಂದಲೇ ಅರ್ಹ ಗ್ರಾಮೀಣ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುವಂತಾಗಿದೆ ಎಂದರು.
ಆದರೆ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಕೇಂದ್ರವು ನಗರ ಸೇರಿದಂತೆ ಗ್ರಾಮೀಣ ಭಾಗದವರಿಗೆ ಸ್ವ-ಉದ್ಯೋಗ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಸ್ವ-ಉದ್ಯೋಗ ಸೃಜನ ಯೋಜನೆ (ಸಿಎಂಎಸ್ಇಜಿಪಿ)ಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ‘ಎಸ್ಸೆಮ್ಮೆಸ್’, ‘ಮಿಸ್ಕಾಲ್’ ಅಭಿಯಾನದಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.
ಈ ರೀತಿಯ ವ್ಯವಸ್ಥೆ ಇಡೀ ರಾಜ್ಯಾದ್ಯಂತ ಅನುಷ್ಠಾನವಾಗಬೇಕು. ನಿರುದ್ಯೋಗಿಗಳಿಗೆ ಸರಕಾರದ ಸೌಲಭ್ಯಗಳು ಸುಲಭವಾಗಿ ಲಭ್ಯವಾಗುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
‘ವ್ಯಾಪಕ ಜನಜಾಗೃತಿ ಅಗತ್ಯ’
ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಹಾಗೂ ಅರ್ಹರಿಗೆ ನೇರವಾಗಿ ಸೌಲಭ್ಯ ದೊರಕುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ‘ಮುಖ್ಯಮಂತ್ರಿ ಸ್ವ-ಉದ್ಯೋಗ ಸೃಜನ ಯೋಜನೆ’ ಹಾಗೂ ‘ಪ್ರಧಾನಮಂತ್ರಿ ಸ್ವ-ಉದ್ಯೋಗ ಸೃಜನೆ ಯೋಜನೆ’ಯ ವ್ಯಾಪಕ ಜಾಗೃತಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಜಪ್ಪ ಹೇಳಿದ್ದಾರೆ.







