ಬಿಪಿಎಲ್ ಕಾರ್ಡ್ಗಾಗಿ ಕಾಯುತ್ತಿರುವ 11 ಲಕ್ಷ ಅರ್ಜಿದಾರರು
ಹೊಸ ನಿಯಮಾವಳಿಗಾಗಿ ಬದಲಾದ ಸಾಫ್ಟ್ವೇರ್; ಪ್ರಾಯೋಗಿಕಕ್ಕೆ ‘ಕಾರವಾರ ನಗರ ಮತ್ತು ಜಗನೂರು ಗ್ರಾಮ’ ಆಯ್ಕೆ

ಮಂಗಳೂರು, ಜೂ.2: ಸರಕಾರ ಪಡಿತರ ಚೀಟಿ ಪಡೆಯಲು ರೂಪಿಸಿದ ನಿಯಮಾವಳಿಗಳನ್ನು ಪದೇ ಪದೇ ಬದಲಾಯಿಸಿದ ಕಾರಣ ರಾಜ್ಯದಲ್ಲಿ ಸುಮಾರು 11 ಲಕ್ಷ ಅರ್ಜಿದಾರರು ಪಡಿತರ ಚೀಟಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಹೊಸ ನಿಯಮಾವಳಿಯ ಹಿನ್ನೆಲೆಯಲ್ಲಿ ಸಾಫ್ಟ್ವೇರ್ ಕೂಡ ಬದಲಾಗಿದೆ. ಈ ಮಧ್ಯೆ ಪ್ರಾಯೋಗಿಕವಾಗಿ ಚೆಕ್ ಲೀಸ್ಟ್ ಪಡೆದು ಹೊಸ ಪಡಿತರ ಚೀಟಿ ಹಂಚಲು ಕಾರವಾರ ನಗರ ಮತ್ತು ಜಗನೂರು ಗ್ರಾಮವನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗಲೇ ಪಡಿತರ ಚೀಟಿಯ ಗೊಂದಲ ಶುರುವಾಗಿತ್ತು. ಆ ಬಳಿಕ ಬಂದ ಕಾಂಗ್ರೆಸ್ ಸರಕಾರಕ್ಕೆ ಈ ಗೊಂದಲ ಹೊರೆಯಾಗಿ ಪರಿಣಮಿಸಿತು. ಅದನ್ನು ಸರಳೀಕರಿಸುವ ಭರಾಟೆಯಲ್ಲಿ ರೂಪಿಸಲಾದ 14 ನಿಯಮಾವಳಿ ಕೂಡ ಜನ ಸಾಮಾನ್ಯರಿಗೆ ಮತ್ತೆ ಹೊರೆಯಾಯಿತು. ತದ ನಂತರ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಯು.ಟಿ. ಖಾದರ್ ಹಳೆಯ ನಿಯಮದ ಪೈಕಿ ಕೆಲವನ್ನು ಮಾತ್ರ ಉಳಿಸಿಕೊಂಡರು. ಅಂದರೆ ಬಿಪಿಎಲ್ ಕಾರ್ಡ್ ಪಡೆಯಲು 7 ಎಕರೆ ಜಮೀನು ಹೊಂದಿರಬಾರದು, 4 ಚಕ್ರದ ಸ್ವಂತ ವಾಹನ ಹೊಂದಿರಬಾರದು, 1.20 ಲಕ್ಷ ರೂ. ಗಿಂತ ಅಧಿಕ ಆದಾಯ ಹೊಂದಿರಬಾರದು (ಆದಾಯ ಮಿತಿಯನ್ನು ಸ್ವಯಂ ಘೋಷಿಸಿದರೆ ಸಾಕು) ಸರಕಾರಿ ನೌಕರನಾಗಿರಬಾರದು, ವಿದ್ಯುತ್ ಬಿಲ್ 450 ರೂ. ಗಿಂತ ಜಾಸ್ತಿ ಇರಬಾರದು.
