ಭಾಗಮಂಡಲದ ಕಾಯಕಲ್ಪಕ್ಕೆ ಸಚಿವ ಸೀತಾರಾಮ್ ನಿರ್ಧಾರ
20 ಕೋ.ರೂ. ವೆಚ್ಚದಲ್ಲಿ ವಿಶ್ವದರ್ಜೆಯ ಸೌಲಭ್ಯ

ಮಡಿಕೇರಿ, ಮೇ 24: ಜೀವನದಿ ಕಾವೇರಿಯ ಪವಿತ್ರ ಕ್ಷೇತ್ರ ಭಾಗಮಂಡಲದಲ್ಲಿ ಭಕ್ತರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ವಿಶ್ವದರ್ಜೆಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು 20 ಕೋಟಿ ರೂ. ಅನುದಾನವನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆ ರಾಜ್ಯವ್ಯಾಪಿ ಗುರುತಿಸಿರುವ 16 ಪ್ರವಾಸಿ ಕೇಂದ್ರಗಳಲ್ಲಿ ಭಾಗಮಂಡಲವೂ ಒಂದಾಗಿದೆ. ಇವೆಲ್ಲ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒಟ್ಟು 300 ಕೋಟಿ ರೂ.ನ್ನು ಒದಗಿಸಲಾಗುತ್ತಿದೆ. ಇದರಲ್ಲಿ ಭಾಗಮಂಡಲ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು 20 ರಿಂದ 25 ಕೋಟಿ ರೂ. ಲಭ್ಯವಾಗಬಹುದೆಂದು ತಿಳಿಸಿದರು.
ಭಾಗಮಂಡಲ ಕ್ಷೇತ್ರಕ್ಕೆ ವರ್ಷಂಪ್ರತಿ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರು ಆಗಮಿಸುತ್ತಾರೆ. ಇವರಿಗೆ ಕಡಿಮೆ ವೆಚ್ಚದಲ್ಲಿ ವಸತಿ ಸೌಲಭ್ಯ ಒದಗಿಸುವ ವಸತಿ ಗೃಹ, ಪಾರ್ಕಿಂಗ್ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಒದಗಿಸಲಾಗುತ್ತದೆ. ಕ್ಷೇತ್ರದಲ್ಲಿ ಮಳೆಗಾಲದ ಸಂದರ್ಭ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಲೋಕೋಪಯೋಗಿ ಇಲಾಖೆಯ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ ಈ ಹಿಂದೆ ಯೋಜಿಸಿದಂತೆ ಪ್ರತ್ಯೇಕವಾಗಿ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸದಸ್ಯರು ಅಹಂ ಬಿಡಬೇಕು:
ಮಡಿಕೇರಿ ನಗರಸಭಾ ಸದಸ್ಯರು ಅಭಿವೃದ್ಧಿಯ ದೃಷ್ಟಿಯಿಂದ ತಮ್ಮ ಅಹಂ ಹಾಗೂ ಸ್ವಪ್ರತಿಷ್ಠೆಯನ್ನು ಬಿಟ್ಟು ಕಾರ್ಯನಿರ್ವಹಿಬೇಕು. ಇಲ್ಲವಾದರೆ ಮುಂದೆ ಜನರೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರಸಭೆೆಯ ಅಭಿವೃದ್ಧಿಗೆ 36 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಒದಗಿಸಿದೆ. ಇದನ್ನು ನಗರಸಭೆೆಯ ಸದಸ್ಯರು ನಗರದ ಸರ್ವಾಂಗೀಣ ಪ್ರಗತಿಯ ಚಿಂತನೆಯನ್ನು ಬಿಟ್ಟು ಕೇವಲ ತಮ್ಮ ತಮ್ಮ ವಾರ್ಡ್ಗಳಿಗೆ ಸೀಮಿತವಾಗಿ ನೀಡಬೇಕೆಂದು ಕೇಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಗಿರಿಜನರಿಗೆ ಪುನರ್ವಸತಿ:
