ಬಿಜೆಪಿಯ ರಾಜಕೀಯ ಕುಟಿಲ ನೀತಿ ವಿರೋಧಿಸಿ ಸಿಪಿಐಎಂನಿಂದ ಪ್ರತಿಭಟನೆ
ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲಿ

ಉಳ್ಳಾಲ, ಮೇ 30: ಬಡವರ ಮಕ್ಕಳನ್ನು ಕೋಮುವಾದಿಗಳನ್ನಾಗಿಸಿ, ಈ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ವಹಿಸಿಕೊಂಡ ಜಿಲ್ಲಾ ಸಂಸದರಿಗೆ ಮರ್ಯಾದೆ ಇದ್ದಲ್ಲಿ ಮುಸ್ಲಿಂ ಸಮುದಾಯದವರಲ್ಲಿ ಕ್ಷಮೆಯಾಚಿಸಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ ಆಗ್ರಹಿಸಿದ್ದಾರೆ.
ಅವರು ಸಿಪಿಐಎಂ ಉಳ್ಳಾಲ ವಲಯ ಸಮಿತಿ ತೊಕ್ಕೊಟ್ಟು ಹೊಸ ಬಸ್ ನಿಲ್ದಾಣದ ಬಳಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ದುರುದ್ದೇಶಿತ ಆರೋಪ ಹೊರಿಸಿದ ಬಿಜೆಪಿ ರಾಜಕೀಯ ಕುಟಿಲ ನೀತಿ ವಿರುದ್ಧದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಹೋದರಿಯಿಂದ ಸುಪಾರಿ ಹತ್ಯೆಗೊಳಗಾದ ಕೊಣಾಜೆಯ ಕಾರ್ತಿಕ್ ರಾಜ್ ಹತ್ಯೆ ಪ್ರಕರಣವನ್ನು ಮುಂದಿಟ್ಟು ಒಂದು ಸಮು ದಾಯವನ್ನು ಗುರಿಯಾಗಿಸಿ ಬಿಜೆಪಿ ಅಲ್ಲಲ್ಲಿ ಪ್ರತಿಭಟನೆ ನಡೆಸಿತು. ಇದರ ಫಲವಾಗಿ ಅಲ್ಲಲ್ಲಿ ಮಕ್ಕಳಿಗೆ ಚೂರಿ ಇರಿತ, ಕೊಲೆಯತ್ನ ಪ್ರಕರಣಗಳು ನಡೆದವು. ಇಂತಹ ಪ್ರಕರಣಗಳನ್ನು ಮುಂದಿಟ್ಟು ರಾಜಕೀಯ ನಡೆಸುವ ಸಂಸದರು ಅಧಿಕಾರಕ್ಕೆ ಯೋಗ್ಯರಲ್ಲ. ಅಧಿಕಾರಕ್ಕಾಗಿ ಬಿಜೆಪಿ ಆರಂಭಿಸಿದ ಹಿಂದುತ್ವ ವಾದದ ಹೆಸರಿನ ಕೋಮುವಾದ, ಮುಸ್ಲಿಂ ಕೋಮುವಾದಕ್ಕೆ ಪೂರಕವಾಯಿತು.
