ಉಡುಪಿ : ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ - ಜಿಲ್ಲಾಧಿಕಾರಿ

ಉಡುಪಿ, ಮೇ 20: ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ‘ಇಲಾಖೆಗಳ ನಡೆ ರೈತರ ಮನೆ ಬಾಗಿಲಿಗೆ’ ಕೃಷಿ ಅಭಿ ಯಾನದ ಮೂಲಕ ಜಿಲ್ಲೆಯ ರೈತರಿಗೆ ಸಮಗ್ರ ಕೃಷಿ ಮಾಹಿತಿ ನೀಡುವ ಕಾರ್ಯ ಕ್ರಮವನ್ನು ಜೂನ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಕೃಷಿ ಅಭಿಯನದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜೂ.12 ರಿಂದ ಪ್ರಾರಂಭವಾಗುವ ಈ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಕೃಷಿ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ತೆರಳಿ ರೈತರಿಗೆ ವಿವಿಧ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಗತ್ಯ ನೆರವು ನೀಡಲಿದ್ದಾರೆ. ರೈತರಿಗೆ ಕೃಷಿ ಉತ್ಪಾದಕತೆ ಹೆಚ್ಚಳ, ಹೊಸ ತಾಂತ್ರಿಕತೆಯ ಪರಿಚಯ, ಯಂತ್ರೋಪಕರಣಗಳ ಬಳಕೆ, ಕೃಷಿ ವಿಜ್ಞಾನಿಗಳ ಜೊತೆ ಸಂವಾದ, ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಅಭಿಯಾನದಲ್ಲಿ ಪ್ರತಿ ಹೋಬಳಿಯ 2 ಗ್ರಾಮಗಳನ್ನು ದತ್ತು ಪಡೆದು, ಗ್ರಾಮದಲ್ಲಿ ಅಂರ್ತಜಲ ವೃದ್ದಿ, ಕೊಳವೆ ಬಾವಿಗಳಿಗೆ ಮರುಪೂರಣ, ಪೈಪ್ ಕಾಂಪೋಸ್ಟ್, ಇಂಗು ಗುಂಡಿ ನಿರ್ಮಾಣ ಸೇರಿದಂತೆ ಕೃಷಿ ಸಂಬಂಧಿತ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡಿ, ಮಾದರಿ ಕೃಷಿ ಗ್ರಾಮವಾಗಿ ರೂಪಿಸು ವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿರುವ ಕೆರೆಗಳು, ಮದಗಗಳು, ನಿರುಪ ಯುಕ್ತ ಕೊಳವೆ ಬಾವಿಗಳ ವಿವರಗಳನ್ನು ಪಂಚಾಯತ್ಗಳ ಸಹಕಾರದಿಂದ ಪಡೆದು ನೀಡುವಂತೆ ತಿಳಿಸಿದ ಅವರು, ಅಂತಹ ಪ್ರದೇಶದಲ್ಲಿ ಕೆರೆ ಸಂಜೀವಿನಿ, ಭೂಸಮೃದ್ದಿ ಯೋಜನೆಯಲ್ಲಿ ಜಲ ಮರು ಪೂರಣ ವ್ಯವಸ್ಥೆ ಕೈೊಳ್ಳುವಂತೆ ತಿಳಿಸಿದರು.
ಪ್ರಗತಿಪರ ರೈತರ ಅನುಭವಗಳ ಹಂಚಿಕೆ, ಮಣ್ಣು ಪರೀಕ್ಷೆ, ಕೃಷಿ ವಿಜ್ಞಾನಿ ಗಳಿಂದ ವೈಜ್ಞಾನಿಕ ಕೃಷಿ ಮತ್ತು ನೂತನ ಸಂಶೋಧನೆಗಳ ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ಮಾಹಿತಿ ಪುಸ್ತಕಗಳನ್ನು ಮತ್ತು ಸ್ಥಬ್ಧಚಿತ್ರಗಳನ್ನು ಹಾಗೂ ವಸ್ತು ಪ್ರದರ್ಶನವನ್ನು ಈ ಅಭಿಯಾನದಲ್ಲಿ ಆಯೋಜಿಸಬೇಕು ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ನಾಯಕ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ. ಹನು ಮಂತಪ್ಪ, ತೋಟಗಾರಿಕೆ, ಪಶುಪಾಲನೆ ಹಾಗೂ ಇತರೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.







