ಮೇ 19: ಮಾಲಿನ್ಯ ನಿಯಂತ್ರಣ ಮಂಡಳಿ ಮುಂಭಾಗ ಧರಣಿ
ಪಲ್ಗುಣಿ ನದಿ ಮಾಲಿನ್ಯ

ಮಂಗಳೂರು, ಮೇ 18: ಮಂಗಳೂರಿನ ಜೀವನದಿಗಳಲ್ಲೊಂದಾದ ಪಲ್ಗುಣಿ ನದಿಗೆ ಬೈಕಂಪಾಡಿಯ ಬಹುತೇಕ ಕೈಗಾರಿಕೆಗಳು ತಮ್ಮ ಮಾಲಿನ್ಯಕಾರಕ ಕೊಳಚೆ ನೀರನ್ನು ಅಕ್ರಮವಾಗಿ ಹರಿಸುತ್ತಿವೆ. ಇದನ್ನು ವಿರೋಧಿಸಿ ಡಿವೈಎಫ್ಐ ಧರಣಿ ನಡೆಸುವುದಾಗಿ ತಿಳಿಸಿದೆ.
ಪಲ್ಗುಣಿ ನದಿ ಪೂರ್ಣವಾಗಿ ಮಲಿನಗೊಂಡಿದ್ದು ಮೀನು ಸಂತತಿ ನಿರ್ನಾಮದ ಅಂಚಿಗೆ ತಲುಪಿದೆ. ಅಂತರ್ಜಲ ಮಲಿನಗೊಂಡು ಕುಡಿಯುವ ನೀರಿನ ಬಾವಿಗಳು, ಸ್ಥಳೀಯ ಕೃಷಿಭೂಮಿಗಳು ನಿರುಪಯುಕ್ತಗೊಂಡಿವೆ. ಜನತೆಯ ಆರೋಗ್ಯದ ಸಮಸ್ಯೆಗಳು ಉಲ್ಬಣಿಸುತ್ತಿದೆ. ಬಹುಕಾಲದಿಂದ ಸ್ಥಳೀಯ ಜನತೆ ಈ ಕುರಿತು ದೂರುಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುತ್ತಿದ್ದರೂ ಜಿಲ್ಲಾಡಳಿತ ಕಂಪೆನಿಗಳ ಜೊತೆ ಶಾಮೀಲಾಗಿ ಮಾಲಿನ್ಯದ ವಿರುದ್ದ ಮೌನತಾಳಿದ್ದು ಈಗ ಪರಿಸ್ಥಿತಿ ಗಂಭೀರ ಸ್ವರೂಪ ತಾಳಿದ್ದರೂ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾಡಳಿತ , ಮಾಲಿನ್ಯ ನಿಯಂತ್ರಣ ಮಂಡಳಿಯ ಇಂತಹ ಪರಿಸರ ವಿರೋಧಿ, ಜೀವ ವಿರೋಧಿ ನಿಲುವುಗಳನ್ನು ವಿರೋಧಿಸಿ, ಪಲ್ಗುಣಿ ಉಳಿಸಿ ಎಂಬ ಬೇಡಿಕೆಯನ್ನು ಮುಂದಿಟ್ಟು dyfi ಅಭಿಯಾನವೊಂದನ್ನು ಆರಂಭಿಸುತ್ತಿದ್ದು, ಅದರ ಭಾಗವಾಗಿ ಮೇ 19ರ ಬೆಳಿಗ್ಗೆ 10 :30 ಕ್ಕೆ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ "ಮಾಲಿನ್ಯ ನಿಯಂತ್ರಣ ಮಂಡಳಿಯ" ಕಚೇರಿಯ ಮುಂಭಾಗ ಧರಣಿ ಹಮ್ಮಿಕೊಂಡಿದ್ದೇವೆ ಎಂದು dyfi ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.





