ಮಾನವ ಹಕ್ಕುಗಳ ರಕ್ಷಣೆಯ ಉದ್ದೇಶ ಸಂಘ-ಸಂಸ್ಥೆಗಳದ್ದಾಗಿರಲಿ: ನಾಡೋಜ ನ್ಯಾ.ಮೂ. ಡಾ. ಎಸ್.ಆರ್. ನಾಯಕ್
ಮಂಗಳೂರು, ಮೇ 28: ಜಗತ್ತಿನ ಪ್ರತಿಯೊಬ್ಬ ಮಾನವನ ಹಕ್ಕುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗಿದ್ದು, ಈ ಹಕ್ಕುಗಳ ರಕ್ಷಣೆಯ ನೈಜ ಉದ್ದೇಶ ಸಂಘ- ಸಂಸ್ಥೆಗಳದ್ದಾಗಿರಲಿ ಎಂದು ನಾಡೋಜ ನ್ಯಾ.ಮೂ. ಡಾ. ಎಸ್.ಆರ್. ನಾಯಕ್ ಅಭಿಪ್ರಾಯಪಟ್ಟರು.
ದ.ಕ. ಜಿಲ್ಲಾ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ಪ್ರತಿಷ್ಠಾನ ಹಳೆಯಂಗಡಿ ಇದರ 2006 ಸಾಧನಾ ಪ್ರಶಸ್ತಿ ವೋಕಾರ್ಡ್ ಫೌಂಡೇಶನ್ ಸಂಸ್ಥೆಯ ಪ್ರತಿಷ್ಠಿತ ಪಾಪ್ಯುಲರ್ ಹ್ಯೂಮನ್ ರೈಟ್ಸ್ ಅವಾರ್ಡ್ 2017ರ ಪುರಸ್ಕೃತರಾದ ಕೊಲ್ಲಾಡಿ ಬಾಲಕೃಷ್ಣ ರೈ ಅವರಿಗೆ ನಗರದ ಡಾನ್ಬಾಸ್ಕೋ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಸಾರ್ವಜನಿಕ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹೋರಾಟದಲ್ಲಿ ಹಲವರು ಜೀವ ತೆತ್ತಿದ್ದು, ಇನ್ನು ಕೆಲವರು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದಾರೆ. ಸುಮಾರು 15-20ವರ್ಷಗಳ ಕಾಲ ಮಾನವ ಹಕ್ಕುಗಳಿಗಾಗಿ ಹೋರಾಡಿ ಅದನ್ನು ರಕ್ಷಣೆ ಮಾಡಿದ ಕೊಲ್ಲಾಡಿ ಬಾಲಕೃಷ್ಣ ರೈಯ ಸೇವೆ ಗುರುತಿಸಿ ಮುಂಬೈನ ವೋಕಾರ್ಡ್ ಫೌಂಡೇಶನ್ ಸಂಸ್ಥೆ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು.
ಮಾನವ ಹಕ್ಕುಗಳ ಹೋರಾಟಗಾರ ಸಂಸ್ಥೆಯ ಯಾವುದೇ ಪದಾಧಿಕಾರಿಗಳು ಜನಪ್ರತಿನಿಧಿಗಳಿಂದ ಸಹಾಯ ಪಡೆಯಬಹುದೇ ವಿನಹಃ ಅವರೊಂದಿಗೆ ಗುರುತಿಸಿಕೊಳ್ಳಬಾರದು. ಕೆಲವು ಮಾನವ ಹಕ್ಕು ಹೋರಾಟಗಾರರ ಕಳಪೆ, ದುಷ್ಟ ಮುಖವನ್ನು ಕೂಡಾ ನಾವು ನೋಡುವಂತಾಗಿದೆ. ಹಿಂದೆ ಸುಮಾರು 2,500 ಸಂಘ-ಸಂಸ್ಥೆಗಳು ಮಾನವ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದವು. ತಾನು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷನಾಗಿದ್ದಾಗ ಒಂದಲ್ಲ ಒಂದು ಪ್ರಕರಣದಲ್ಲಿ ಮುಂದೆ ಬಂದು ತನ್ನನ್ನು ಸಂಪರ್ಕಿಸಬಹುದಿತ್ತು. ಆದರೆ 100ಕ್ಕಿಂತ ಹೆಚ್ಚು ಸಂಘಟನೆಗಳು ಸಕ್ರಿಯವಾಗಿಲ್ಲ. ರಕ್ಷಣೆ, ಶಿಕ್ಷಣ, ಸೂರು ಮುಂತಾದ ಸಮಸ್ಯೆಗಳು ಕರಾವಳಿ ವ್ಯಾಪ್ತಿಗಳಲ್ಲೂ ಕಾಣುತ್ತಿದ್ದು, ಇದನ್ನು ಸರಿಪಡಿಸಲು ಹೋರಾಡಬೇಕು ಎಂದು ಡಾ.ಎಸ್.ಆರ್.ನಾಯಕ್ ಕರೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್ ಮಾತನಾಡಿದರು. ನಾಡೋಜ ಡಾ. ಜಿ. ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಭಿನಂದನೆ ಸ್ವೀಕರಿಸಿದ ಬಳಿಕ ಕೊಲ್ಲಾಡಿ ಬಾಲಕೃಷ್ಣ ರೈ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುದ್ರಾಡಿ ನಾರಾಯಣ ರೈ ಹಾಗೂ ಶಾರದಾ ಎಸ್. ರೈ ಅವರನ್ನು ಸನ್ಮಾನಿಸಲಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮುಂಬೈ, ನೆರೋಲ್ನ ಧರ್ಮಶಾಸ್ತಾ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸಂಜೀವ ಶೆಟ್ಟಿ ಮುಂಬೈ, ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ನಿಕಟ ಪೂರ್ವ ಸದಸ್ಯ ಆದರ್ಶ ಜಿ.ಕೆ. ಬೆಂಗಳೂರು, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೌಂಡರೇಶನ್ನ ಅಧ್ಯಕ್ಷ ಯಶಪಾಲ್ ಸುವರ್ಣ, ಶಿವರಾಜ್ ಅಯ್ಯರ್ ಮತ್ತಿತರರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಹಾಗೂ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.