ಜಾಧವ್ಗೆ ರಾಜತಾಂತ್ರಿಕ ನೆರವಿಗೆ ಐಸಿಜೆ ಆದೇಶಿಸಿಲ್ಲ: ಅಝೀಝ್
ಇಸ್ಲಮಾಬಾದ್, ಮೇ 20: ಪಾಕಿಸ್ತಾನದ ಕಾನೂನಿನಂತೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಪ್ರಜೆ ಕುಲಭೂಷಣ್ ಯಾದವ್ಗೆ ರಾಜತಾಂತ್ರಿಕ ನೆರವು ಪಡೆಯಲು ಅವಕಾಶ ನೀಡಬೇಕೆಂದು ಐಸಿಜೆ(ಅಂತಾರಾಷ್ಟ್ರೀಯ ನ್ಯಾಯಾಲಯ) ಆದೇಶ ನೀಡಿಲ್ಲ ಎಂದು ಪಾಕ್ ಪ್ರಧಾನಿಗೆ ವಿದೇಶ ವ್ಯವಹಾರ ವಿಷಯದಲ್ಲಿ ಸಲಹೆಗಾರರಾದ ಸರ್ತಾಜ್ ಅಝೀಝ್ ಹೇಳಿದ್ದಾರೆ.
ಒಂದು ನಿರ್ಧಾರಕ್ಕೆ ಬರುವವರೆಗೆ ಜಾಧವ್ಗೆ ನೀಡಿರುವ ಶಿಕ್ಷೆಯನ್ನು ಜಾರಿಗೊಳಿಸದಂತೆ ಐಸಿಜೆ ಪಾಕ್ ಸರಕಾರವನ್ನು ಕೇಳಿಕೊಂಡಿದೆ. ಮರಣದಂಡನೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಯಾವಾಗಲೂ ತಡೆಯಾಜ್ಞೆ ನೀಡುತ್ತದೆ ಎಂದವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಾಧವ್ ಓರ್ವ ಸಾಮಾನ್ಯ ಭಾರತೀಯ ಪ್ರಜೆ ಅಲ್ಲ. ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದ ಆತನನ್ನು ಗೂಢಚಾರಿಕೆ ನಡೆಸಲು ಪಾಕಿಸ್ತಾನಕ್ಕೆ ಕಳಿಸಲಾಗಿತ್ತು ಎಂದು ಅಜೀಝ್ ಹೇಳಿದರು. ನಕಲಿ ಪಾಸ್ಪೋರ್ಟ್ ಬಳಸಿ ಪಾಕಿಸ್ತಾನಕ್ಕೆ ಬಂದಿರುವುದನ್ನು ಮತ್ತು ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿರುವುದನ್ನು ಒಪ್ಪಿಕೊಂಡ ಬಳಿಕ ಅವರಿಗೆ ಪಾಕ್ ಕಾನೂನಿನಂತೆ ಶಿಕ್ಷೆ ವಿಧಿಸಲಾಗಿದೆ.