ಇಬ್ಬರ ಅಜೆಂಡಾಗಳು ದೇಶಕ್ಕೆ, ಮಾನವೀಯತೆಗೆ, ಸತ್ಯಕ್ಕೆ ವಿರುದ್ಧವಾಗಿರುವುದು. ಜನರ ಬದುಕು ಅನ್ನುವ ಅರ್ಥದಲ್ಲಿ ಇರುವಂತಹ ರಾಜಕೀಯ ಇಂತಹವರಿಂದ ಬದುಕನ್ನು ಕಸಿಯುವ ವಿಷಯವಾಗಿದೆ. ದೇಶವನ್ನು ಕ್ರಿಮಿನಲ್ ಹಿನ್ನೆಲೆಯುಳ್ಳವರು ಆಳುತ್ತಿದ್ದರೆ, ಉಳ್ಳಾಲ ಕ್ಷೇತ್ರದಲ್ಲಿಯೂ ಅಧಿಕಾರ ಪಡೆಯುವ ಸಲುವಾಗಿ ಕೋಮುಗಲಭೆಗಳನ್ನು ಸೃಷ್ಟಿಸಲೆಂದೇ ಇಂತಹ ಪ್ರಚೋದನಕಾರಿ ಸನ್ನಿವೇಶಗಳನ್ನು ಜವಾಬ್ದಾರಿಯುತರು ನಿರ್ಮಿಸುತ್ತಿದ್ದಾರೆ ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರ್ಯ ಮಾತನಾಡಿ ಕ್ಲಲಡ್ಕದಲ್ಲಿ ಮಸೀದಿಯಿಂದ ವಾಪಸಾಗುತ್ತಿದ್ದ ಯುವಕನಿಗೆ ಚೂರಿಯಿಂದ ಇರಿದ ಪ್ರಕರಣ ನಡೆದರೆ, ಹಿಂದೂತ್ವ ವಾದಿಗಳ ಮುಖಂಡ ಕಲ್ಲಡ್ಕ ಭಟ್ ಸುದ್ಧಿಗೋಷ್ಠಿಯಲ್ಲಿ ಆತ್ಮರಕ್ಷಣೆ ಸಲುವಾಗಿ ಚೂರಿ ಹಾಕಿದ್ದೇವೆ ಅನ್ನುವುದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ಹೊಂದಿರುವಂತಹ ಬಿಜೆಪಿಗೆ ಜನರು ಬೆಂಬಲಿಸುತ್ತಿರುವುದು ದುರಂತ. ಈಶಾನ್ಯ ರಾಜ್ಯಗಳಲ್ಲಿ ದಲಿತರ, ಬಡವರ ಆಹಾರವೇ ಜಾನುವಾರು ಮಾಂಸವಾಗಿದೆ. ಇದನ್ನೇ ಧಾರ್ಮಿಕ ವಿಚಾರವನ್ನಾಗಿ ಪರಿವರ್ತಿಸಿದ ಪ್ರಧಾನಿ ಮೋದಿ ದನವನ್ನು ಕೊಲ್ಲುವುದೇ ಅಪರಾಧ ಎಂದು ಘೋಷಿಸುವ ಮೂಲಕ ಸರ್ವಾಧಿಕಾರವನ್ನು ಮುಂದುವರಿಸಿದ್ದಾರೆ. ವಾರದಲ್ಲಿ ಪ್ರಧಾನಿ ನಡೆಸುವುದು ‘ಮನ್ ಕಿ ಬಾತ್’ ಅಲ್ಲ ಅದು ಮಂಗನ ಮಾತು ಎಂಬ ಅರ್ಥದಲ್ಲಿದೆ. ಇದೀಗ ಔಷಧಿ ಅಂಗಡಿ ಹಾಗೂ ಹೊಟೇಲ್ ಮಾಲೀಕರ ಮೇಲೆ ದಾಳಿ ನಡೆಸಿರುವ ಕೇಂದ್ರ ಸರಕಾರ ಆನ್ ಲೈನ್ ಮೂಲಕವೇ ಔಷಧಿ ನೀಡುವಂತೆ ಹಾಗೂ ಹೊಟೇಲುಗಳಿಗೆ ಅಧಿಕ ತೆರಿಗೆ ಜಾರಿಗೊಳಿಸುವ ಮೂಲಕ ಅವರ ಹೊಟ್ಟೆಗೆ ಕಲ್ಲು ಹಾಕಲು ಮುಂದಾಗಿರುವುದು ಖಂಡನೀಯ ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರ್ಯ, ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಸಿಪಿಐಎಂ ಜಿಲ್ಲಾ ಸದಸ್ಯೆ ಪದ್ಮಾವತಿ. ಯಸ್.ಶೆಟ್ಟಿ, ಉಳ್ಳಾಲ ವಲಯ ಸಮಿತಿ ಸದಸ್ಯರಾದ ಬಾಬು ಪಿಲಾರ್, ದುಗ್ಗಪ್ಪ ಪಾವೂರು, ಮಹಾಬಲ.ಟಿ.ದೆಪ್ಪೆಲಿಮಾರು, ಯು.ಜಯಂತ್ ನಾಯ್ಕೆ ಮೊದಲಾದವರು ಉಪಸ್ಥಿತರಿದ್ದರು.







