ನೀರಿನ ಅನುದಾನದ ಸದ್ಬಳಕೆ ವರದಿ ನೀಡಿ: ಪ್ರಮೋದ್ ಮಧ್ವರಾಜ್
ತ್ರೈಮಾಸಿಕ ಕೆಡಿಪಿ; ನರೇಗಾದಲ್ಲಿ ತೆರೆದ ಬಾವಿ, ಹಟ್ಟಿಗೆ ಆದ್ಯತೆ ನೀಡಲು ಕರೆ

ಉಡುಪಿ,ಮೇ 30: ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ತೆಗೆದುಕೊಂಡಿರುವ ಕ್ರಮ, ಕಾರ್ಯಪಡೆ ಹಾಗೂ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಯೋಜನೆ (ಎನ್ಆರ್ಡಿಡಬ್ಲುಪಿ)ಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಮೂರು ತಿಂಗಳೊಳಗೆ ಮುಗಿಸಿ, ವರದಿ ನೀಡದಿದ್ದರೆ ಕಠಿಣ ಕ್ರಮ ಜರಗಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಮೀನುಗಾರಿಕೆ, ಯುವಜನಸೇವೆ ಹಾಗೂ ಕ್ರೀಡಾ ಸಚಿವರ ಅಧ್ಯಕ್ಷತೆ ಯಲ್ಲಿ ಇಂದು ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು ನೀರು ಸರಬರಾಜಿಗೆ ಸಂಬಂಧಿಸಿದಂತೆ ಮತ್ತೊಂದು ಪ್ರತ್ಯೇಕ ಸಭೆ ನಡೆಸಿ ಯೋಜನೆಯ ಅನುಷ್ಠಾನಕ್ಕೆ ಬಳಕೆಯಾದ ಅನುದಾನದ ಬಗ್ಗೆ ಸಮಗ್ರ ರಿಶೀಲನೆ ನಡೆಸುವುದಾಗಿ ತಿಳಿಸಿದರು.
ನೀರಿನ ಕೊರತೆ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ಜಿಲ್ಲೆಯ ಅಲ್ಲಲ್ಲಿ ನೀರಿನ ಕೊರತೆ ಬಗ್ಗೆ ವರದಿಯಾಗುತ್ತಿದೆ. ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನ ನೀಡಿದ್ದರೂ ಸದ್ಬಳಕೆಯಾಗದಿರುವ ಬಗ್ಗೆ ಸಚಿವರು ಕಾರ್ಯನಿರ್ವಾಹಕ ಇಂಜಿನಿಯರ್ ಬಳಿ ಕಾರಣವನ್ನು ಕೇಳಿದರು.
ತೆರೆದ ಬಾವಿಗೆ ಆದ್ಯತೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಸಚಿವರು, ನಿರೀಕ್ಷಿತ ಫಲಿತಾಂಶ ತೋರದ ಇಲಾಖೆಗಳನ್ನು ತರಾಟೆಗೆ ತೆಗೆದು ಕೊಂಡರು.
ನರೇಗಾ ಯೋಜನೆಯಲ್ಲಿ ವೈಯಕ್ತಿಕವಾಗಿ ನೀಡಲಾಗುವ ತೆರೆದ ಬಾವಿ ಹಾಗೂ ಕೊಟ್ಟಿಗೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದರು. ತೆರೆದ ಬಾವಿಗೆ 82,000ರೂ.ವರೆಗೆ ಹಾಗೂ ಕೊಟ್ಟಿಗೆ ನಿರ್ಮಾಣಕ್ಕೆ 42,000 ರೂ. ವರೆಗೆ ಖರ್ಚು ಮಾಡಲು ಅವಕಾಶವಿದ್ದು ಇದಕ್ಕಾಗಿ ಕ್ರಮವಾಗಿ ನಾಲ್ಕು ಹಾಗೂ ಎರಡು ಜಾಬ್ ಕಾರ್ಡ್ ಮಾಡಿದರೆ ಸಾಕಾಗುತ್ತದೆ. ಹೀಗಾಗಿ ಜನರಿಗೆ ಈ ವಿಷಯವನ್ನು ಮನದಟ್ಟು ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಆರ್ಟಿಇ ಸೀಟು: ಆರ್ಟಿಇನಲ್ಲಿ ಜಿಲ್ಲೆಯಲ್ಲಿ ಒಟ್ಟು 1351 ಸೀಟುಗಳು ಲಭ್ಯವಿದ್ದು, ಮೊದಲ ಹಂತದಲ್ಲಿ 695 ದಾಖಲಾಗಿವೆ. ಎರಡನೇ ಹಂತದಲ್ಲಿ 130 ಸೀಟುಗಳನ್ನು ತುಂಬಲಾಗಿದ್ದು, ಇನ್ನೂ ಸಹ 400 ಸೀಟುಗಳು ಬಾಕಿ ಇವೆ. ಮೂರನೇ ಹಂತದಲ್ಲಿ ಈ ಸೀಟುಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ವಿವರಿಸಿದರು.