ದಿಡ್ಡಳ್ಳಿ ಗಿರಿಜನರಿಗೆ ಈಗಾಗಲೇ ಪುನರ್ವಸತಿಯನ್ನು ಒದಗಿಸಲಾಗಿದೆ. ಕೆದಮುಳ್ಳೂರಿನ ಪ್ರದೇಶಕ್ಕೆ ತೆರಳುವುದಿಲ್ಲ ಎಂದು ಹೇಳಿರುವ ಗಿರಿಜನ ಕುಟುಂಬಗಳಿಗೆ ಈಗಾಗಲೇ ಗುರುತಿಸಿರುವ ಮೂರು ಪ್ರದೇಶಗಳಲ್ಲಿ ನೆಲೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಬ್ಯಾಡಗೊಟ್ಟ ವಿಭಾಗದಿಂದ ಸ್ಥಳೀಯರಲ್ಲ ಎನ್ನುವ ಕಾರಣಕ್ಕೆ ಕೆಲವು ಕುಟುಂಬಗಳನ್ನು ಹೊರ ಕಳುಹಿಸಲಾಗಿದೆ. ಆದರೆ ಇವರೆಲ್ಲರಿಗೂ ಅವರವರ ಪ್ರದೇಶಗಳಲ್ಲಿ 94ಸಿಯಡಿ ನಿವೇಶನ ಪಡೆದುಕೊಳ್ಳಲು ಅವಕಾಶವಿದೆ ಎಂದು ಸಚಿವ ಸೀತಾರಾಮ್ ತಿಳಿಸಿದರು. ‘ಎಚ್.ವಿಶ್ವನಾಥ್ ನಿರ್ಧಾರ ಸರಿಯಲ್ಲ ’
ಕಾಂಗ್ರೆಸ್ ಪಕ್ಷದಿಂದ ಎಲ್ಲ ಸ್ಥಾನಮಾನಗಳನ್ನು ಪಡೆದಿರುವ ಎಚ್.ವಿಶ್ವನಾಥ್ ಇದೀಗ ಪಕ್ಷ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸುತ್ತಿರುವುದು ಎಷ್ಟು ಸರಿ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಪ್ರಶ್ನಿಸಿದ್ದಾರೆ.
ಸಂಸದ ವಿಶ್ವನಾಥ್ ಅವರು ಶಾಸಕರಾಗಿ, ಸಚಿವರಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಲು ಕಾಂಗ್ರೆಸ್ ಪಕ್ಷ ಅವಕಾಶ ಒದಗಿಸಿದೆ. ಹೀಗಿರುವಾಗ ಪಕ್ಷ ತನ್ನನ್ನು ಕಡೆಗಣಿಸಿದೆ ಎಂದು ಹೇಳುವ ಮೂಲಕ ಪಕ್ಷದಿಂದ ಹೊರಹೋಗುವ ಪ್ರಯತ್ನಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದರು. ವೈಯಕ್ತಿಕವಾಗಿ ತಾನೆೇ ವಿಶ್ವನಾಥ್ ಅವರನ್ನು ಸಂಪರ್ಕಿಸಿ, ಪಕ್ಷ ತೊರೆಯಬೇಡಿ ಎಂದು ಹೇಳಿರುವುದಾಗಿ ಸ್ಪಷ್ಟಪಡಿಸಿದರು.
ರಾಷ್ಟ್ರಪತಿ, ಪ್ರಧಾನಿ ಹುದ್ದೆಗಳನ್ನು ಬಿಟ್ಟರೆ ಉಳಿದ ಎಲ್ಲ ರಾಜಕೀಯ ಉನ್ನತ ಸ್ಥಾನಗಳನ್ನು ಕಾಂಗ್ರೆಸ್ನಿಂದ ಪಡೆದು, ಅನುಭವಿಸಿದವರು ತನ್ನನ್ನು ಪಕ್ಷ ಮೂಲೆಗುಂಪು ಮಾಡಿದೆ ಎಂದು ಪಕ್ಷ ಬಿಟ್ಟರೆ ಅರ್ಥವೇನೆಂದು ಪರೋಕ್ಷವಾಗಿ ಎಸ್.ಎಂ.ಕೃಷ್ಣ ಅವರ ಹೆಸರನ್ನು ಉಲ್ಲೇಖಿಸದೆ ಸಚಿವರು ವ್ಯಂಗ್ಯವಾಡಿದರು.







