ಸಾಲಬಾಧೆೆ: ರೈತ ಆತ್ಮಹತ್ಯೆ
ಮೂಡಿಗೆರೆ, ಮೇ.22: ಸಾಲದ ಬಾಧೆ ತಾಳಲಾರದೆ ಬಣಕಲ್ ಹೋಬಳಿ ಭಾಗದ ಬೆಟಗೆರೆ ಗ್ರಾಮದ ಮುದ್ದುಗೌಡ(53) ಎಂಬವರು ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುದ್ದುಗೌಡರು ಬಕ್ಕಿ ಗ್ರಾಮದ ಸ.ನಂ.119, 113, 115, 109ರಲ್ಲಿ ಸುಮಾರು 3.50 ಎಕರೆ ಭೂಮಿಯನ್ನು ಹೊದಿದ್ದರು. ಅವರು ಜಮೀನು ಅಭಿವೃದ್ಧಿಗಾಗಿ ತ್ರಿಪುರ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನಲ್ಲಿ 1.50 ಲಕ್ಷ ರೂ., ಅಲ್ಲದೇ ಕೈಗಡ ರೂಪದಲ್ಲಿ ಒಟ್ಟು 4.80 ಸಾವಿರ ರೂ.ವನ್ನು ಗ್ರಾಮದ ಕೆಲವು ಗೆಳೆಯರಿಂದ ಪಡೆದುಕೊಂಡಿದ್ದರು.
ಈ ಸಲ ಮಳೆ ಕೈಕೊಟ್ಟಿದ್ದರಿಂದ ಸಕಾಲದಲ್ಲಿ ಸರಿಯಾಗಿ ಬೆಳೆ ಬಾರದೇ ಕಂಗಾಲಾಗಿದ್ದರು. ಸಾಲಗಾರರಿಗೆ ಸಾಲದ ಮರುಪಾವತಿ ವಿಚಾರದಲ್ಲಿ ತೀವ್ರ ನೊಂದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮನನೊಂದು ಮೇ 21ರಂದು ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣ ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.