ಆರ್ಟಿಇ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ನೋ ಸ್ಕೂಲ್ ವಿಲೇಜ್ ಉಡುಪಿಯಲ್ಲಿ 3 ಇದ್ದು, ಮಕ್ಕಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸಚಿವರು ಹೇಳಿದರು. ಮೂರನೇ ಸುತ್ತಿನಲ್ಲೂ ಆರ್ಟಿಇ ಸೀಟುಗಳು ತುಂಬ ದಿದ್ದರೆ ಸರಕಾರದ ಮಾರ್ಗದರ್ಶನದಂತೆ ನಡೆದುಕೊಳ್ಳುವುದಾಗಿ ಡಿಡಿಪಿಐ ಹೇಳಿದರು. ಎಲ್ಲಾ ಮಕ್ಕಳಿಗೆ ಶೂವನ್ನೇ ಖರೀದಿಸಿ ನೀಡುವಂತೆಯೂ ಯಾರಿಗೂ ಚಪ್ಪಲ್ ನೀಡದಂತೆ ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು.
ವಾರಾಹಿ ಚರ್ಚೆ: ಸಭೆಯಲ್ಲಿ ವಾರಾಹಿ ನೀರಾವರಿ ಯೋಜನೆಯ ಕುರಿತಂತೆ ಚರ್ಚೆ ನಡೆಯಿತು. ವಾರಾಹಿ ಯೋಜನೆಯ ಸದ್ಬಳಕೆ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಜನೋಪಕಾರಿ ಯೋಜನೆಯಾಗಿ ಪರಿವರ್ತಿಸುವುದಕ್ಕಾಗಿ ಪ್ರತ್ಯೇಕ ಸಭೆಯೊಂದನ್ನು ಕರೆಯುವಂತೆ ಎಂಎಲ್ಸಿ ಪ್ರತಾಪ್ಚಂದ್ರ ಶೆಟ್ಟಿ ಜಿಲ್ಲಾ ಉಸ್ತೂವಾರಿ ಸಚಿವರಿಗೆ ಸಲಹೆ ನೀಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಅವರ ನಿರ್ಲಕ್ಷ ಗಳಿಂದಾಗುತ್ತಿರುವ ಅಪಘಾತಗಳಿಗೆ ಸಂಬಂಧಿಸಿದಂತೆ ಹೆದ್ದಾರಿ ಪ್ರಾಧಿಕಾರದ ವಿುದ್ಧ ದೂರು ದಾಖಲಿಸಲು ತಿಳಿಸಿದರು.
ಮೀನುಗಾರ ಮಹಿಳೆಯರಿಗೆ ಶೇ. 2ರ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಸಹಕಾರ ಅಗತ್ಯ. ಆದರೆ ಮೀನುಗಾರ ಮಹಿಳೆಯರಿಂದ ಈ ಬಗ್ಗೆ ದೂರುಗಳು ಬರುತ್ತಿದ್ದು, ಲೀಡ್ ಬ್ಯಾಂಕ್ ಮ್ಯಾನೇಜರ್ ಸೂಕ್ತ ಕ್ರಮಕೈಗೊಳ್ಳಬೇಕು ಎಂದ ಸಚಿವರು, ಈ ಸಂಬಂಧವಾಗಿ ಪ್ರತ್ಯೇಕ ಸಭೆ ಕರೆದು ಚರ್ಚಿಸುವ ಸೂಚನೆ ನೀಡಿದರು.