ಇದರಿಂದ ಸಾವಿರಾರು ಮಂದಿ ಬಿಪಿಎಲ್ ಕಾರ್ಡ್ ಕಳಕೊಂಡು ಎಪಿಎಲ್ ಕಾರ್ಡ್ದಾರರಾದರು. ಇದೀಗ ವಿದ್ಯುತ್ ಬಿಲ್ ಅಥವಾ ವಿದ್ಯುತ್ ಯುನಿಟ್ ಮಿತಿಯನ್ನು ಕೂಡ ಕೈ ಬಿಡಲಾಗಿದೆ. ಇದರಿಂದ ಎಪಿಎಲ್ಗೆ ಭಡ್ತಿ ಪಡೆದವರು ಮತ್ತೆ ಬಿಪಿಎಲ್ಗೆ ಹಿಂಭಡ್ತಿ ಪಡೆಯಲಿದ್ದಾರೆ. ಇದರಿಂದ ಬಿಪಿಎಲ್ ಪಡಿತರ ಚೀಟಿದಾರರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದಾರೆ.
ರಾಜ್ಯದಲ್ಲಿ ಕಳೆದ ಐದಾರು ತಿಂಗಳಿನಿಂದ ಸುಮಾರು 11 ಲಕ್ಷ ಮಂದಿ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಕಂದಾಯ ಮತ್ತು ಆರ್ಡಿಆರ್ಆರ್ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ) ಇಲಾಖೆಯೊಳಗೆ ಸಂವಹನದ ಕೊರತೆಯಿಂದ ಪರಿಶೀಲನೆಯ ಸಮಸ್ಯೆ ಶುರುವಾಗಿದೆ. ಅಂದರೆ ಅರ್ಜಿಯನ್ನು ಪರಿಶೀಲಿಸುವ ಹೊಣೆಯನ್ನು ಆರಂಭದಲ್ಲಿ ಪಿಡಿಒ (ಗ್ರಾಮಾಭಿವೃದ್ಧಿ ಅಧಿಕಾರಿ)ಗೆ ವಹಿಸಲಾಗಿತ್ತು. ಅವರು ಈ ಹೊಣೆಯನ್ನು ನಿಭಾಯಿಸಲು ನಿರಾಕರಿಸಿದ ಕಾರಣ ಗ್ರಾಮಕರಣಿರಿಗೆ ವಹಿಸಲಾಯಿತು. ಅಂದರೆ ಅರ್ಜಿದಾರರ ಮನೆಗೆ ಭೇಟಿ ನೀಡಿ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರೇ ಎಂದು ಪರಿಶೀಲಿಸಬೇಕಿತ್ತು. ಆದರೆ ಪಿಡಿಒಗಳಂತೆ ವಿಎಗಳೂ ಕೂಡ ಪರಿಶೀಲನೆಯ ಜವಾಬ್ದಾರಿ ವಹಿಸಲು ನಿರಾಕರಿಸಿದ್ದರಿಂದ ಮತ್ತು ಈ ಮಧ್ಯೆ ಕೂಪನ್ ವ್ಯವಸ್ಥೆಯನ್ನೂ ಜಾರಿಗೊಳಿಸಿದ್ದರಿಂದ ಗೊಂದಲ ಮತ್ತೆ ಮುಂದುವರಿಯಿತು. ಸಮಸ್ಯೆ ಮತ್ತಷ್ಟು ವೃದ್ಧಿಸಿತು.
ಇವೆಲ್ಲದರ ಮಧ್ಯೆ ಅರ್ಜಿ ಸಲ್ಲಿಸಿ 2 ವಾರದೊಳಗೆ ಪಡಿತರ ಚೀಟಿ ಮನೆ ಬಾಗಿಲಿಗೆ ಬರಲಿದೆ. ಅದಕ್ಕೂ ಮುನ್ನ ಅರ್ಜಿದಾರರು ಸ್ವಯಂ ಆದಾಯ ಘೋಷಣೆ ಮಾಡಿದರೂ ಸಾಕು ಎಂದು ತಿಳಿಸಲಾಯಿತು. ಆದರೆ ಎರಡು ವಾರ ಅಲ್ಲ, ಎರಡು ತಿಂಗಳಾದರೂ ಅರ್ಜಿದಾರರ ಕೈಗೆ ಪಡಿತರ ಚೀಟಿ ಸಿಗಲಿಲ್ಲ. ಇದಕ್ಕೆ ಎಲ್ಲೆಡೆ ಸಾಫ್ಟ್ವೇರ್ ದೋಷವೇ ಕಾರಣವಾಗಿದೆ. ಈ ದೋಷವನ್ನು ಪರಿಪಡಿಸದೆ ಚೆಕ್ ಲೀಸ್ಟ್ ಪಡೆಯಲು ಸಾಧ್ಯವಾಗುತ್ತಿಲ್ಲ.
