ಬೆಮಲ್ ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಕೋಲಾರ ಬಂದ್
ಕೋಲಾರ, ಮೇ 30: ಜಿಲ್ಲೆಯ ಕೆಜಿಎಫ್ ನ ಬೆಮಲ್ ಕಾರ್ಖಾನೆಯ ಖಾಸಗೀಕರಣ ವಿರೋಧಿಸಿ ಸಿಐಟಿಯು ನೀಡಿರುವ ಕರೆಯಂತೆ ಇಂದು ಕೋಲಾರ ಜಿಲ್ಲೆಯಲ್ಲಿ ಇಂದು ಬಂದ್ ಆಚರಿಸಲಾಗುತ್ತಿದೆ.
ಜಿಲ್ಲೆಯ ಎಲ್ಲ ಆರು ತಾಲೂಕು ಕೇಂದ್ರಗಳು, ಹೋಬಳಿ ಕೇಂದ್ರಗಳಲ್ಲಿ ಸ್ವಯಂಪ್ರೇರಿತ ಬಂದ್ ಆಗಿದೆ. ಖಾಸಗಿ ಹಾಗೂ ಸಾರಿಗೆ ಬಸ್ಸುಗಳ ಸಂಚಾರವಿಲ್ಲ. ಅಂಗಡಿ ಹೋಟೆಲ್ ಗಳು ಬಂದ್ ಆಗಿವೆ.
ಸಿಐಟಿಯು ಸಂಘಟನೆಯ ಕಾರ್ಯಕರ್ತರು ನೀಡಿರುವ ಈ ಬಂದ್ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ವಿದ್ಯಾರ್ಥಿ ಸಂಘಟನೆಗಳು ಸಹ ಬೆಂಬಲ ವ್ಯಕ್ತ ಪಡಿಸಿವೆ. ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲೂ ಗಲಾಟೆ, ನಡೆಯದಂತೆ ಜಿಲ್ಲಾಧಿಕಾರಿ ಎಚ್ಚರ ವಹಿಸಿದ್ದಾರೆ.
ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ತ್ರಿಲೋಕ ಚಂದ್ರ ಅವರು ರಜೆ ಘೋಷಿಸಿದ್ದಾರೆ. ಸರ್ಕಾರಿ ಕಚೇರಿಗಳು ಸಹ ಬಂದ್ ಆಗಿವೆ.
ಈ ನಡುವೆ ಬಂದ್ ಮಾಹಿತಿ ಇಲ್ಲದೆ ಸಂಚರಿಸಿದ ಕೆಲ ವಾಹನಗಳನ್ನು ಪ್ರತಿಭಟನಾಕಾರರು ತಡೆದು ಎಚ್ಚರಿಕೆ ನೀಡಿದರು.
ರಾತ್ರಿ ಗ್ರಾಮಗಳಲ್ಲಿ ನಿಂತಿದ್ದ ಸಾರಿಗೆ ಹಾಗೂ ಖಾಸಗಿ ಬಸ್ ಗಳನ್ನು ಡಿಪೋಗೆ ಕಳುಹಿಸಲಾಗಿದೆ. ಪ್ರತಿಭಟನಾಕಾರರು ಡಿಪೋ ಬಳಿ ನಿಂತು ಬಸ್ ಸಂಚಾರ ಮಾಡದಂತೆ ತಡೆದರು.