ಮೀನುಗಾರ ಮಹಿಳೆಯರಿಗೆ ಶೇ. 2ರ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಸಹಕಾರ ಅಗತ್ಯ. ಆದರೆ ಮೀನುಗಾರ ಮಹಿಳೆಯರಿಂದ ಈ ಬಗ್ಗೆ ದೂರುಗಳು ಬರುತ್ತಿದ್ದು, ಲೀಡ್ ಬ್ಯಾಂಕ್ ಮ್ಯಾನೇಜರ್ ಸೂಕ್ತ ಕ್ರಮಕೈಗೊಳ್ಳಬೇಕು ಎಂದ ಸಚಿವರು, ಈ ಸಂಬಂವಾಗಿಪ್ರತ್ಯೇಕಸೆ ಕರೆದು ಚರ್ಚಿಸುವ ಸೂಚನೆ ನೀಡಿದರು. ಜಿಲ್ಲಾಸ್ಪತ್ರೆ ಆವರಣ, ಕಿನ್ನಿಮುಲ್ಕಿ, ಕುಂದಾಪುರ ದಲ್ಲಿ ಜನರಿಕ್ ಔಷಧಿಗಳು ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರೋಹಿಣಿ ಮಾಹಿತಿ ನೀಡಿದರು.
ಬಿಪಿಎಲ್ ಕಾರ್ಡ್ಗೆ ಹೊಸದಾಗಿ 5,490 ಅರ್ಜಿಗಳು ಬಂದಿವೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಸದಾಶಿವ ತಿಳಿಸಿದರು. ಜಿಲ್ಲೆಯಲ್ಲಿ ಕೃಷಿ ಇಲಾಖೆ ಮಳೆಗಾಲದ ಬೆಳೆಗೆ ಸಜ್ಜಾಗಿದ್ದು, ರೈತಸಂಪರ್ಕ ಕೇಂದ್ರಗಳಲ್ಲಿ ಬೀಜಗಳು ಲ್ಯವಿದೆ. ಗೊಬ್ಬರ, ಬೀಜಗಳಿಗೂ ಕೊರತೆ ಇಲ್ಲ ಎಂದು ಕೃಷಿ ಜಂಟಿ ನಿರ್ದೇಶಕರು ಹೇಳಿದರು. ಉಡುಪಿಗೆ 910 ಕ್ವಿಂಟಾಲ್, ಕುಂದಾಪುರಕ್ಕೆ 665 ಕ್ವಿಂಟಾಲ್, ಕಾರ್ಕಳಕ್ಕೆ 100 ಕ್ವಿಂಟಾಲ್ ಬೀಜ ಲಭ್ಯವಿದೆ ಎಂದು ವಿವರಿಸಿದರು.
ಕೃಷಿ ಯಂತ್ರ ಬಾಡಿಗೆಯನ್ನು ಗ್ರಾಪಂ ಮಟ್ಟದಲ್ಲಿ ಆರಂಭಿಸಿದರೆ ಕೃಷಿಕರಿಗೆ ನೆರವಾಗಲಿದೆ ಎಂದು ಪ್ರತಾಪ್ಚಂದ್ರ ಶೆಟ್ಟಿ ಹೇಳಿದರು. ಈಗಾಗಲೇ 7 ಹೋಬಳಿಗಳಲ್ಲಿ 9 ಕೃಷಿ ಯಂತ್ರೋಪಕರಣ ಬಾಡಿಗೆ ಕೇಂದ್ರಗಳನ್ನು ನಡೆಸಲಾ ಗುತ್ತಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯಡಿ ಕಳೆದ ಸಾಲಿನಲ್ಲಿ 49 ಟ್ಯಾಕ್ಸಿ ವಿತರಿಸಲಾಗಿದೆ. ಈ ಸಾಲಿನಲ್ಲಿಯೂ ಗುರಿ ಸಾಧನೆ ಮಾಡಲಾಗಿದೆ. 751 ಶಾಲಾ ಮಕ್ಕಳಿಗೆ ಕರ್ನಾಟಕ ದರ್ಶನ ಮಾಡಿಸಲಾಗಿದೆ ಎಂದು ಇಲಾಖೆಯ ಅಧಿಕಾರಿ ಹೇಳಿದರು. ಮಲ್ಪೆ ಪಡುಕೆರೆಯನ್ನು ಟೂರಿಸ್ಟ್ ಹಬ್ ತರಹ ರೂಪಿಸಿ ಎಂದು ಸಚಿವರು ಸೂಚಿಸಿದರು.