ಇದೀಗ ಸಚಿವ ಯು.ಟಿ.ಖಾದರ್ ಈ ವಿಳಂಬ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾಫ್ಟ್ವೇರ್ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ. ಅಂದರೆ ಪ್ರಾಯೋಗಿಕವಾಗಿ ರಾಜ್ಯದ ಕಾರವಾರ ನಗರ ಮತ್ತು ಜಗನೂರು ಗ್ರಾಮವನ್ನು ಪೈಲಟ್ ಮಾದರಿಯಲ್ಲಿ ಪಡಿತರ ಚೀಟಿ ವಿತರಿಸಲು ಕ್ರಮ ಜರಗಿಸಿದ್ದಾರೆ. ಆ ಬಳಿಕ ರಾಜ್ಯದ ಎಲ್ಲರಿಗೂ ಪಡಿತರ ಚೀಟಿ ವಿತರಿಸಲು ಮುಂದಾಗಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಸದ್ಯ 1,92,994 ಬಿಪಿಎಲ್ ಮತ್ತು 47,382 ಎಪಿಎಲ್ ಕಾರ್ಡ್ದಾರರಿದ್ದಾರೆ. 2003-04ರಲ್ಲಿ ಕೇಂದ್ರ ಸರಕಾರವು ಅಂತ್ಯೋದಯ ಕಾರ್ಡ್ ನೀಡುವ ಪ್ರಕ್ರಿಯೆ ಆರಂಭಿಸಿತ್ತು. ಅದರಂತೆ ಜಿಲ್ಲೆಯಲ್ಲಿ 23,757 ಅಂತ್ಯೋದಯ ಕಾರ್ಡ್ದಾರರಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಚಿತ ಅಕ್ಕಿ ವಿತರಿಸಲು ಮುಂದಾದ ಬಳಿಕ ಅಂತ್ಯೋದಯ ಕಾರ್ಡ್ ವಿತರಣೆಗೆ ಬ್ರೇಕ್ ಬಿದ್ದಿದೆ. ಈ ಕಾರ್ಡ್ ಪಡೆಯಲು ಅರ್ಹರಿರುವವರೂ ಕೂಡ ಬಿಪಿಎಲ್ ಕಾರ್ಡ್ ವ್ಯಾಪ್ತಿಯೊಳಗೆ ಬರತೊಡಗಿದ್ದಾರೆ.
ತನ್ಮಧ್ಯೆ ದ.ಕ.ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ಗಾಗಿ 14,938 ಮಂದಿ ಹೊಸ ಅರ್ಜಿ ಸಲ್ಲಿಸಿದ್ದು, ಕೇವಲ 461 ಮಂದಿಗೆ ಮಾತ್ರ ಕಾರ್ಡ್ ಲಭಿಸಿದೆ. ಉಳಿದಂತೆ ಸುಮಾರು 14,477 ಮಂದಿಗೆ ಇನ್ನೂ ಕಾರ್ಡ್ ಲಭಿಸಿಲ್ಲ. ಸಾಫ್ಟ್ವೇರ್ ದೋಷ ಸರಿಯಾದಲ್ಲಿ ಶೀಘ್ರ ಎಲ್ಲರಿಗೂ ಬಿಪಿಎಲ್ ಕಾರ್ಡ್ ಲಭಿಸಲಿದೆ.
ಇನ್ನು ಜಿಲ್ಲೆಯಲ್ಲಿ 6,952 ಮಂದಿ ಎಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ 6,091 ಮಂದಿ ಸ್ವಯಂ ಆಗಿ ಆನ್ಲೈನ್ ಮೂಲಕ ತಾತ್ಕಾಲಿಕ ಪಡಿತರ ಚೀಟಿ ಪಡೆದಿದ್ದಾರೆ. ಉಳಿದಂತೆ 861 ಮಂದಿ ಮದ್ರಿತ ಕಾರ್ಡ್ಗಾಗಿ ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ಕಳೆದ 6 ತಿಂಗಳಿನಿಂದ ಹೊಸ ಪಡಿತರ ಚೀಟಿಗಾಗಿ ಜಿಲ್ಲೆಯಲ್ಲಿ 14,477 ಮಂದಿಯ ಸಹಿತ ರಾಜ್ಯದಲ್ಲಿ ಸುಮಾರು 11 ಲಕ್ಷ ಅರ್ಜಿದಾರರು ಬಿಪಿಎಲ್ ಪಡಿತರ ಚೀಟಿಗಾಗಿ ಕಾಯುತ್ತಿದ್ದಾರೆ.
