ಬಂಡೀಪುರ ಅರಣ್ಯ ಪ್ರದೇಶಲ್ಲಿ ಅಕ್ರಮ ಗಣಿಗಾರಿಕೆ: ಆರೋಪ

ಗುಂಡ್ಲುಪೇಟೆ, ಮೇ 19: ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಬಿಳಿಕಲ್ಲುಗಣಿಗಾರಿಕೆ ನಡೆಯುತ್ತಿದ್ದು ಹುಲಿ ಸಂರಕ್ಷಿತ ಅರಣ್ಯದ ಪ್ರದೇಶದ ವನ್ಯಜೀವಿಗಳಿಗೆ ಸಂಚಕಾರ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದರು.
ತಾಲೂಕಿನ ಹಸಗೂಲಿ ಹಾಗೂ ಮಂಚಹಳ್ಳಿ ಗ್ರಾಮಗಳ ನಡುವೆ ಇರುವ ಗೋಮಾಳ ಹಾಗೂ ಓಂಕಾರ ಅರಣ್ಯ ವಲಯಕ್ಕೆ ಸೇರುವ ಬೆಟ್ಟದಲ್ಲಿ ಸಮೀಪ ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆಗೆ ಹಗಲಿನಲ್ಲಿಯೂ ಸಿಡಿಮದ್ದು ಸಿಡಿಸುತ್ತಿರುವ ಪರಿಣಾಮವಾಗಿ ಸುತ್ತಲಿನ ರೈತರು ತಮ್ಮ ಜಮೀನುಗಳಿಗೂ ಹೋಗಲಾಗದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಈ ಅಕ್ರಮ ಗಣಿಗಾರಿಕೆಯು ಬೇಗೂರು ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ್ದು ಪೊಲೀಸರು ಮತ್ತು ಸಂಬಂಧಪಟ್ಟವರು ಅಕ್ರಮ ಗಣಿಗಾರಿಕೆ ಹಾಗೂ ಸ್ಪೋಟಕ ಬಳಕೆ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Next Story