ಸ್ವಚ್ಛ ಭಾರತ ಅಭಿಯಾನದಡಿ ಶೇ. 89 ಸಾಧನೆ ದಾಖಲಾಗಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶೇ 94 ಸಾಧನೆಯಾಗಿದೆ. ಘನತ್ಯಾಜ್ಯ ವಿಲೇ ಜಿಲ್ಲೆಗೆ ಸವಾಲಾಗಿದ್ದು, ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಎಂದು ಪ್ರಮೋದ್ ಹೇಳಿದರು. ಶಾಲೆ, ಅಂಗನವಾಡಿ, ಗ್ರಾಪಂ ಗಳಲ್ಲಿ ತ್ಯಾಜ್ಯ ವಿಲೇ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಒ ವಿವರಿಸಿದರು.
ಪ್ಲಾಸ್ಟಿಕ್ ನಿಷೇಧ ಎಲ್ಲಿಯವರೆಗೆ ಬಂತು ಎಂಬ ಸಚಿವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಗ್ರಾಮ ವಿಕಾಸ ಯೋಜನೆಯಡಿ, ಸುವರ್ಣಗ್ರಾಮ ಯೋಜನೆಯಡಿ ಹತ್ತು ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದ್ದು ಅಕ್ಟೋಬರ್ ಒಳಗೆ ಗುರಿ ಸಾಧಿಸಿ ಎಂದು ಸಚಿವರು ಹೇಳಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಾಸಕ ರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್ ಕುಮಾರ್, ವಿಧಾನಪರಿಷತ್ ಸದಸ್ಯರಾದ ಪ್ರತಾಪ್ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾನಾಗ್, ಎಸ್ಪಿ ಕೆ.ಟಿ. ಬಾಲಕೃಷ್ಣ ಉಪಸ್ಥಿತರಿದ್ದರು.
ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು.
ಬಿಸಿಯೂಟಕ್ಕೆ ನೀರು ನೀಡಿ
ಬೇಸಿಗೆ ರಜೆ ಕಳೆದು ಶಾಲೆಗಳು ಪುನರಾರಂಭಗೊಂಡಿವೆ. ಶಾಲೆಗಳಲ್ಲಿ ಇರುವ ನೀರಿನ ಸಮಸ್ಯೆ, ಬಿಸಿಯೂಟ ತಯಾರಿಗೆ ನೀರಿನ ಲಭ್ಯತೆ ಕುರಿತು ಸಚಿರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಶಾಲೆಗಳಲ್ಲಿ ನೀರಿಲ್ಲದ ಕಡೆ ಗ್ರಾಪಂನಿಂದ ನೀರು ಪಡೆಯಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು. ಶಾಲೆಗೆ ಬಂದ ಮಕ್ಕಳಿಗೆ ಬಿಸಿಯೂಟಕ್ಕೆ ನೀರು ನೀಡಲು ಕ್ರಮಕೈಗೊಳ್ಳಿ ಎಂದು ಸಚಿವರು ನಿರ್ದೇಶನ ನೀಡಿದರಲ್ಲದೆ, ಡಿಡಿಪಿಐ ಇವುಗಳ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.
ಕ್ರೀಡಾ ಹಾಸ್ಟೆಲ್ಗಳು ಜೂನ್ ಮೂರರಿಂದ ಆರಂಭವಾಗಲಿವೆ. ಉಡುಪಿ ಯ ಕ್ರೀಡಾ ಹಾಸ್ಟೆಲ್ ರಾಜ್ಯದ ಅತ್ಯುತ್ತಮ ಹಾಸ್ಟೆಲ್ ಎನಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಪರಿಸ್ಥಿತಿ ಹೇಗಿದೆ ಎಂದ ಸಚಿವರು, ಜಿಲ್ಲಾಧಿಕಾರಿಗಳು ರಾತ್ರಿ ಹಾಸ್ಟೆಲ್ಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸುವಂತೆ ತಿಳಿಸಿದರು.







