ಉಡುಪಿ ಜಿಲ್ಲಾ ಯೋಜನಾ ಸಮಿತಿ ಸಭೆ
ಉಡುಪಿ, ಮೇ 20: ಉಡುಪಿ ಜಿಲ್ಲಾ ಯೋಜನಾ ಸಮಿತಿ ಸಭೆಯು ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಜಿಪಂ ಅಧ್ಯಕ್ಷ ದಿನಕರ ಬಾಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನಾಮ ನಿರ್ದೇಶನ ಸ್ವೀಕರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಘೋಷಿಸಿದರು. ನೂತನವಾಗಿ ಆಯ್ಕೆಯಾದ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರನ್ನು ಎಲ್ಲಾ ಸದಸ್ಯರು ಅಭಿನಂದಿಸಿದರು.
ಸಬೆಯಲ್ಲಿ ಯೋಜನಾ ಸಮಿತಿಯ ಸದಸ್ಯರ ವಿವರ, ಜಿಲ್ಲಾ ಯೋಜನಾ ಸಮಿತಿಯ ಪ್ರಕಾರ್ಯಗಳು, ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆ ಅನುಮೋದನೆ, ಜಿಪಂ, ತಾಪಂ, ಗ್ರಾಪಂ ಕಾರ್ಯಕ್ರಮಗಳ ಬಗ್ಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ನಿಗದಿಗೊಳಿಸಿ ಅನುದಾನಕ್ಕೆ ಸರಿಯಾಗಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಯೋಜನಾ ಸಮಿತಿಗೆ ಕಳುಹಿಸಬೇಕಾಗಿ ರುವುದಾಗಿ ತಿಳಿಸಲಾಯಿತು.
ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಯೋಜನೆಗಳು ಜಿಲ್ಲಾ ಯೋಜನಾ ಸಮಿತಿಗೆ ಮಂಡಿಸಿ ಚರ್ಚೆಯಾಗಬೇಕು ಮತ್ತು ಸ್ಥಳೀಯ ಸಂಸ್ಥೆ ಗಳಿಗೆ ಸಲಹೆಗಳನ್ನು ಕೊಡಬಹುದೆಂದು ಸೂಚಿಸಲಾಯಿತು. ಘನ ಮತ್ತು ದ್ರವ ತ್ಯಾಜ್ಯಗಳ ವಿಲೇವಾರಿ, ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ, ಜಿಲ್ಲೆಯಲ್ಲಿ ಪೈಪ್ ಕಾಂಪೋಸ್ಟಿಂಗ್, ಮುಖಾಂತರ ಕಸ ವಿಲೇವಾರಿ, ಜಿಲ್ಲೆಯಲ್ಲಿ ಅಂತರ್ಜಲ ಮರುಪೂರಣ ಕಾರ್ಯಕ್ರಮ ಅನುಷ್ಟಾನ, ಕಿಂಡಿ ಅಣೆಕಟ್ಟುಗಳ ನಿರ್ವಹಣೆ, ಕೆರೆ ಹೂಳೆತ್ತುವ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಗೆ ಕಾಮಗಾರಿಗಳನ್ನು ನಮ್ಮ ಗ್ರಾಮ ನಮ್ಮ ಯೋಜನೆ ಯಿಂದಲೇ ತೆಗೆದುಕೊಳ್ಳಬೇಕೆಂದು ತಿಳಿಸಲಾಯಿತು.
ಕೆರೆ/ಮದಗಗಳ ಒತ್ತುವರಿ ತಡೆಯಲು ಅವುಗಳ ಸರ್ವೆ ಮಾಡಿ ಗಡಿ ಗುರುತು ಮಾಡಬೇಕೆಂದು ಸದಸ್ಯರು ತಿಳಿಸಿದರು. ಸರಕಾರಿ ಆಸ್ತಿಗಳ ಪಟ್ಟಿಯನ್ನು ಗ್ರಾಪಂ ಮೂಲಕ ಮಾಡಲಾಗುತ್ತಿದ್ದು, ಕೆರೆ, ಮದಗ, ಕುಡಿಯುವ ನೀರಿನ ಯೋಜನೆ ಇತ್ಯಾದಿಗಳ ಪಟ್ಟಿ ಮಾಡಲಾಗುತ್ತಿರುವುದಾಗಿ ಮುಖ್ಯ ಯೋಜನಾ ಧಿಕಾರಿ ಎ.ಶ್ರೀನಿವಾಸ ರಾವ್ ತಿಳಿಸಿದರು. ಸಭೆಯಲ್ಲಿ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಯೋಜನಾ ನಿರ್ದೇಶಕಿ ನಯನ ಮೊದಲಾದವರು ಉಪಸ್ಥಿತರಿದ್ದರು.