ಉದ್ಯೋಗ ಖಾತರಿ ಯೋಜನೆಯಡಿ ವೀಳ್ಯದೆಲೆ, ನುಗ್ಗೆ ಕೃಷಿಗೂ ಅವಕಾಶ

ಪುತ್ತೂರು, ಮೇ 18: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮುಂದಕ್ಕೆ ವೀಳ್ಯದೆಲೆ ಹಾಗೂ ನುಗ್ಗೆಕಾಯಿ ಕೃಷಿಗೂ ಅವಕಾಶವಿದ್ದು, ಸಣ್ಣ ಹಾಗೂ ಅತೀ ಸಣ್ಣ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕೆಯ್ಯೂರು ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ನೋಡೆಲ್ ಅಕಾರಿಯಾಗಿ ಆಗಮಿಸಿದ್ದ ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಹೊಳೆ ಬಸಪ್ಪ ಅವರು ತಿಳಿಸಿದರು.
ಕೆಯ್ಯೂರು ಗ್ರಾಮ ಪಂಚಾಯತ್ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2016-17 ನೆ ಸಾಲಿನ ದ್ವಿತೀಯ ಸುತ್ತಿನ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮಸಭೆಯು ಗುರುವಾರ ಗ್ರಾ.ಪಂ ಸಭಾಂಗಣದಲ್ಲಿ ಅಧ್ಯಕ್ಷ ಬಾಬು.ಬಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಹಿಂದೆ ಅಡಿಕೆ, ಕಾಳುಮೆಣಸು ಇತ್ಯಾದಿ ಕೃಷಿಗೆ ಅವಕಾಶವಿತ್ತು. ಆದರೆ ಇದೀಗ ವೀಳ್ಯದೆಲೆ, ನುಗ್ಗೆಕಾಯಿ ಕೃಷಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ ಬಸಪ್ಪ ಅವರು 10 ಸೆಂಟ್ಸ್ ಜಾಗದಲ್ಲಿ ಇರುವವರು ಕೂಡ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಳ್ಳಿ-ಚಂದ್ರಶೇಖರ್.ಬಿ
ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ ತಾಲೂಕು ಸಂಯೋಜಕ ಚಂದ್ರಶೇಖರ್ ಬಿ. ಮಾಹಿತಿ ನೀಡುತ್ತಾ ಸರಕಾರದ ಒಂದು ಉತ್ತಮ ಮತ್ತು ಒಳ್ಳೆಯ ಯೋಜನೆ ಇದಾಗಿದ್ದು, ಗ್ರಾಮಸ್ಥರು ಈ ಯೋಜನೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರು.
ಗ್ರಾಮಸ್ಥರಲ್ಲಿ ಮಾಹಿತಿಯ ಕೊರತೆಯಿಂದಾಗಿ ಈ ಯೋಜನೆಯಿಂದ ಹಿಂದೆ ಸರಿಯುತ್ತಿದ್ದಾರೆ. ಈ ಯೋಜನೆಯಲ್ಲಿ ಒಬ್ಬನಿಗೆ 236 ರುಪಾಯಿ ಕೂಲಿ ಹಣ ಸಿಗುತ್ತಿದ್ದು, ಬಾವಿ ಇತ್ಯಾದಿ ಕೆಲಸಗಳಿಗಾದರೆ ಆಳಕ್ಕೆ ಹೋದಂತೆ ಕೂಲಿ ಹಣವು ಹೆಚ್ಚಾಗುತ್ತಾ ಹೋಗುತ್ತದೆ. ಈ ಬಗ್ಗೆ ಇಂಜಿನಿಯರ್ರವರಿಂದ ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಗ್ರಾಮಸ್ಥರ ಕರ್ತವ್ಯ ಎಂದರು.