ಹೊಸ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವಾಗಿದೆ ನಿಜ. ಅರ್ಹರಿಗೆ ಪಡಿತರ ಸಾಮಗ್ರಿ ಲಭಿಸಬೇಕು ಎಂಬ ಉದ್ದೇಶದಿಂದ ನಿಯಮಗಳ ರಚನೆ ಮತ್ತು ಬದಲಾವಣೆ ಮಾಡುವುದು ಕೂಡ ಅನಿವಾರ್ಯವಾಯಿತು. ಇದೀಗ ಸಾಫ್ಟ್ವೇರ್ ಸಮಸ್ಯೆಯನ್ನು ಬಗೆಹರಿಸಿ ಹೊಸ ಪಡಿತರ ಚೀಟಿ ವಿತರಿಸಲು ಇಲಾಖೆ ಕ್ರಮ ಕೈಗೊಂಡಿದೆ. ಆರಂಭಿಕ ಹಂತದಲ್ಲಿ ಕಾರವಾರ ಸಿಟಿ ಮತ್ತು ಜಗನೂರು ಗ್ರಾಮವನ್ನು ಪೈಲಟ್ ಮಾದರಿಯಲ್ಲಿ ಆಯ್ಕೆ ಮಾಡಿಕೊಂಡು ಪಡಿತರ ಚೀಟಿ ವಿತರಿಸಲು ನಿರ್ಧರಿಸಿದೆ. ಆ ಬಳಿಕ ರಾಜ್ಯಾದ್ಯಂತ ಎಲ್ಲರಿಗೂ ವಿತರಿಸಲಾಗುವುದು.
ಯು.ಟಿ.ಖಾದರ್
ಸಚಿವರು, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ತಾಂತ್ರಿಕ ಸಮಸ್ಯೆಯಿಂದ ವಿತರಣೆಯಲ್ಲಿ ವಿಳಂಬವಾಗಿದೆ. ಅರ್ಜಿ ಸಲ್ಲಿಸಿದವರು ಯಾವ ಕಾರಣಕ್ಕೂ ನಿರಾಶರಾಗಬೇಕಿಲ್ಲ. ಪರಿಶೀಲನೆಯ ಬಳಿಕ ಎಲ್ಲರಿಗೂ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
- ಜಯಪ್ಪ, ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಪಡಿತರ ಚೀಟಿ ವಿತರಣೆ ಗೊಂದಲದಿಂದ ಜನಸಾಮಾನ್ಯರ ಪ್ರಶ್ನೆಗೆ ಉತ್ತರಿಸಲು ಜನಪ್ರತಿನಿಧಿಗಳಾದಂತಹ ನಮಗೆ ಕಷ್ಟವಾಗುತ್ತದೆ. ಐಎಎಸ್ ಅಧಿಕಾರಿಗಳ ಹೊಸ ಹೊಸ ನಿಯಮ ರೂಪಿಸುವುದರಿಂದ ಸಮಸ್ಯೆ ಬಿಗಡಾಯಿಸುತ್ತಿದೆ. ಪರಿಶೀಲನೆಯ ಜವಾಬ್ದಾರಿಯನ್ನು ಗ್ರಾಮಕರಣಿಕರಿಗೇ ನೀಡಬೇಕು. ಪಿಡಿಒಗಳನ್ನು ಇದರಿಂದ ಮುಕ್ತಗೊಳಿಸಬೇಕು. ಇನ್ನು ಸಾಫ್ಟ್ವೇರ್ ದೋಷ ಕೂಡ ಈ ಎಲ್ಲ ಸಮಸ್ಯೆ, ಗೊಂದಲಕ್ಕೆ ಮೂಲ ಕಾರಣವಾಗಿದೆ. ಇದರ ಶಾಶ್ವತ ಪರಿಹಾರಕ್ಕೂ ಕ್ರಮ ಜರಗಿಸುವ ಅನಿವಾರ್ಯ ಇದೆ.
ಹಮೀದ್ ಕಿನ್ಯ
ಮಾಜಿ ಉಪಾಧ್ಯಕ್ಷರು, ಕಿನ್ಯ ಗ್ರಾಪಂ ಮಂಗಳೂರು







