ತಂಬಾಕು ನಿಷೇಧ ಉಲ್ಲಂಘನೆ: 40 ಪ್ರಕರಣ ದಾಖಲು

ಉಡುಪಿ, ಮೇ 24: ಜಿಲ್ಲೆಯನ್ನು ಕೋಟ್ಪಾ 2003 ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕ ಕಾರ್ಕಳ, ಬಜಗೋಳಿ ನಗರ ಮತ್ತು ಗ್ರಾಮೀಣ ಪ್ರದೇಶದ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ಹಾಗೂ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿ ಒಟ್ಟು 40 ಪ್ರಕರಣಗಳನ್ನು ದಾಖಲಿಸಿದೆ.
ದಾಳಿಯ ವೇಳೆ ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ 40 ಪ್ರಕರಣ ದಾಖಲಿಸಿ 7,700 ರೂ. ದಂಡ ವಸೂಲಿ ಮಾಡಲಾಗಿದೆ. ದಾಳಿಯ ಸಂದರ್ಭದಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತು ನಾಮಫಲಕಗಳನ್ನು ಅಂಗಡಿ ಮಾಲಕರಿಂದ ತೆರವು ಗೊಳಿಸಲಾಯಿತು.
ಈ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ವಾಸುದೇವ, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ್, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜ ಮಹಂತೇಶ್ ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಆನಂದ ಗೌಡ, ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಹಿರಿಯ ಆರೋಗ್ಯ ಸಹಾಯಕ ಶಿವರಾಮ್ ಭಟ್, ಶಿಕ್ಷಣ ಇಲಾಖೆಯ ಸಿದ್ದಪ್ಪ, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಲೈಲಾ ಥೋಮಸ್, ನಗರ ಪೊಲೀಸ್ ಠಾಣೆಯ ಪ್ರಕಾಶ್ ಉಪಸ್ಥಿತರಿದ್ದರು.