ಮೇ 28: ಮಂಗಳೂರಿನಲ್ಲಿ ಶಿಕ್ಷಕರಿಗೆ ಉದ್ಯೋಗ ಮೇಳ
ಉಡುಪಿ, ಮೇ 26: ಧಾರವಾಡದ ಎಂಎಸ್ಎಸ್ಎಎಸ್ ಸಂಸ್ಥೆಯು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಕೇಂದ್ರ ಮತ್ತು ಉದ್ಯೋಗ ಸಮಯ ವಾರಪತ್ರಿಕೆಯ ಸಹಯೋಗದೊಂದಿಗೆ ಮೇ 28ರ ಸೋಮವಾರ ಮಂಗಳೂರಿನ ಎಂ.ಜಿ.ರೋಡ್ನಲ್ಲಿರುವ ಕೆನರಾ ಕಾಲೇಜಿನಲ್ಲಿ ರಾಜ್ಯಮಟ್ಟದ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಿದೆ.
ಶನಿವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಉದ್ಯೋಗ ಸಮಯ ಪತ್ರಿಕೆಯ ಸಂಪಾದಕ ಜಿ.ಆರ್.ಮಾಂಡ್ರೆ ಅವರು ಈ ವಿಷಯ ತಿಳಿಸಿದರು. ಉದ್ಯೋಗ ಮೇಳ ಬೆಳಗ್ಗೆ 8:00ರಿಂದ ಸಂಜೆ 4:00ಗಂಟೆಯವರೆಗೆ ನಡೆಯಲಿದ್ದು, ಖಾಸಗಿ ಶಾಲೆಗಳಲ್ಲಿರುವ ಸುಮಾರು 800 ಖಾಲಿ ಹುದ್ದೆಗಳಿಗೆ ನೇಮಕಾತಿ ಅಂದು ನಡೆಯಲಿದೆ ಎಂದರು.
ಉಡುಪಿ ಮತ್ತು ದ.ಕ.ದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಕಾರವಾರ, ದಾವಣಗೆರೆ, ಹಾಸನ, ಮೈಸೂರು, ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಮುಂತಾದ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುವ ಸೂಚನೆ ನೀಡಿವೆ ಎಂದವರು ಹೇಳಿದರು.
ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಮುಖ್ಯೋಪಾಧ್ಯಾಯರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರೊಂದಿಗೆ ಶಾಲೆಗಳಲ್ಲಿ ಲಭ್ಯವಿರುವ ವಿವಿಧ ಅನ್ಯ ಹುದ್ದೆಗಳಿಗೂ ಅಂದು ಸಂದರ್ಶನ-ನೇಮಕಾತಿ ನಡೆಯಲಿವೆ. ಡಿಎಡ್, ಬಿಎಡ್, ಎನ್ಟಿಸಿ, ಎಂಎ, ಎಂಎಸ್ಸಿ, ಎಂಕಾಂ, ಎಂಸಿಎ, ಪದವೀಧರರು ಈ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದರು.
ಮೇಳದಲ್ಲಿ ಭಾಗವಹಿಸಲಚ್ಛಿಸುವ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ಉಚಿತವಾಗಿ ನೊಂದಣಿ ಮಾಡಿಕೊಳ್ಳುವಂತೆ ಇದಕ್ಕಾಗಿ ಮೊಬೈಲ್ ನಂ. 8088644209ಕ್ಕೆ ಮಿಸ್ಡ್ ಕಾಲ್ ಮಾಡುವಂತೆ ಮಾಂಡ್ರೆ ತಿಳಿಸಿದರು.
ಮೇಳದ ಮುಖ್ಯ ಸಂಯೋಜಕ ಬಸವರಾಜ್ ಹೊರಪೇಟೆ ಉಪಸ್ಥಿತರಿದ್ದರು.







