ಮಂಜೇಶ್ವರ ತಾಲೂಕು ಕಚೇರಿಗೆ ಮುತ್ತಿಗೆ
ಮಲಯಾಳ ಕಡ್ಡಾಯಕ್ಕೆ ವಿರೋಧ

ಕಾಸರಗೋಡು, ಮೇ 27: ಕೇರಳ ಸರಕಾರದ ಮಲಯಾಳ ಕಡ್ಡಾಯಮಸೂದೆಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ಶನಿವಾರ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿತು. ಮಂಜೇಶ್ವರ ತಾಲೂಕು ಕಚೇರಿಯಲ್ಲಿ ನಡೆದ ಪ್ರತಿಭಟನೆಯನ್ನು ಶಾಸಕ ಪಿ. ಬಿ. ಅಬ್ದುರ್ರಝಾಕ್ ಉದ್ಘಾಟಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಜಿಲ್ಲಾಧ್ಯಕ್ಷ ಟಿ.ಡಿ. ಸದಾಶಿವ ರಾವ್, ಶ್ರೀನಿವಾಸ ರಾವ್ ಬಾಕ್ರಬೈಲ್, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಸೈಫುಲ್ಲಾ ತಂಙಳ್, ಕಯ್ಯಿರು ಚರ್ಚ್ನ ಧರ್ಮಗುರು ವಂ. ವಿಕ್ಟರ್ ಡಿಸೋಜ, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ರಾಮಚಂದ್ರ ಭಟ್ ಧರ್ಮತ್ತಡ್ಕ, ನಾರಾಯಣ ಹೆಗ್ಡೆ, ಮಹೇಶ್, ಮೀನಾರು ಬಾಲಕೃಷ್ಣ ಶೆಟ್ಟಿ, ಹರಿಶ್ಚಂದ್ರ ಮಂಜೇಶ್ವರ, ಸುರೇಶ್ ಶೆಟ್ಟಿ ಪರಂಕಿಲ, ಪ್ರಸಾದ್ ರೈ ಕಯ್ಯಿರು ಉಪಸ್ಥಿತರಿದ್ದರು.
ಮೊದಲು ಉಪ್ಪಳ ಕೈಕಂಬದಿಂದ ಜಾಥಾ ನಡೆಯಿತು.
ಕಾಸರಗೋಡು ತಾಲೂಕು ಕಚೇರಿ ಮುತ್ತಿಗೆಗೆ ಪುರುಷೋತ್ತಮ ಮಾಸ್ಟರ್, ರವೀಶ ತಂತ್ರಿ ಕುಂಟಾರು, ಎಸ್.ವಿ. ಭಟ್, ಸೋಮಶೇಖರ, ವೆಂಟಕರಮಣ ಹೊಳ್ಳ, ಕೇಶವ ಪ್ರಸಾದ್ ನಾಣಿತ್ತಿಲು, ಎಸ್.ಎಲ್. ಭಾರದ್ವಾಜ್, ಶಿವರಾಮ ಕಾಸರಗೋಡು ನೇತೃತ್ವ ವಹಿಸಿದ್ದರು. ಈ ಸಂದರ್ಭ ಕಡ್ಡಾಯ ಮಲಯಾಳ ಅಧ್ಯಾದೇಶದ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ಹಾಕಲಾಗಿತ್ತು.
ಮೇ 31ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಲಿದೆ.
ಜೂನ್ 1ರಂದು ಜಿಲ್ಲೆಯಲ್ಲಿ ಕರಾಳ ದಿನ ಆಚರಿಸಲು ಹೋರಾಟ ಸಮಿತಿ ತೀರ್ಮಾನಿಸಿದೆ.
ಜೂನ್ 8ರಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಚಳವಳಿ ಒಕ್ಕೂಟ ಕಾಸರಗೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಲಿದೆ.