ಯೋಜನೆಯ ಫಲಾನುಭವಿಯೊಬ್ಬರು ಹಟ್ಟಿ ರಚನೆ ಮಾಡಿ ರೂ. 10,976 ಹಣ ಪಡೆದುಕೊಂಡಿದ್ದು, ಇದೀಗ ಹಟ್ಟಿಯನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ಯಾವ ಕಾನೂನು ಕ್ರಮ ಕೈಗೊಳ್ಳುತ್ತೀರಿ ಎಂದು ಸ್ಥಳೀಯರ ಪ್ರಶ್ನೆಗೆ ಉತ್ತರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸರಕಾರದ ಕಾನೂನಿನಂತೆ ಫಲಾನುಭವಿಯು ಪಡೆದುಕೊಂಡ ಹಣವನ್ನು ಸರ್ಕಾರಕ್ಕೆ ಮರುಸಂದಾಯ ಮಾಡಬೇಕು ಎಂದು ಸೂಚಿಸಿದರು. ಈ ಬಗ್ಗೆ ಫಲಾನುಭವಿಗೆ ನೋಟೀಸ್ ನೀಡುವುದು ಎಂದು ಪಂಚಾಯತು ಆಡಳಿತ ಮಂಡಳಿ ನಿರ್ಣಯಿಸಿತು.
ಯೋಜನೆಯಡಿ ಬಾವಿ ರಚನೆ ಮಾಡಿದವರಿಗೆ ಬಾವಿಗೆ ರಿಂಗ್ ಅಳವಡಿಸಲು ಕೂಡ ಅವಕಾಶ ಕೊಡಬೇಕು ಎಂದು ಎಂದು ಮೋಹನ್ ರೈ ಬೇರಿಕೆಯವರು ತಿಳಿಸಿದರು. ಬಾವಿ ಆಳಕ್ಕೆ ತೋಡಿದಂತೆ ಜರಿದು ಬೀಳುವ ಅಪಾಯ ಇಲ್ಲಿ ಜಾಸ್ತಿ ಇದ್ದು ತೊಂದರೆಯಾಗುತ್ತಿದೆ ಆದ್ದರಿಂದ ರಿಂಗ್ ಅಳವಡಿಕೆಗೆ ಅವಕಾಶ ಬೇಕು ಎಂದರು. ಅಲ್ಲದೆ ಸ್ವಂತ ಕೆರೆಗಳಿಂದ ಹೂಳೆತ್ತಲು ಕೂಡ ಯೋಜನೆಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಲಾಗುವುದು ಎಂದು ಚಂದ್ರಶೇಖರ್ ತಿಳಿಸಿದರು.
108 ಕುಟುಂಬ 5,424 ಮಾನವ ದಿನದ ಕೆಲಸ
ಕೆಯ್ಯೂರು ಗ್ರಾಮದಲ್ಲಿ ಒಟ್ಟು 108 ಕುಟುಂಬಗಳು ಯೋಜನೆಯಡಿ ಕೆಲಸ ನಿರ್ವಹಿಸಿದ್ದು,5,424 ಮಾನವ ದಿನದ ಕೆಲಸ ಆಗಿದೆ. 12,14,796 ರೂ. ಕೂಲಿ ವೆಚ್ಚ, 2,65,525 ರೂ. ಸಾಮಾಗ್ರಿ ವೆಚ್ಚ ಹಾಗೂ 14,80,321 ರೂ. ಪಾವತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ರಾಧಾಕೃಷ್ಣ ಗೌಡ ಉಪಸ್ಥಿತರಿದ್ದರು. ಯೋಜನೆಯ ಲೆಕ್ಕ ಪರಿಶೋಧಕ ಪ್ರಶಾಂತ್ ಆಲಂಕಾರು ವರದಿ ವಾಚಿಸಿದರು. ಅಭಿವೃದ್ಧಿ ಅಕಾರಿ ಸುಬ್ರಹ್ಮಣ್ಯ ಕೆ.ಎಂ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ರಾಕೇಶ್, ಶಿವಪ್ರಸಾದ್, ಧರ್ಣಪ್ಪ ಸಹಕರಿಸಿದ್ದರು.







