ಪಕ್ಷದ ಶಿಸ್ತಿನ ಸಿಪಾಯಿಯಾಗಿ ಗೃಹ ಖಾತೆಗೆ ರಾಜೀನಾಮೆ : ಡಾ. ಜಿ.ಪರಮೇಶ್ವರ್

ಬೆಂಗಳೂರು, ಜೂ.1: ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಹೈಕಮಾಂಡ್ ನನ್ನನ್ನೇ ಮುಂದುವರಿಸಿದೆ.ಹೈಕಮಾಂಡ್ ಸೂಚನೆಯಂತೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಗೃಹ ಖಾತೆಗೆ ರಾಜೀನಾಮೆ ನೀಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಒಂದು ವರ್ಷ ಏಳು ತಿಂಗಳು ಗೃಹ ಖಾತೆ ನಿಭಾಯಿಸಿದ್ದೇನೆ. ಅತ್ಯಂತ ಜವಾಬ್ದಾರಿಯುತ ಗೃಹಖಾತೆಯನ್ನು ನಿರ್ವಹಿಸಲು ನನಗೆ ಸಹಕಾರ ನೀಡಿದ ಸಿಬ್ಬಂದಿಗೆ ಅಭಾರಿಯಾಗಿದ್ದೇನೆ ಎಂದು ಪರಮೇಶ್ವರ ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಿಂದ ಬಂದ ಬಳಿಕ ಅವರಿಗೆ ರಾಜೀನಾಮೆ ಪತ್ರ ನೀಡುತ್ತೇನೆ. ವರಿಷ್ಠರ ಸೂಚನೆಯಂತೆ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಾಗಿ ಪರಮೇಶ್ವರ ತಿಳಿಸಿದರು.
ಪಕ್ಷದ ವರಿಷ್ಠರು ಪಕ್ಷದ ಜವಾಬ್ದಾರಿಯನ್ನು ಎಲ್ಲರಿಗೂ ಹಂಚಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಅವಧಿ ಪೂರ್ಣಗೊಂಡ ಬಳಿಕವೇ ಚುನಾವಣೆ ನಡೆದರೆ ಒಳ್ಳೆಯದು. ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ನಿರ್ಧರಿಸಲಿದೆ. ಚುನಾವಣಾ ಆಯೋಗ ನಿರ್ಧರಿಸಿದ ದಿನಾಂಕಕ್ಕೆ ಚುನಾವಣೆ ಎದುರಿಸಲು ನಾವು ಸಿದ್ದ "ಎಂದು ಹೇಳಿದರು.
"ಚುನಾವಣೆ ಹತ್ತಿರ ಬಂದ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿದೆ. ಮಂದೆ ಮುಖ್ಯ ಮಂತ್ರಿ ಯಾರೆಂಬ ಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಪರಮೇಶ್ವರ್ ಅವರು ಸದ್ಯ ಚುನಾವಣೆಯನ್ನು ಎದುರಿಸುವುದು ನಮ್ಮ ಗುರಿ. ಅದು ಮುಗಿದ ಬಳಿಕ ಸಿಎಂ ಆಯ್ಕೆ ವಿಚಾರ ನೋಡೋಣ '' ಎಂದರು.







