ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ: ದೇವೇಗೌಡ
ಹಾಸನ, ಮೇ 21: ತವರು ಜಿಲ್ಲೆಯ ರೈತನೊಬ್ಬ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಒಳ್ಳೆದಾಗಲಿದೆ ಎಂದು ನನ್ನ ಮತ್ತು ನಮ್ಮ ಪಕ್ಷದ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ವಿಶ್ವಾಸ ರೈತನ ಹೇಳಿಕೆಯಿಂದ ವ್ಯಕ್ತವಾಗಿದೆ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ರೈತರ ಸಾಲ ಮನ್ನಾ ಮಾಡೊದು ನಿಶ್ಚಿತ. ಇದರ ಜೊತೆಗೆ ರೈತರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಮೇ 14ರಂದು ದೇವೇಗೌಡರ ಮತ್ತು ಅವರ ಮಕ್ಕಳ ಹೆಸರು ಬರೆದು ಚನ್ನರಾಯಪಟ್ಟಣ ತಾಲೂಕಿನ ತರಬೇನಹಳ್ಳಿ ರೈತ ಸಾವಿಗೆ ಶರಣಾಗಿದ್ದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಮನೆಗೆ ಶೀಘ್ರ ಭೇಟಿ ಕೊಡುವೆ ಎಂದರು
ರಾಜ್ಯದಲ್ಲಿ ಜೆಡಿಎಸ್ ಮುಗಿಸಲು ಷಡ್ಯಂತ್ರ ನಡೆದಿದೆ ಮಾಜಿ ಸಿಎಂ ಕುಮಾರಸ್ವಾಮಿಯ ವರ್ಚಸ್ಸು ಕಂಡು ಮುಗಿಸಲು ಪ್ರಯತ್ನಿಸುತ್ತಿದ್ದಾರೆ.
ಎರಡೂ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ನಮ್ಮನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿವೆ. ಆದರೆ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ನನ್ನ ಜೀವನ ಚರಿತ್ರೆ ಪುಸ್ತಕದಿಂದ ನನ್ನ ರಾಜಕೀಯ ಹೋರಾಟದ ಬಗ್ಗೆ ಯುವಕರಿಗೆ ತಿಳಿಯಲಿದೆ ಎಂದು ದೇವೇಗೌಡರು ಹೇಳಿದರು.